ಬನಶಂಕರಿ ಜಾತ್ರೆಯಲ್ಲಿ ದೇಸಿ ನಾಟಕಗಳ ಕ್ರೇಜ್
ಬದಾಮಿ, ಜನವರಿ 22: ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಶ್ರೀ ಬನಶಂಕರಿ ದೇವಿಯ ಜಾತ್ರೆ ಉತ್ತರ ಕರ್ನಾಟಕದಲ್ಲಿಯೇ ದೊಡ್ಡ ಜಾತ್ರೆ. ಪ್ರತಿ ವರ್ಷ ಜನವರಿಯಲ್ಲಿ ನಡೆಯುವ ಈ ಐತಿಹಾಸಿಕ ಬನಶಂಕರಿ ದೇವಿಯ ಜಾತ್ರೆಯಲ್ಲಿ ದೇವಿಯ ಭಕ್ತಿಯ ಜೊತೆ ಜೊತೆಗೆ ಮನರಂಜನೆಗೂ ಆದ್ಯತೆ ಇರುತ್ತದೆ.
ಐತಿಹಾಸಿಕ ಬನಶಂಕರಿ ಜಾತ್ರೆಯಲ್ಲಿ ಈ ಬಾರಿ ನಾಟಕಗಳ ದರ್ಬಾರು ಜೋರಾಗಿ ನಡೆಯುತ್ತಿದೆ, ಜಾತ್ರೆಯಲ್ಲಿ ಎತ್ತ ನೋಡಿದರೂ ನಾಟಕಗಳದ್ದೇ ಬ್ಯಾನರ್. ಇಷ್ಟು ದಿನ ಚಲನಚಿತ್ರಗಳ ಹಾವಳಿಯಿಂದ ಕಳೆಗುಂದಿದ್ದ ನಾಟಕ ಕಂಪನಿಗಳು ಈ ಬಾರಿ ಜಾತ್ರೆಯಲ್ಲಿ ದೊಡ್ಡ ಸದ್ದು ಮಾಡ್ತಿವೆ. ಜಾತ್ರೆಗೆ ಬಂದವರ ಬಾಯಲ್ಲಿ ನಾಟಕಗಳ ಹಾಸ್ಯ ಚಟಾಕಿಗಳು, ಡೈಲಾಗ್ಗಳದ್ದೇ ಕಾರುಬಾರಾಗಿದೆ.
ಈ ಬಾರಿಯ ನಾಟಕಗಳು ಪ್ರೇಕ್ಷಕರಿಗೆ ಹಾಸ್ಯದ ರಸದೌತಣ ನೀಡುತ್ತಿವೆ. ಸುಮಾರು ಹತ್ತಕ್ಕೂ ಹೆಚ್ಚು ನಾಟಕಗಳು ಪ್ರತಿದಿನ ನಾಲ್ಕು ಆಟಗಳನ್ನು ಪ್ರದರ್ಶನ ಮಾಡಿ ಪ್ರೇಕ್ಷಕರನ್ನು ರಂಜಿಸುತ್ತಿವೆ.
ದೇವಿಯ ಜಾತ್ರೆ ಬರೋಬ್ಬರಿ ಒಂದು ತಿಂಗಳಕ್ಕೂ ಹೆಚ್ಚು ನಡೆಯುವುದರಿಂದ ಇಲ್ಲಿ ಮನರಂಜನೆಗೆನೂ ಕೊರತೆ ಇಲ್ಲ. ಕಳೆದ ವರ್ಷ 'ಸೆರೆದ ಅಂಗಡಿ ಸಂಗವ್ವ' ನಾಟಕವನ್ನಾಡಿ ಭರ್ಜರಿ ಕಲೆಕ್ಷನ್ ಮಾಡಿದ್ದ ಗುಬ್ಬಿ ನಾಟಕ ಕಂಪನಿಯವರು ಈ ಬಾರಿ 'ನಗಿಸಿ ನಗಸಿ ಅಳಸ್ತಾಳ' ಎನ್ನುವ ಮತ್ತೊಂದು ಹೊಸ ನಾಟಕ ತಂದಿದ್ದಾರೆ.
ಚಡ್ಡಿ ಚಿಲಿಕ್ಯಾ, ಮಡ್ಡಿ ಮಲ್ಲಿಕ್ಯಾ, ಮಿಲ್ಟ್ರಿ ಮಾವ, ಕಂತ್ರಿ ಅಳಿಯ, ಇದ್ದಾಗ ಬರ್ತಾರ, ಬಿದ್ದಾಗ ನಗ್ತಾರ, ಸೇರಿದಂತೆ ಸುಮಾರು ಹತ್ತು ನಾಟಕಗಳು ಜನರನ್ನು ರಂಜಿಸುತ್ತಿವೆ. ಭರ್ಜರಿ ಕಲೆಕ್ಷನ್ ಸಹ ಮಾಡುತ್ತಿವೆ.
ಬನಶಂಕರಿ ದೇವಿ ಜಾತ್ರೆ ಅಂದ್ರೆ ನಾಟಕಗಳನ್ನ ಪೋಷಿಸಿಕೊಂಡು ಬರ್ತಿರೋ ತವರೂರು ಇದ್ದಂತೆ ಅಂತ ಹೆಸರಾಂತ ನಟ ರಾಜು ತಾಳಿಕೋಟಿಯವರು ಬಣ್ಣಿಸುತ್ತಾರೆ. ಒಟ್ಟಿನಲ್ಲಿ ದೇವಿಯ ದರ್ಶನದ ಜೊತೆ ಜೊತೆಗೆ ಇಲ್ಲಿ ಮನರಂಜನೆಗೂ ಕೊರತೆ ಇಲ್ಲ.