ಬಾಗಲಕೋಟೆ: ಪ್ರಸಿದ್ಧ ಬನಶಂಕರಿ ಜಾತ್ರೆ, ರಥೋತ್ಸವ ರದ್ದು
ಬಾಗಲಕೋಟೆ, ಡಿಸೆಂಬರ್ 1: ರಾಜ್ಯ ಹಾಗೂ ದೇಶದಲ್ಲಿ ಕೊರೊನಾ ಮಾಹಾಮಾರಿ ವಕ್ಕರಿಸಿರುವ ಹಿನ್ನೆಲೆಯಲ್ಲಿ ನಾಡಿನ ಒಂಬತ್ತು ಶಕ್ತಿ ದೇವತೆಗಳಲ್ಲಿ ಒಂದಾಗಿರುವ ಬನಶಂಕರಿ ದೇವಿ ಜಾತ್ರೆ ಹಾಗೂ ರಥೋತ್ಸವವನ್ನು ರದ್ದುಗೊಳಿಸಲಾಗಿದೆ.
ಬಾಗಲಕೋಟೆಯಿಂದ ಬಾಂಗ್ಲಾಗೆ ಮೆಕ್ಕೆಜೋಳ ರಫ್ತು
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಬನಶಂಕರಿ ಜಾತ್ರೆಯು ಬರೋಬ್ಬರಿ ಒಂದು ತಿಂಗಳ ಕಾಲ ಹಗಲು-ರಾತ್ರಿ ನಡೆಯುತ್ತಿತ್ತು. ಆದರೆ ಕೊರೊನಾ ಸೋಂಕಿನ ಕಾರಣದಿಂದಾಗಿ ರಥೋತ್ಸವವನ್ನು ಜಿಲ್ಲಾಡಳಿತ ರದ್ದು ಮಾಡಿದೆ.
ಬಾದಾಮಿಯಲ್ಲಿ ನಡೆದ ತಾಲ್ಲೂಕು ಆಡಳಿತ ಹಾಗೂ ದೇವಸ್ಥಾನ ಟ್ರಸ್ಟ್ ಸದಸ್ಯರ ಸಭೆಯಲ್ಲಿ ಜಾತ್ರೆ ರದ್ದು ತೀರ್ಮಾನ ತೆಗೆದುಕೊಳ್ಳಾಲಾಯಿತು. ಜಾತ್ರಾ ದಿನಗಳಂದು ದೇವಸ್ಥಾನದ ಒಳಗಡೆ ಕೇವಲ ಪೂಜಾ ಕೈಂಕರ್ಯ ಮಾತ್ರ ನಡೆಯಲಿದೆ ಎಂದು ಬನಶಂಕರಿ ದೇವಸ್ಥಾನ ಟ್ರಸ್ಟ್ ಮಾಹಿತಿ ನೀಡಿದೆ.
ಪ್ರಸಿದ್ಧ ಬನಶಂಕರಿ ಜಾತ್ರೆ ಹಾಗೂ ರಥೋತ್ಸವಕ್ಕೆ ಸುಮಾರು ಅಕ್ಕಪಕ್ಕದ ಜಿಲ್ಲೆಗಳಿಂದ ಐದು ಲಕ್ಷಕ್ಕೂ ಬಂದು ಹೋಗುತ್ತಿದ್ದರು. ಈ ಬಾರಿ 2021ರ ಜನವರಿ 28 ರಂದು ರಥೋತ್ಸವ ನಡೆಯಬೇಕಿತ್ತು. ಆದರೆ ಬಾಗಲಕೋಟೆ ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿ ಬನಶಂಕರಿ ಜಾತ್ರೆ ರದ್ದು ಮಾಡಲು ದೇವಸ್ಥಾನದ ಟ್ರಸ್ಟ್ ಸದಸ್ಯರು ಒಪ್ಪಿಗೆ ನೀಡಿದ್ದಾರೆ.