ಬಾಗಲಕೋಟೆ; ಮುದ್ದಿನ ನಾಯಿಗೆ ಮನೆಯಲ್ಲಿ ಸೀಮಂತ ಕಾರ್ಯ
ಬಾಗಲಕೋಟೆ, ಜೂನ್ 24: ತಮ್ಮ ಮುದ್ದಾದ ನಾಯಿಗೆ ಕಲಾವಿದೆಯೊಬ್ಬರು ಸೀಮಂತ ಕಾರ್ಯ ಆಯೋಜನೆ ಮಾಡಿದ್ದರು. ಸಾಂಪ್ರದಾಯಿಕ ವಿಧಿವಿಧಾನದಂತೆ ಈ ಕಾರ್ಯಕ್ರಮ ನಡೆದಿದೆ.
ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದ ನಾಟಕ ಕಲಾವಿದೆ ಜ್ಯೋತಿ ಗುಳೇದಗುಡ್ಡ ತಮ್ಮ ಮುದ್ದಾದ ನಾಯಿಗೆ ಸೀಮಂತ ಮಾಡಿದ್ದಾರೆ. ಎರಡು ವರ್ಷದ ಹಿಂದೆ ಪಿಂಕು, ಚಿಂಕು ಎಂಬ ಎರಡು ಜೂಲು ನಾಯಿಯನ್ನು ಸಾಕ್ಕಿದ್ದು ಇದರಲ್ಲಿ ಚಿಂಕು ಗಂಡು ಮತ್ತು ಪಿಂಕು ಹೆಣ್ಣು ನಾಯಿಯಾಗಿದೆ.
ಟಗರು ಸಾಕಾಣಿಕೆ; ಬಾಗಲಕೋಟೆ ರೈತನ ಯಶಸ್ಸಿನ ಕಥೆ
ಎರಡು ಶ್ವಾನಗಳನ್ನು ಮುದ್ದಾಗಿ ಸಾಕಿದ್ದಾರೆ. ಈಗ ಪಿಂಕು ಗರ್ಭಿಣಿಯಾದಾಗಿದ್ದು, ಕಳೆದ ಎಂಟು ದಿನಗಳ ಹಿಂದೆ ಎಲ್ಲ ಕುಟುಂಬಸ್ಥರು ಸೇರಿ ಸಂಭ್ರಮದಿಂದ ಅದಕ್ಕೆ ಸೀಮಂತ ಕಾರ್ಯ ಮಾಡಿದ್ದಾರೆ.
ಬಾಗಲಕೋಟೆ: ಮೂಲಭೂತ ಸೌಕರ್ಯಗಳಿಲ್ಲದೇ ಸೊರಗಿದ ವಾಜಪೇಯಿ ಕಾಲೋನಿ
ಮುದ್ದಾದ ಆರೋಗ್ಯವಂತ ಶ್ವಾನ ಹುಟ್ಟಲಿ: ಜ್ಯೋತಿ
"ನಮ್ಮ ನಾಡಲ್ಲಿ ಸಾಮಾನ್ಯವಾಗಿ ಒಂದಿಲ್ಲ ಒಂದು ಸಂಪ್ರದಾಯಗಳ ಆಚರಣೆಗಳು ಇದ್ದೇ ಇರುತ್ತದೆ. ಒಂದೊಂದು ಸಂಪ್ರದಾಯ ಮತ್ತು ಆಚರಣೆಗಳು ತನ್ನದೇ ಆದ ವಿಶಿಷ್ಟ ಅರ್ಥವಿರುತ್ತದೆ. ಒಬ್ಬ ಮನುಷ್ಯ ಬದುಕಿನಲ್ಲಿ ಮದುವೆ, ಸೀಮಂತ ನಾಮಕರಣದಂತಹ ಪ್ರಮುಖ ಘಟ್ಟಗಳನ್ನು ನಾವು ಕಾಣಬಹುದು. ಮಹಿಳೆಯರು ಗರ್ಭಿಣಿಯಾದಾಗ ವಿಶೇಷವಾಗಿ ಸೀಮಂತ ಹಬ್ಬವನ್ನು ಮಾಡುತ್ತಾರೆ. ಬಂಧು ಬಳಗ, ಆಪ್ತರು ಎಲ್ಲರೂ ಸೇರಿ ಗರ್ಭಿಣಿಗೆ ಸೀಮಂತ ಮಾಡಿ ಸಂಭ್ರಮಿಸುತ್ತಾರೆ. ಹಣ್ಣುಹಂಪಲು ಇಟ್ಟು, ಸೀರೆ ಉಡಿಸಿ, ಅಲಂಕಾರ ಮಾಡಿ ಮಗುವಿಗೆ ಸ್ವಾಗತ ಕೋರುತ್ತಾರೆ. ನಮ್ಮ ಪಿಂಕು ಶ್ವಾನಕ್ಕೆ ಮುದ್ದಾದ ಆರೋಗ್ಯವಂತ ಮರಿಗಳು ಹುಟ್ಟಲಿ" ಎಂದು ಜ್ಯೋತಿ ಹೇಳಿದ್ದು, ಇದಕ್ಕಾಗಿ ಸೀಮಂತ ಮಾಡಿದ್ದಾರೆ.
ಶ್ವಾನಕ್ಕೆ ಬಳೆ, ಹಣೆಗೆ ಕುಂಕುಮ
ಗರ್ಭಿಣಿಗೆ ಸೀಮಂತ ಮಾಡುವಾಗ ನಡೆಸುವ ಸಂಪ್ರದಾಯದಂತೆ ನಾಯಿಗೂ ಸೀಮಂತ ಮಾಡಲಾಗಿದೆ. ಹೊಸ ಸೀರೆ ಉಡಿಸಿ, ಹಣ್ಣುಹಂಪಲುಗಳನ್ನು ಇಟ್ಟು ಯಾವ ರೀತಿ ಅವರಿಗೆ ಸಿಂಗಾರವನ್ನು ಮಾಡಿ ಸೀಮಂತವನ್ನು ಆಚರಿಸುತ್ತಾರೋ ಅದೇ ರೀತಿಯಲ್ಲಿ ಮುದ್ದಾದ ನಾಯಿಗೂ ಕೂಡ ಹಣೆಗೆ ಕುಂಕುಮವನ್ನು ಹಚ್ಚಿ, ಕೈಗೆ ಬಳೆ ತೊಡಿಸಿ ಸಾಂಪ್ರದಾಯಿಕವಾಗಿ ಶ್ರೀಮಂತ ಕಾರ್ಯವನ್ನು ಮಾಡಲಾಗಿದೆ.
ಸೀಮಂತ ಕಾರ್ಯಕ್ರಮಕ್ಕಾಗಿಯೇ ವಿಶೇಷ ತಿಂಡಿಗಳನ್ನು ಮಾಡಿದ್ದಾರೆ. ಜೊತೆಗೆ ಅಕ್ಕಪಕ್ಕದ ಎಲ್ಲಾ ಮಹಿಳೆಯರನ್ನು ಕರೆದು ಶ್ವಾನಕ್ಕೆ ಆರತಿ ಮಾಡಿದ್ದಾರೆ. ಶ್ವಾನವನ್ನು ಕುರ್ಚಿ ಮೇಲೆ ಕೂರಿಸಿ ಅದಕ್ಕೆ ಸೆಕೆ ಆಗಬಾರದು ಅಂತ ಮುಂದೆ ಫ್ಯಾನ್ ಹಾಕಿ ಆರೈಕೆ ಮಾಡಲಾಗಿದೆ. ನಾಲ್ಕು ದಿನಗಳ ಹಿಂದೆ ಪಿಂಕು ಆರು ಮರಿಗಳಿಗೆ ಜನ್ಮ ನೀಡಿದೆ, ಎಲ್ಲ ನಾಯಿಮರಿಗಳು ಆರೋಗ್ಯವಾಗಿದ್ದು ಇವರ ಮನೆಯಲ್ಲಿ ಮತ್ತಷ್ಟು ಸಂಭ್ರಮ ಮನೆ ಮಾಡಿದೆ.
ಎಲ್ಲರ ಗಮನ ಸೆಳೆದಿದೆ ಸೀಮಂತ ಕಾರ್ಯಕ್ರಮ
"ಕಳೆದ ಎರಡು ವರ್ಷದ ಹಿಂದೆ ಪಿಂಕು ಹಾಗೂ ಚಿಂಕು ಎಂಬ ನಾಯಿಗಳನ್ನು ಖರೀದಿ ಮಾಡಿದೆವು. ನಮ್ಮ ಮನೆಯಲ್ಲಿ ಈಗ ಪಿಂಕು ಮುದ್ದಾದ ಮರಿಗಳಿಗೆ ಜನ್ಮ ನೀಡಿದ್ದು ನಮ್ಮ ಮನೆಯಲ್ಲಿ ಇದೇ ಮೊದಲ ಬಾರಿಗೆ ನಾಯಿ ಮರಿ ಜನ್ಮ ನೀಡಿದೆ. ನಮಗೆ ತುಂಬಾ ಖುಷಿಯಾಗಿದೆ. ನಾವು ಈ ನಾಯಿಗಳನ್ನು ಯಾವುದೇ ಕಾರಣಕ್ಕೂ ನಾಯಿ ಅಂತ ನೋಡಲಿಲ್ಲ ನಮ್ಮ ಮನೆಯ ಮಕ್ಕಳಂತೆ ತುಂಬಾ ಮುದ್ದಾಗಿ ಸಾಕಿದ್ದೇವೆ. ಪಿಂಕು ಗರ್ಭಿಣಿಯಾದಾಗ ಸೀಮಂತ ಮಾಡಬೇಕು ಅಂತ ವಿಚಾರಿಸಿ ಮನೆಯಲ್ಲಿ ಎಲ್ಲರೂ ಜೊತೆ ಚರ್ಚೆ ಮಾಡಿ ಅದಕ್ಕೆ ಸೀಮಂತ ಮಾಡಿದ್ದೇವೆ ಮತ್ತು ಎಲ್ಲರನ್ನೂ ಕರೆದು ಎಲ್ಲ ಸಾಂಪ್ರದಾಯಕವಾಗಿ ಯಾವ ರೀತಿ ಸೀಮಂತ ಕಾರ್ಯ ಮಾಡುತ್ತಾರೆ ಅದೇ ರೀತಿ ಸೀಮಂತ ಕಾರ್ಯ ಮಾಡಿ ಮುಗಿಸಿದ್ದೇವೆ. ಎಲ್ಲರೂ ನಾವು ಮಾಡಿದ ಕಾರ್ಯಕ್ಕೆ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿ ಸೀಮಂತ ಕಾರ್ಯದಲ್ಲಿ ಭಾಗಿಯಾಗಿದ್ದರು. ನಮಗೂ ಬಹಳ ಸಂತಸವಾಗಿದೆ" ಎಂದು ಹೇಳಿದ್ದಾರೆ.
ನಾಟಕ ಕಲಾವಿದೆ ಕುಟುಂಬದ ಕಾರ್ಯ ಶ್ಲಾಘನೀಯ
ಇನ್ನು ಶ್ವಾನದ ಸೀಮಂತ ಎಂದ ಕೂಡಲೇ ಅಕ್ಕಪಕ್ಕದವರು ಬರಲು ಮುಜುಗುರ ಆದರೂ ಸಹ ಸಾಕು ಪ್ರಾಣಿಯಲ್ಲಿ ಮಾನವೀಯತೆ ಮರೆದಿರುವುದು ಜ್ಯೋತಿ ಗುಳೇದಗುಡ್ಡ ಕುಟುಂಬದವರ ದೊಡ್ಡಗುಣ. ಹಾಗಾಗಿ ನಾವೆಲ್ಲರೂ ಬಂದು ಅವರ ಮನೆಯ ಮುದ್ದಿನ ಪಿಂಕುಗೆ ಹರಸಿ ಹಾರೈಸಿದ್ದೇವೆ ಎನ್ನುವುದು ಆಪ್ತರ ಮಾತುಗಳು.
ಒಟ್ಟಿನಲ್ಲಿ ಮುದ್ದಾದ ಶ್ವಾನಕ್ಕೆ ಸೀಮಂತ ಮಾಡಿಸುವ ಮೂಲಕ ಕಲಾವಿದೆ ಶ್ವಾನ ಪ್ರೀತಿ ಮೆರೆದಿದ್ದಾರೆ. ಇವರ ಶ್ವಾನ ಪ್ರೀತಿ ಸೀಮಂತ ಕಾರ್ಯ ಸದ್ಯ ಎಲ್ಲರ ಮೆಚ್ಚುಗೆ ಗಳಿಸಿದೆ. ಮಾನವೀಯತೆಯನ್ನು ಮರೆಯುತ್ತಿರುವ ಈ ಕಾಲದಲ್ಲಿ ಸಾಕುಪ್ರಾಣಿಗೆ ಅಕ್ಕರೆ, ಮಮಕಾರ ತೋರಿಸಿದ ನಾಟಕ ಕಲಾವಿದೆ ಕುಟುಂಬದ ಕಾರ್ಯ ಶ್ಲಾಘನೀಯ.
Recommended Video