ಕುಮಾರಸ್ವಾಮಿ ಅಯೋಗ್ಯ ಅಲ್ಲ, ಯೋಗ್ಯತೆ ಇಲ್ಲದ ಮುಖ್ಯಮಂತ್ರಿ: ಈಶ್ವರಪ್ಪ
Recommended Video
ಬಾಗಲಕೋಟೆ, ಏಪ್ರಿಲ್ 8: ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿರುವ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಪುನಃ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಅಯೋಗ್ಯ ಎಂದು ಹೇಳಿದ್ದೆ. ಇದರಿಂದ ಅವರು ತುಂಬಾ ಬೇಜಾರು ಮಾಡಿಕೊಂಡಿದ್ದಾರೆ. ಆದ್ದರಿಂದ ಆ ಪದವನ್ನು ಹಿಂದಕ್ಕೆ ಪಡೆದುಕೊಳ್ಳುತ್ತೇನೆ. ಅವರು ಅಯೋಗ್ಯ ಅಲ್ಲ, ಯೋಗ್ಯತೆ ಇಲ್ಲದ ಮುಖ್ಯಮಂತ್ರಿ ಎಂದು ಮತ್ತೆ ಟೀಕಾಪ್ರಹಾರ ನಡೆಸಿದ್ದಾರೆ.
ನಿಖಿಲ್ ಸೋಲಿಸಲೆಂದೇ ಬಿಜೆಪಿ ಸುಮಲತಾಗೆ ಬೆಂಬಲ ನೀಡಿದೆ:ಈಶ್ವರಪ್ಪ
ಬಿಜೆಪಿಯವರ ಕುತಂತ್ರದಿಂದ ತಮಗೆ ಹೆಲಿಕಾಪ್ಟರ್ ಲಭ್ಯವಾಗದಂತೆ ಮಾಡಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಇದು ಹಾಸ್ಯಾಸ್ಪದ. ಪ್ರಚಾರಕ್ಕೆ ತೆರಳುವ ಮುಖ್ಯಮಂತ್ರಿ ಮೊದಲೇ ಈ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದು ಪ್ರತಿಕ್ರಿಯೆ ನೀಡಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ತಾವು ಮುಖ್ಯಮಂತ್ರಿ ಆದ ಸಂದರ್ಭದಿಂದಲೂ ಮಾಧ್ಯಮಗಳು ತಮಗೆ ಸಹಕಾರ ನೀಡುತ್ತಿಲ್ಲ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಈಶ್ವರಪ್ಪ, 'ನೀವು ಏನು ಕೆಲಸ ಮಾಡಿದ್ದೀರಿ ಎಂದು ಮಾಧ್ಯಮಗಳು ನಿಮಗೆ ಸಹಕಾರ ಕೊಡಬೇಕು? ನಿಮ್ಮದೇ ಮೈತ್ರಿ ಪಕ್ಷದ ಶಾಸಕರೇ ನಿಮ್ಮನ್ನು ಮುಖ್ಯಮಂತ್ರಿ ಎಂದು ಒಪ್ಪಿಕೊಳ್ಳುತ್ತಿಲ್ಲ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಏನೂ ಕೆಲಸ ಮಾಡದ ನಿಮ್ಮ ಬಗ್ಗೆ ಮಾಧ್ಯಮಗಳು ಸುಳ್ಳು ಪ್ರಚಾರ ನೀಡಬೇಕೇ?' ಎಂದು ಪ್ರಶ್ನಿಸಿದರು.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ವಿರುದ್ಧವೂ ಹರಿಹಾಯ್ದರು.
ಸೈನಿಕರು ಸಾಯಲಿ ಎಂದು ಸುಮ್ಮನಿದ್ದಿರಾ?
ಆದಾಯ ತೆರಿಗೆ ಇಲಾಖೆ ದಾಳಿಯ ಬಗ್ಗೆ ಮುಖ್ಯಮಂತ್ರಿ ಸಾರ್ವಜನಿಕವಾಗಿ ಮಾತನಾಡುತ್ತಾರೆ. ಕಳ್ಳರೆಲ್ಲರೂ ತಪ್ಪಿಸಿಕೊಳ್ಳಲಿ ಎಂಬುದೇ ಅವರ ಆಶಯವಾಗಿರುತ್ತದೆ. ಹಾಗೆಯೇ ಪುಲ್ವಾಮಾ ದಾಳಿಯ ಬಗ್ಗೆಯೂ ತಿಳಿದಿತ್ತು ಎನ್ನುತ್ತಾರೆ. ಉಗ್ರರ ದಾಳಿಯ ಬಗ್ಗೆ ಗೊತ್ತಿದ್ದರೆ ಮೊದಲೇ ಅಧಿಕಾರಿಗಳಿಗೆ ತಿಳಿಸಬೇಕಿತ್ತು. ಎರಡು ವರ್ಷ ಏಕೆ ಸುಮ್ಮನಿದ್ದಿರಿ? ಸೈನಿಕರು ಸಾಯಲಿ ಎಂದು ಸುಮ್ಮನಿದ್ದಿರಾ? ಎಂದು ಪ್ರಶ್ನಿಸಿದರು.
ದಿನೇಶ್ ಗುಂಡೂರಾವ್ಗೆ ತಲೆಕೆಟ್ಟಿದೆ
ಆರೆಸ್ಸೆಸ್ನಿಂದ ಲೋಕಸಭೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ ಎಂಬುದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ದಿನೇಶ್ ಗುಂಡೂರಾವ್ ತುಂಬಾ ಕೀಳಾಗಿ ಮಾತನಾಡುತ್ತಿದ್ದಾರೆ. ಅವರಿಗೆ ತಲೆಕೆಟ್ಟಿದೆ. ಆರೆಸ್ಸೆಸ್ ಅನ್ನು ಟೀಕಿಸಿದರೆ ಮೇಲಿನ ಸ್ಥಾನಕ್ಕೆ ಹೋಗಬಹುದು ಎಂದು ಭಾವಿಸಿದ್ದಾರೆ. ಆರೆಸ್ಸೆಸ್ ಬೆಳೆಯಲು ಬಿಡುವುದಿಲ್ಲ ಎಂದು ಆಗ ಸಿದ್ದರಾಮಯ್ಯ ಹೇಳಿದ್ದರು. ಇಂದಿರಾ ಗಾಂಧಿ, ನೆಹರೂ ಅವರೂ ಹೇಳಿದ್ದರು. ಅವರಿಂದಲೂ ಏನೂ ಮಾಡಲು ಆಗಲಿಲ್ಲ. ನೂರು ಸಿದ್ದರಾಮಯ್ಯ, ಸಾವಿರ ದಿನೇಶ್ ಗುಂಡೂರಾವ್ ಬಂದರೂ ಆರೆಸ್ಸೆಸ್ಗೆ ಏನನ್ನೂ ಮಾಡಲು ಆಗುವುದಿಲ್ಲ ಎಂದರು.
'ಚುನಾವಣೆ ಬಳಿಕ ಕುಮಾರಸ್ವಾಮಿ ನೆಗೆದು ಬೀಳ್ತಾರೆ' ಈಶ್ವರಪ್ಪ ವಿವಾದಾತ್ಮಕ ಹೇಳಿಕೆ
ಜೆಡಿಎಸ್ ಮುಗಿಸಲು...
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅನ್ನು ಮುಗಿಸಿದ್ದಾಯ್ತು. ಈಗ ಜೆಡಿಎಸ್ಅನ್ನು ಮುಗಿಸಲು ಹೊರಟಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಎಂಬ ಪದವೇ ಅಪವಿತ್ರವಾಗಿದೆ. ಸ್ನೇಹದ ಅರ್ಥವೇ ಅವರಿಗೆ ತಿಳಿದಿಲ್ಲ ಎಂದು ಈಶ್ವರಪ್ಪ ಟೀಕಿಸಿದರು.
ಜೀವ ಬೆದರಿಕೆ ಕರೆ:ದೂರು ನೀಡುವಾಗ ಎಡವಟ್ಟು ಮಾಡಿಕೊಂಡರಾ ಈಶ್ವರಪ್ಪ?
ನಿಖಿಲ್ ಸೋಲಿಗಾಗಿಯೇ ಬೆಂಬಲ
'ನನ್ನ ಮಗ ನಿಖಿಲ್ನನ್ನು ಸೋಲಿಸುವ ಮೂಲಕ ನನ್ನನ್ನು ರಾಜಕೀಯವಾಗಿ ಮುಗಿಸಲು ಸಂಚು ಮಾಡಲಾಗಿದೆ' ಎಂದು ಕುಮಾರಸ್ವಾಮಿ ಆರೋಪಕ್ಕೆ ಈಶ್ವರಪ್ಪ, 'ಇದು ಸಂಚಲ್ಲ; ರಾಜಕೀಯ' ಎಂದು ಹೇಳಿದರು.
ನಿಖಿಲ್ ಅವರನ್ನು ಸೋಲಿಸುವುದಕ್ಕಾಗಿಯೇ ಬಿಜೆಪಿ ಸುಮಲತಾಗೆ ಬೆಂಬಲ ನೀಡಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಂದಾಣಿಕೆಯಿಲ್ಲ. ಇಬ್ಬರೂ ಪರಸ್ಪರ ಸೋಲಿಸಲು ನಿಂತಿದ್ದಾರೆ. ಮಂಡ್ಯದ ಬೆಳವಣಿಗೆ ಬಗ್ಗೆ ಅವರಲ್ಲಿ ಹತಾಶೆ ಮೂಡಿದೆ. ಸೋಲಿನ ಭೀತಿಯಿಂದಾಗಿ ಇಡೀ ಕುಟುಂಬ ಮಂಡ್ಯದಲ್ಲಿ ಪ್ರಚಾರ ಮಾಡುತ್ತಿದೆ. ಈಗ ಪ್ರಚಾರಕ್ಕೆ ಸಿದ್ದರಾಮಯ್ಯ ಅವರನ್ನೂ ಕರೆದಿದ್ದಾರೆ. ಸೋಲಿನ ಭಯ ಹೆಚ್ಚಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನೂ ಕರೆಯಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.