'ನಾನು ಹೇಳಿದ್ದು ಹಾಗಲ್ಲ, ಹೀಗೆ' ಎಂದು ಮತ್ತೊಮ್ಮೆ ಸಿದ್ದು ಸಮಜಾಯಿಷಿ
ಬಾದಾಮಿ (ಬಾಗಲಕೋಟೆ ಜಿಲ್ಲೆ), ಅಗಸ್ಟ್ 29: ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರವು ಐದು ವರ್ಷ ಪೂರ್ಣಗೊಳಿಸಲಿದೆ. ಇದರಲ್ಲಿ ಯಾವ ಅನುಮಾನವೂ ಇಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು, ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದ್ದೇನೆ ಎಂದು ಸಿದ್ದರಾಮಯ್ಯ ಬುಧವಾರ ಇಲ್ಲಿ ಹೇಳಿದರು.
"ನಾನು ಮುಂದಿನ ಮುಖ್ಯಮಂತ್ರಿ ಆಗುತ್ತೇನೆ" ಎಂದು ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದ ಅವರು, ಕಾಂಗ್ರೆಸ್ ನ ಕೆಲವು ಶಾಸಕರು ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂಬ ಹೇಳಿಕೆ ನೀಡಿದ್ದಾರೆ. ನನ್ನ ಮೇಲಿನ ಅಭಿಮಾನದಿಂದ ಅವರು ಹಾಗೆ ಹೇಳುತ್ತಿದ್ದಾರೆ. ಅದರರ್ಥ ಈಗಿರುವ ಸರಕಾರವನ್ನು ಬೀಳಿಸುವುದು ಅಂತಲ್ಲ ಎಂದಿದ್ದಾರೆ.
ಮತ್ತೆ ಮುಖ್ಯಮಂತ್ರಿಯಾಗ್ತೀನಿ : ಸಿದ್ದರಾಮಯ್ಯ ಮಾತಿನ ಒಳಾರ್ಥವೇನು?
ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಇರಿಸುಮುರಿಸು ಆಗುತ್ತದೆ ಅನ್ನೋದಕ್ಕೆ ಇದನ್ನು ಹೇಳುತ್ತಿರುವುದು ಜೆಡಿಎಸ್ ಶಾಸಕರಲ್ಲವಲ್ಲ ಎಂದು ಮರು ಪ್ರಶ್ನೆ ಹಾಕಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ತಾವು ಮುಖ್ಯಮಂತ್ರಿ ಆಗುವುದಾಗಿ ಹಗಲುಗನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
'ಕುಮಾರಸ್ವಾಮಿಯನ್ನು ಇಳಿಸುವ ತನಕ ಸಿದ್ದರಾಮಯ್ಯಗೆ ಸಮಾಧಾನವಿಲ್ಲ'
ಕಾಂಗ್ರೆಸ್ ನವರು ಯಾರೂ ಬಿಜೆಪಿ ಸಂಪರ್ಕದಲ್ಲಿ ಇಲ್ಲ. ಆದರೆ ಬಿಜೆಪಿಯವರೇ ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದ ಸಿದ್ದರಾಮಯ್ಯ, ರೈತರ ಬಗ್ಗೆ ತಮಗೆ ಕಾಳಜಿ ಇಲ್ಲ ಎಂಬ ಶ್ರೀರಾಮುಲು ಆರೋಪಕ್ಕೆ ಪ್ರತಿಕ್ರಿಯಿಸಿ, ಶ್ರೀರಾಮುಲುಗೆ ಭಾಷೆ, ಸಂಸ್ಕೃತಿ, ಅಭಿವೃದ್ಧಿ ಅಂದರೆ ಗೊತ್ತಿಲ್ಲ. ಬಳ್ಳಾರಿ, ಮೊಳಕಾಲ್ಮೂರಲ್ಲಿ ಏನು ಮಾಡಿದ್ದಾರೆ ಹೇಳಿ. ಅಭಿವೃದ್ಧಿ ಏನೇ ಇದ್ದರೂ ಕಾಂಗ್ರೆಸ್ ನಿಂದ ಮಾತ್ರ ಎಂದರು.