ಬಾಗಲಕೋಟೆ: ಶ್ರೀ ಮಹಾಂತ ಶಿವಯೋಗಿ ಸ್ವಾಮೀಜಿ ಇನ್ನಿಲ್ಲ
ಬಾಗಲಕೋಟೆ, ಮೇ 19 : ಇಳಕಲ್ ನ ವಿಜಯ ಮಹಾಂತೇಶ ಪೀಠದ ಶ್ರೀ ಮಹಾಂತ ಶಿವಯೋಗಿ ಸ್ವಾಮೀಜಿ (90) ಇಂದು ಶನಿವಾರ ಲಿಂಗೈಕ್ಯರಾದರು. 'ಮಹಾಂತ ಜೋಳಿಗೆಯ ಹರಿಕಾರ' ಎಂದೇ ಖ್ಯಾತರಾಗಿದ್ದ ಮಹಾಂತ ಶ್ರೀ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿತ್ತರಗಿ, ಇಳಕಲ್ ವಿಜಯಮಹಾಂತೇಶ್ವರ ಮಠದ 19ನೇ ಪೀಠಾಧಿಪತಿಗಳಾಗಿದ್ದ ಸ್ವಾಮೀಜಿ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದರು. ಬಸವಶ್ರೀ ಸೇರಿ ಕೆಲವು ಪ್ರಶಸ್ತಿ ಪುರಸ್ಕೃತರಾಗಿದ್ದರು.
ಇವರ ಜನ್ಮದಿನವನ್ನು ರಾಜ್ಯ ಸರ್ಕಾರ ವ್ಯಸನಮುಕ್ತ ದಿನ ಎಂದು ಘೋಷಿಸಿತ್ತು. 48 ವರ್ಷಗಳಿಂದ ಮಠಾಧೀಶರಾಗಿದ್ದ ಅವರು ಜನರ ದುಶ್ಚಟಗಳನ್ನು ದೂರವಾಗಿಸಲು ಮಹಾಂತ ಜೋಳಿಗೆ ಎಂಬ ಚಿಂತನೆ ಜಾರಿಗೊಳಿಸಿದ್ದರು. ಸಾವಿರಾರು ಜನರು ಸ್ವಾಮೀಜಿಯವರಿಂದ ಪ್ರೇರಿತರಾಗಿ ದುಶ್ಚಟ ಬಿಟ್ಟಿದ್ದರು.
ಶ್ರೀಗಳ ಪಾರ್ಥಿವ ಶರೀರ ಇಂದು ಸಂಜೆ 6 ಗಂಟೆಗೆ ಆಸ್ಪತ್ರೆಯಿಂದ ಆಗಮಿಸಲಿದ್ದು, ಶ್ರೀಮಠದಲ್ಲಿ ಇಡಲಾಗುತ್ತದೆ. ಭಾನುವಾರ ಬೆಳಗ್ಗೆ 8ಕ್ಕೆ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು. ಬೆಳಗ್ಗೆ 9ಕ್ಕೆ ವಿಜಯಮಹಾಂತರ ಕರ್ತೃ ಗದ್ದುಗೆಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.