ತೇಜಸ್ವಿ ಸೂರ್ಯ ಬಚ್ಚಾ, ರೆಡ್ಡಿ ಸಹೋದರರು ಕಳ್ಳರು: ಕಾಶಪ್ಪನವರ್
ಬಾಗಲಕೋಟೆ, ಜನವರಿ 07: ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಲವು ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಏಕವಚನದಲ್ಲಿಯೇ ವಿರೋಧಿಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಮೋದಿ, ಅಮಿತ್ ಶಾ ಗೆ ಡಿಎನ್ಎ ಟೆಸ್ಟ್ ಮಾಡಬೇಕು ಎಂದು ಅಬ್ಬರಿಸಿರುವ ಕಾಶಪ್ಪನವರ್, 'ಮೋದಿ ಮತ್ತು ಅಮಿತ್ ಶಾ ಭಾರತದವರೇ ಅಲ್ಲ' ಎಂದಿದ್ದಾರೆ.
ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಬೃಹತ್ ಪ್ರತಿಭಟನಾ ರ್ಯಾಲಿಯನ್ನುದ್ದೇಶಿಸಿ ಇಳಕಲ್ನಲ್ಲಿ ಅವರು ಮಾತನಾಡಿದರು.
'ಮೋದಿ ಹಿಟ್ಲರ್ ಆಗಲು ಹೊರಟಿದ್ದಾನೆ, ಇದು ಜರ್ಮನಿ ಅಲ್ಲ, ಹಿಟ್ಲರ್ ಆಗಲು ಜನರು ಬಿಡಲ್ಲ. ಮೊನ್ನೆ ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಎದೆ ಮೇಲೆ ಐಡಿ ಕಾರ್ಡ್ ಹಾಕಿಕೊಂಡು ವೇದಿಕೆ ಹತ್ತಿದ್ದರು, ಸಿಎಂ ಒಬ್ಬರು ತಮ್ಮ ಪರಿಚಯ ಹೇಳಿಕೊಂಡು ಮೋದಿ ಬಳಿ ಹೋಗಬೇಕಾ? ನಾಚಿಕೆ ಆಗಲ್ವಾ? ಎಂದು ಪ್ರಶ್ನೆ ಮಾಡಿದರು.
ಬಿಜೆಪಿ ಅಂದರೆ 'ಬ್ರಿಟಿಷ್ ಜನತಾ ಪಾರ್ಟಿ' ಎಂದು ಹೊಸ ಉಪಮೆ ನೀಡಿದ ಕಾಶಪ್ಪನವರ್, ಸ್ವಾತಂತ್ರ್ಯ ತಂದುಕೊಡುವಲ್ಲಿ ಬಿಜೆಪಿ ಪಾತ್ರವೇನು? ಮೋದಿ, ಶಾ ದೇಶಕ್ಕಾಗಿ ರಕ್ತ ಹರಿಸಿದ್ದಾರಾ? ಎಂದು ಪ್ರಶ್ನಿಸಿದರು.
ತೇಜಸ್ವಿ ಸೂರ್ಯ, ಅನಂತ್ಕುಮಾರ್ ಹೆಗಡೆ ಬಗ್ಗೆ ಏಕವಚನದಲ್ಲಿ ಮಾತನಾಡಿದ ಕಾಶಪ್ಪನವರ್, 'ಅವನ ತಲೆ ಮಾಂಸ ಆರಿಲ್ಲ, ತೇಜಸ್ವಿ ಸೂರ್ಯ ಅಂತೆ, ಅವನಿನ್ನೂ ಬಚ್ಚಾ, ಇನ್ನು ಆ ಅನಂತ್ಕುಮಾರ್ ಹೆಗ್ಡೆ ಅವನೊಬ್ಬ ಮೂರ್ಖ' ಎಂದರು.
'ದೇಶದ ಬಾವುಟದಲ್ಲಿ ಕೇಸರಿ, ಬಿಳಿ, ಹಸಿರು ಇದೆ. ಆದರೆ ಬಿಜೆಪಿ ಇದನ್ನು ಕೇಸರಿ ದೇಶವನ್ನಾಗಿ ಮಾಡಲು ಹೊರಟಿದೆ, ಅದು ಸಾಧ್ಯವಿಲ್ಲ. ಆ ಸೋಮಶೇಖರ ರೆಡ್ಡಿ ಅವನೊಬ್ಬ ಮುಟ್ಟಾಳ, ರೆಡ್ಡಿ ಸಹೋದರರು ಬಳ್ಳಾರಿಯ ಕಳ್ಳರು, ಈ ದೇಶವೇನು ಸೋಮಶೇಖರ ರೆಡ್ಡಿ ಅಪ್ಪನದ್ದಾ? ನಿಮ್ಮಪ್ಪ-ಅಮ್ಮ ಈ ದೇಶ ಕಟ್ಟಿದ್ದಾರಾ? ಎಂದು ವಿವಿಆದಾತ್ಮಕ ಹೇಳಿಕೆ ನೀಡಿದ್ದ ಸೋಮಶೇಖರ ರೆಡ್ಡಿಯನ್ನು ಕಾಶಪ್ಪನವರ್ ಪ್ರಶ್ನಿಸಿದ್ದಾರೆ.
ನೂರಕ್ಕಿಂತ ಸ್ವಲ್ಪ ಹೆಚ್ಚಿಗೆ ಸಂಖ್ಯೆಯ ಸಂಸದರು ಸೇರಿ ಮಾಡಿರುವ ಕಾಯ್ದೆಯನ್ನು ದೇಶದ 130 ಕೋಟಿ ಜನರು ಒಪ್ಪಿಕೊಳ್ಳಬೇಕಾ? ಎಂದು ಪ್ರಶ್ನಿಸಿದ ಅವರು, ಸಿಎಎ ಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಅಬ್ಬರಿಸಿದ್ದಾರೆ.