ಬಾಗಲಕೋಟೆ: ಈ ಊರಿನ ದೇವರಿಗೆ ಮದ್ಯವೇ ನೈವೇದ್ಯ,ತೀರ್ಥ-ಪ್ರಸಾದವೂ ಸಾರಾಯಿ
ಬಾಗಲಕೋಟೆ ಜುಲೈ 1: ದೇವರಿಗೆ ಹಣ್ಣು ಕಾಯಿ, ಪಂಚಾಮೃತ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ನೈವೇದ್ಯ ಅರ್ಪಿಸುತ್ತಾರೆ. ಇದಕ್ಕೆ ಪ್ರತಿಯಾಗಿ ದೇವಾಲಯದಲ್ಲಿ ತೆಂಗಿನ ಹಾಲು, ಶುದ್ದ ನೀರು ತೀರ್ಥ ಅಂತ ಕೊಡ್ತಾರೆ.
ಆದರೆ ಇಲ್ಲೊಂದು ದೇವಸ್ಥಾನದಲ್ಲಿ ಮಾತ್ರ ಮದ್ಯವೇ ದೇವರಿಗೆ ನೈವೇದ್ಯ, ಸಾರಾಯಿ ತೀರ್ಥವೇ ಭಕ್ತರಿಗೆ ಪ್ರಸಾದ. ಅಲ್ಲಿಗೆ ಬಂದರೆ ದೇವರ ಮುಂದೆ ವೆರೈಟಿ ವೆರೈಟಿ ಸಾರಾಯಿ ಬಾಟಲ್ಗಳು ಕಂಡು ಬರುತ್ತವೆ. ದೇವಸ್ಥಾನದ ಮುಂದೆ ಕಳ್ಳಬಟ್ಟಿ ಸಾರಾಯಿ ಸಾಗರವೇ ಕಂಡು ಬರುತ್ತದೆ.
Video; ತಲೆಗೆ ತೆಂಗಿನಕಾಯಿ ಒಡೆದುಕೊಳ್ಳುವ ಬಾಗಲಕೋಟೆ ವಿಶೇಷ ಜಾತ್ರೆ
ಹೂಗಳಿಂದ ಅಲಂಕಾರಗೊಂಡು ಕಂಗೊಳಿಸುತ್ತಿರುವ ಲಕ್ಷ್ಮಿರಂಗನಾಥ ದೇವರು. ಚಿಕ್ಕ ದೇವಸ್ಥಾನದಲ್ಲಿ ಕನಕರಾಯನ ಪೂಜೆ ನಡೆಯುತ್ತಿದ್ದರೆ, ಎರಡು ಸಹೋದರ ಮುಂದೆ ಇರುವ ವೆರೈಟಿ ವೆರೈಟಿ ಮದ್ಯದ ಬಾಟಲ್, ಕಳ್ಳಬಟ್ಟಿ ಸಾರಾಯಿ ಪ್ಯಾಕೆಟ್ ಗಮನ ಸೆಳೆಯುತ್ತವೆ. ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲ್ಲೂಕಿನ ನಿಂಗಾಪುರ ಹಾಗೂ ಕೆಲವಡಿ ಗ್ರಾಮದ ಲಕ್ಷ್ಮಿ ರಂಗನಾಥ ದೇವಸ್ಥಾನದಕ್ಕೆ ಭೇಟಿ ನೀಡಿದರೆ ಈ ದೃಶ್ಯಗಳು ಕಂಡುಬರುತ್ತವೆ.
ಈ ಸ್ಥಳದಲ್ಲಿ ನಿಂಗಾಪುರ ಗ್ರಾಮದ ಕನಕರಾಯ ಹಾಗೂ ಕೆಲವಡಿ ಗ್ರಾಮದ ರಂಗನಾಥ ಇಬ್ಬರು ಸಹೋದರರಂತೆ. ಇಬ್ಬರಿಗೂ ಸಾರಾಯಿ ನೈವೇದ್ಯ ಮಾಡೋದು ಇಲ್ಲಿನ ಪದ್ದತಿ. ದೇವಸ್ಥಾನದಲ್ಲಿ ಪ್ರತಿ ವರ್ಷ ಹೋಳಿ ಹುಣ್ಣೆಮೆಯ ಬಳಿಕ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಬರುವ ಭಕ್ತರು ತಮ್ಮ ಹರಕೆ ತೀರಿಸಲು ದೇವರಿಗೆ ಮದ್ಯದ ನೈವೇದ್ಯ ಮಾಡಿಸಿ, ತೀರ್ಥ ಸೇವನೆ ಮಾಡುವುದು ವಿಶೇಷ.
5 ವರ್ಷಗಳಿಗೊಮ್ಮೆ ಕನ್ಯೆಯರಿಗೆ ಕಾಲ್ತೊಳೆಯುವ ಹಬ್ಬ
ಹೊರ ರಾಜ್ಯಗಳಿಂದಲೂ ಭಕ್ತರ ಆಗಮನ
ಅಂದಾಜು 600 ವರ್ಷಗಳ ಇತಿಹಾಸ ಇರುವ ಕನಕರಾಯ ಹಾಗೂ ಲಕ್ಷ್ಮೀ ರಂಗನಾಥ ದೇವಸ್ಥಾನದ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ತಮ್ಮ ಹರಕೆ ತೀರಿಸಲು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮದ್ಯದ ಬಾಟಲಿ ತಂದು ಪೂಜೆ ಮಾಡಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಮೊದಲು ಕನಕರಾಯ ದೇವರಿಗೆ ಒಂದು ದಿನ ಮುಂಚೆ ಸಾರಾಯಿ ನೈವೇದ್ಯ ಅರ್ಪಿಸಲಾಗುತ್ತದೆ. ಕನಕರಾಯ ದೇವರಿಗೆ ಹೆಚ್ಚಿನ ಪ್ರಮಾಣದಲ್ಲಿ ಕಳ್ಳಬಟ್ಟಿ ಸಾರಾಯಿಯನ್ನೇ ಭಕ್ತರು ನೈವೇದ್ಯ ಮಾಡುತ್ತಾರೆ. ಕನಕರಾಯ ದೇವಸ್ಥಾನದ ಮುಂದೆ ಸಾಲು ಸಾಲಾಗಿ ಕಳ್ಳಬಟ್ಟಿಯನ್ನು ನೈವೇದ್ಯಕ್ಕೆ ಮಾರಾಟ ಮಾಡುತ್ತಾರೆ. ನೈವೇದ್ಯ ಮಾಡಿ ಕೆಲ ಭಕ್ತರು ತೀರ್ಥ ಅಂತ ಅಲ್ಲೇ ಸೇವಿಸುತ್ತಾರೆ.
ಹರಕೆ ತೀರಿಸಲು ಮದ್ಯ ಕಾಣಿಕೆ
ಇನ್ನೂ ದೇವರಿಗೆ ಎಣ್ಣೆ ಕಾಣಿಕೆ ಸಲ್ಲಿಸುವುದು ಅಂತ ಜನರು ಹೇಳಿದರೂ ದೇವಸ್ಥಾನದ ಭಕ್ತರು ಮಾತ್ರ ಅದು ತೀರ್ಥ ಎಂದೇ ಕರೆಯುತ್ತಾರೆ. ಹೀಗೆ ದೇವರಿಗೆ ತಮ್ಮ ಬೇಡಿಕೆ ಈಡೇರಿಸಿದರೆ ಇಂತಿಷ್ಟು ಮದ್ಯದ ಕಾಣಿಕೆ ಸಲ್ಲಿಸುವುದಾಗಿ ಹರಕೆ ಹೊತ್ತಿರುತ್ತಾರಂತೆ. ಅದರಂತೆ ಜಾತ್ರೆಯ ಸಮಯಕ್ಕೆ ಬಂದು ಮದ್ಯವನ್ನು ಕಾಣಿಕೆ ನೀಡಿ ತೀರ್ಥ ಸೇವನೆ ಮಾಡಿ ಹೋಗುತ್ತಾರೆ. ಕೆಲವರು ಹರಕೆ ತೀರಿಸೋಕೆ ಅಂತ ಮದ್ಯ ನೈವೇದ್ಯ ಅರ್ಪಿಸಿದರೆ ಕೆಲವರು ಹರಕೆ ಹೊರದಿದ್ದರೂ ಸಾಮಾನ್ಯವಾಗಿ ಎಲ್ಲ ನೈವೇದ್ಯದ ಜೊತೆಗೆ ಸಾರಾಯಿ ನೈವೇದ್ಯ ಅರ್ಪಿಸುತ್ತಾರೆ. ಇದರಿಂದ ತಮಗೆ ಒಳ್ಳೆಯದು ಆಗುತ್ತೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.
ಆಚರಣೆಯಿಂದಿದೆ ವಿಶೇಷ ಕಥೆ
ಇಲ್ಲಿ ಜಾತ್ರೆ ಬಂತೆಂದರೆ ಸಾಕು ದೇವಸ್ಥಾನದ ಆವರಣ, ಗರ್ಭಗುಡಿ ಎಲ್ಲೆಂದರಲ್ಲಿ ಮದ್ಯ ಬಾಟಲಿಗಳೇ ರಾರಾಜಿಸುತ್ತವೆ. ಶತಶತಮಾನಗಳಿಂದ ನಡೆದು ಬಂದಿರುವ ಈ ಪದ್ಧತಿ ಈಗಲೂ ಮುಂದುವರೆದುಕೊಂಡು ಬಂದಿದೆ. ಇದಕ್ಕೆ ಕಾರಣ ಹಿಂದೆ ಈ ಭಾಗದಲ್ಲಿ ಬರ ಬಿದ್ದು ಜನರಿಗೆ ಕುಡಿಯೋದಕ್ಕೂ ನೀರಿಲ್ಲದೆ ಪರಿತಪಿಸುವಂತಾಗಿತ್ತಂತೆ. ಆಗ ಲಕ್ಷ್ಮಿರಂಗನಾಥ ದೇವರು ಮನುಜನ ರೂಪ ತಾಳಿ ಈ ಭಾಗಕ್ಕೆ ಬಂದು ಹಣ್ಣಿನ ರಸವನ್ನು ನೀರು ಮಾಡಿ ಬಾಯಾರಿಕೆ ನೀಗಿಸಲು ಜನರಿಗೆ ನೀಡಿದರಂತೆ. ನಂತರ ಇದನ್ನು ತಿಳಿದ ಜನರು ದೇವರು ನಮಗೆ ಕೊಟ್ಟಿದ್ದು ಹಣ್ಣಿನ ರಸ, ಅಂದರೆ ಅದು ಸೋಮರಸ. ಅಂದಿನಿಂದ ಹಣ್ಣಿನ ರಸಕ್ಕೆ ಪ್ರತಿಯಾಗಿ ಲಕ್ಷ್ಮಿರಂಗನಾಥ ದೇವರಿಗೆ ಸಾರಾಯಿ ನೈವೇದ್ಯ ಅರ್ಪಿಸುವುದಕ್ಕೆ ಶುರು ಮಾಡಿದರಂತೆ ಎಂಬುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ.
ಸಾರಾಯಿ ಜಾತ್ರೆ ಎಂದೆ ಪ್ರಸಿದ್ಧಿ
ಪ್ರತಿ ವರ್ಷ ಹೋಳಿ ಹುಣ್ಣಿಮೆ ದಿನದಿಂದ 9 ದಿನಗಳ ನಂತರ ಈ ಲಕ್ಷ್ಮೀ ರಂಗನಾಥ ದೇವಾಲಯ ಜಾತ್ರಾ ಮಹೋತ್ಸವ ಜರುಗುತ್ತದೆ. ಇದನ್ನು ಸಾರಾಯಿ ಜಾತ್ರ ಎಂದೇ ಕರೆಯುತ್ತಾರೆ. ಅದ್ಧೂರಿಯಾಗಿ ನಡೆಯುವ ಈ ಜಾತ್ರೆಗೆ ಬರುವ ಭಕ್ತರು, ಸಾರಾಯಿ ಬಾಟಲ್ ತಂದು ದೇವರ ಮುಂದೆ ಇಟ್ಟು ಪೂಜೆ ಸಲ್ಲಿಸುತ್ತಾರೆ. ದೇವತೆಗಳು ರಾಕ್ಷಸರನ್ನು ಸಂಹಾರ ಮಾಡಿದ ನಂತರ ಸೋಮರಸ ಸೇವಿಸಿ, ವಿಜಯೋತ್ಸವ ಆಚರಣೆ ಮಾಡಿದ್ದರಂತೆ. ಈ ಹಿನ್ನೆಲೆ ಜಾತ್ರಾ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ರಾಜ್ಯದ ವಿವಿಧ ಪ್ರದೇಶ ಸೇರಿದಂತೆ ಮಹಾರಾಷ್ಟ್ರ ಹಾಗೂ ಗೋವಾದಿಂದಲೂ ಭಕ್ತರು ಆಗಮಿಸಿ, ಪೂಜೆ ಸಲ್ಲಿಸುತ್ತಾರೆ. ಸಂಜೆ ಹೊತ್ತಿನಲ್ಲಿ ರಥೋತ್ಸವ ಅದ್ಧೂರಿಯಾಗಿ ನೆರವೇರಲಿದೆ.
ಸಾರಾಯಿ ಅರ್ಪಿಸಿದರೆ ತಮ್ಮ ಬೇಡಿಕೆಗಳು ಈಡೇರುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಹಾಗಾಗಿ ಈ ಆಧುನಿಕ ಯುಗದಲ್ಲಿಯೂ ಸಾರಾಯಿ ನೈವೇದ್ಯ ಪದ್ದತಿ ಮುಂದುವರೆಯುತ್ತಲೇ ಸಾಗುತ್ತಿದೆ. ಇದು ಕೆಲವರಿಗೆ ವಿಚಿತ್ರವೆನಿಸಿದರೂ, ಎಲ್ಲವೂ ಭಕ್ತರ ನಂಬಿಕೆ ಮೇಲೆ ನಿಂತಿದೆ. ಆದರೂ ಇದೊಂದು ವಿಭಿನ್ನ ವಿಶೇಷ ದೇವಸ್ಥಾನ ಹಾಗೂ ವಿಚಿತ್ರ ಪದ್ದತಿ ಎಂಬುದು ಮಾತ್ರ ನಿಜವಾಗಿದೆ.
Recommended Video