ಬಾದಾಮಿಯಲ್ಲಿ ಸಿದ್ದರಾಮಯ್ಯನ ಸೋಲಿಸಲು ಬಿಜೆಪಿ ಮಾಸ್ಟರ್ ಪ್ಲಾನ್
Recommended Video
ಬಾದಾಮಿ, ಏಪ್ರಿಲ್ 20: ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಣಿಯಲು ಬಿಜೆಪಿ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿದೆ. ಮಾಸ್ಟರ್ ಪ್ಲಾನ್ ಹಿಂದಿರುವುದು ಬಿಜೆಪಿ 'ಚಾಣಕ್ಯ' ಅಮಿತ್ ಶಾ.
ಸಿದ್ದರಾಮಯ್ಯ ಬಾದಾಮಿಯನ್ನೇ ಆಯ್ದುಕೊಂಡದ್ದೇಕೆ? ಜಾತಿಲೆಕ್ಕಾಚಾರ ಏನು?
ಹೌದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈಗಾಗಲೇ ಸೋಲಿನ ವಾಸನೆ ಹಿಡಿದಿರುವ ಸಿದ್ದರಾಮಯ್ಯ ಅವರು ಬಾದಾಮಿಯಿಂದಲೂ ಕಣಕ್ಕಿಳಿಯುವ ಸಾಧ್ಯತೆ ಅತಿ ಹೆಚ್ಚಿದೆ. ಆದರೆ ಅಲ್ಲಿಯೂ ಅವರಿಗೆ ತಕ್ಕ ಎದಿರೇಟು ಕೊಡಲು ಬಿಜೆಪಿ ಸಜ್ಜಾಗುತ್ತಿದೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಬಿಜೆಪಿಯ ಹಿರಿಯ ಮುಖಂಡ ವಿಆರ್ಎಲ್ ಸಂಸ್ಥಾಪಕ ವಿಜಯ ಸಂಕೇಶ್ವರ್ ಅವರನ್ನು ಸಿದ್ದರಾಮಯ್ಯ ವಿರುದ್ಧವಾಗಿ ಕಣಕ್ಕಿಳಿಸಲು ಬಿಜೆಪಿ ಯೋಜಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ. ರಾಜ್ಯಸಭೆ ಟಿಕೆಟ್ ಗಿಟ್ಟಿಸಲು ವಿಫಲರಾಗಿದ್ದ ಸಂಕೇಶ್ವರ್ ಅವರ ಮನವೊಲಿಸುವ ಪ್ರಯತ್ನಗಳು ಚಾಲ್ತಿಯಲ್ಲಿದೆ. ಸದ್ಯಕ್ಕೆ ವಿಜಯ್ ಸಂಕೇಶ್ವರ್ ಅವರು ಒಪ್ಪಿಗೆಯನ್ನು ಇನ್ನೂ ನೀಡಿಲ್ಲ.
ತಡ ರಾತ್ರಿ ಚರ್ಚೆ
ನಿನ್ನೆ ತಡ ರಾತ್ರಿ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಉತ್ತಮ ಜನಬೆಂಬಲ ಹಾಗೂ ರಾಜಕೀಯವಾಗಿ ಪ್ರಾಮಾಣಿಕ ವ್ಯಕ್ತಿತ್ವ ಹೊಂದಿರುವ ವಿಜಯ ಸಂಕೇಶ್ವರ್ ಅವರನ್ನು ಸಿದ್ದರಾಮಯ್ಯ ವಿರುದ್ಧ ಬಾದಾಮಿಯಲ್ಲಿ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಈ ಕುರಿತು ಅಧಿಕೃತವಾಗಿ ಮಾಹಿತಿ ಇನ್ನೂ ಹೊರಬೀಳಬೇಕಿದೆ.
ಬಾದಾಮಿಯಿಂದ ಸ್ಪರ್ಧೆಗೆ ಥಂಬ್ಸ್ ಅಪ್ ಹೇಳಿದ ಸಿದ್ದರಾಮಯ್ಯ!
ಜವಾಬ್ದಾರಿ ಹೊರಿಸಿರುವ ಶಾ
ವಿಜಯ ಸಂಕೇಶ್ವರ್ ಅವರನ್ನು ಚುನಾವಣೆಗೆ ಸ್ಪರ್ಧಿಸುವಂತೆ ಒಪ್ಪಿಸುವ ಜವಾಬ್ದಾರಿಯನ್ನು ಪ್ರಹ್ಲಾದ್ ಜೋಷಿ, ಜಗದೀಶ್ ಶೆಟ್ಟರ್ ಮತ್ತು ಅನಂತ್ಕುಮಾರ್ ಅವರ ಹೆಗಲಿಗೆ ಅಮಿತ್ ಶಾ ವಹಿಸಿದ್ದಾರೆ. ವಿಜಯ ಸಂಕೇಶ್ವರ್ ಅವರನ್ನು ಯಡಿಯೂರಪ್ಪ ಅವರು ಇಂದು ಭೇಟಿ ಆಗಿ ಚರ್ಚೆ ನಡೆಸುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಸೋಲಿಗಾಗಿ ಕಾದು ಕುಳಿತ ನಾಯಕರ ಪಟ್ಟಿ!
ಸಂಕೇಶ್ವರ್ ಉತ್ತರ ಕರ್ನಾಟಕದವರೇ
ವಿಜಯ ಸಂಕೇಶ್ವರ್ ಅವರು ಉತ್ತರ ಕರ್ನಾಟಕ ಮೂಲದವರಾಗಿದ್ದು, ಸಿದ್ದರಾಮಯ್ಯ ಅವರಿಗಿಂತಲೂ ಕ್ಷೇತ್ರಕ್ಕೆ ಸ್ಥಳೀಯರು ಎನಿಸಿಕೊಳ್ಳಲಿದ್ದಾರೆ, ಜೊತೆಗೆ ಬಾದಾಮಿ ಕ್ಷೇತ್ರದಲ್ಲಿ 65,000 ಲಿಂಗಾಯತ ಮತಗಳಿದ್ದು,ಲಿಂಗಾಯತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಸಂಕೇಶ್ವರ್ ಅವರು ಸೂಕ್ತ ಅಭ್ಯರ್ಥಿ ಎಂದು ಬಿಜೆಪಿ ಈ ನಿರ್ಣಯಕ್ಕೆ ಬಂದಿದೆ.
ಮುನಿಸು ಶಮನದ ತಂತ್ರವೂ ಆಗಿದೆ
ಕಳೆದ ತಿಂಗಳಷ್ಟೆ ಮುಕ್ತಾಯವಾದ ರಾಜ್ಯಸಭಾ ಚುನಾವಣೆಗೆ ಬಿಜೆಪಿಯಿಂದ ವಿಜಯ ಸಂಕೇಶ್ವರ್ ಅವರ ಹೆಸರು ಜೋರಾಗಿ ಕೇಳಿಬಂದಿತ್ತು. ಈಗ ಬಿಜೆಪಿಯಿಂದ ಆಯ್ಕೆ ಆಗಿರುವ ರಾಜೀವ್ ಚಂದ್ರಶೇಖರ್ ಬದಲಿಗೆ ಸ್ಥಳೀಯರಾದ ವಿಜಯ ಸಂಕೇಶ್ವರ್ ಅವರನ್ನೇ ಆಯ್ಕೆ ಮಾಡಬೇಕು ಎಂಬ ಕೂಗು ಪಕ್ಷದಲ್ಲೇ ಜೋರಾಗಿ ಕೇಳಿ ಬಂದಿತ್ತು ಆದರೆ ಕೊನೆಗೆ ರಾಜ್ಯಸಭಾ ಸೀಟು ರಾಜೀವ್ ಚಂದ್ರಶೇಖರ್ ಪಾಲಾಯಿತು. ಇದೀಗ ವಿಧಾಸಬಾ ಟಿಕೆಟ್ ನೀಡಿದರೆ ವಿಜಯ ಸಂಕೇಶ್ವರ್ ಅವರ ಮುನಿಸು ಕಡಿಮೆ ಮಾಡುವ ತಂತ್ರವೂ ಇದರಲ್ಲಿದೆ.
ಜೆಡಿಎಸ್ನಿಂದ ಬೆಂಬಲ ಸಾಧ್ಯತೆ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈಗಾಗಲೇ ಜೆಡಿಎಸ್ನ ಜಿ.ಟಿ.ದೇವೇಗೌಡ ಅವರು ಸಿದ್ದರಾಮಯ್ಯ ಅವರಿಗೆ ಕೈಗೆ ಕೈ, ಭುಜಜ್ಜೆ ಭುಜ ಎಂಬಂತೆ ಎದುರು ನಿಂತಿದ್ದು, ಅಲ್ಲಿ ಬಿಜೆಪಿಯು ಜೆಡಿಎಸ್ಗೆ ಆಂತರಿಕವಾಗಿ ಬೆಂಬಲ ನೀಡುತ್ತಿದೆ ಎಂಬುದು ಗುಟ್ಟೇನೂ ಅಲ್ಲ. ಹಾಗೆಯೇ ಬಾದಾಮಿಯಲ್ಲಿ ವಿಜಯ ಸಂಕೇಶ್ವರ್ ಅವರು ಬಿಜೆಪಿಯಿಂದ ಸ್ಪರ್ಧಿಸಿದರೆ ಇಲ್ಲಿ ಜೆಡಿಎಸ್ ಬಿಜೆಪಿಗೆ ಆಂತರಿಕ ಬೆಂಬಲ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಬಾದಾಮಿಯ ಲೆಕ್ಕಾಚಾರ
ಸಿದ್ದರಾಮಯ್ಯ ಅವರು ಬಾದಾಮಿಯನ್ನೇ ಆಯ್ಕೆ ಮಾಡಿಕೊಂಡಿರುವ ಹಿಂದೆ ಜಾತಿ ಲೆಕ್ಕಾಚಾರ ಇದೆ. ಇಲ್ಲಿ 65000 ಲಿಂಗಾಯತ ಮತದಾರರು ಇದ್ದರೆ, 48000 ಕುರುಬ ಸಮುದಾಯದ ಮತದಾರರಿದ್ದಾರೆ. ಪರಿಶಿಷ್ಟಜಾತಿ ಮತ್ತು ವರ್ಗದ ಮತದಾರರ ಸಂಖ್ಯೆ 47000 ದಷ್ಟಿದ್ದರೆ, ಮುಸ್ಲಿಂ ಮತಗಳ ಸಂಖ್ಯೆ 11000 ಇದೆ. ನೇಕಾರ ಸಮುದಾಯದ ಮತಗಳು 13000 ಇವೆ, ಇನ್ನು ಇತರೆ ಮತದಾರರ ಸಂಖ್ಯೆ 30000 ಇದೆ. ಲಿಂಗಾಯತ ಹೊರತುಪಡಿಸಿ ಬಹುತೇಕ ಅಹಿಂದ ಮತದಾರರೇ ಹೆಚ್ಚಿಗಿರುವ ಕಾರಣ ಸಿದ್ದರಾಮಯ್ಯ ಅವರು ಬಾದಾಮಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಲೆಕ್ಕಾಚಾರವನ್ನು ವಿಜಯ ಸಂಕೇಶ್ವರ್ ಹೇಗೆ ಉಲ್ಟಾ ಮಾಡುತ್ತಾರೊ ನೋಡಬೇಕು.