ತಾಲಿಬಾನ್ ಪರ ಪೋಸ್ಟ್; ಬಾಗಲಕೋಟೆ ಯುವಕನಿಗೆ ಸಂಕಷ್ಟ!
ಬಾಗಲಕೋಟೆ, ಆಗಸ್ಟ್ 20; ಅಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನ್ ಉಗ್ರರ ವಶವಾಗಿದೆ. ಕಾಬೂಲ್ ಸೇರಿದಂತೆ ವಿವಿಧ ಪ್ರದೇಶದಲ್ಲಿ ಹಿಂಸಾಚಾರಗಳು ನಡೆಯುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ತಾಲಿಬಾನ್ ಪರವಾಗಿ ಸ್ಟೇಟಸ್ ಹಾಕಿದ ಕರ್ನಾಟಕದ ಯುವಕನಿಗೆ ಸಂಕಷ್ಟ ಎದುರಾಗಿದೆ.
ಬಾಗಲಕೋಟೆಯ ಆಸೀಫ್ ಗಲಗಲಿ ಎಂಬ ಯುವಕ ಫೇಸ್ ಬುಕ್ನಲ್ಲಿ 'ಐ ಲವ್ ತಾಲಿಬಾನಿ' ಎಂದು ಸ್ಟೇಟಸ್ ಹಾಕಿದ್ದಾನೆ. ಈಗ ಮುಸ್ಲಿಂ ಸಮುದಾಯದ ಯುವಕರೇ ಆಸೀಫ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಕರಣ ದಾಖಲಿಸಿ ಬಂಧಿಸಿ ಎಂದು ಒತ್ತಾಯಿಸಿದ್ದಾರೆ.
Recommended Video
DW ಪತ್ರಕರ್ತರ ಹುಡುಕಾಟದಲ್ಲಿ ಸಂಬಂಧಿಗೆ ಗುಂಡಿಕ್ಕಿ ಕೊಂದ ತಾಲಿಬಾನ್!
ಆಸೀಫ್ ಗಲಗಲಿ ಹಾಕಿದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲವಾರು ಜನರು ಆಸೀಫ್ ಬಂಧನಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಸದ್ಯ ಆಸೀಫ್ ಪರಾರಿಯಾಗಿದ್ದು, ಶುಕ್ರವಾರ ಸಂಜೆಯ ತನಕವೂ ಪ್ರಕರಣ ದಾಖಲಾಗಿಲ್ಲ.
Video: ಕಾರಿನಲ್ಲಿ ಅಫ್ಘಾನ್ ಧ್ವಜ ಹಾಕಿಕೊಂಡಿದ್ದಕ್ಕೆ ವ್ಯಕ್ತಿಯನ್ನು ಥಳಿಸಿದ ತಾಲಿಬಾನ್!
ಜಮಖಂಡಿಯ ಪೊಲೀಸರು ಆಸೀಫ್ ಗಲಗಲಿ ಪೋಷಕರು, ಸಂಬಂಧಿಗಳನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಆಸೀಫ್ಗಾಗಿ ಹುಡುಕಾಟ ಮುಂದುವರೆದಿದೆ. ಮುಸ್ಲಿಂ ಸಮುದಾಯದ ಯುವಕರೇ ಆಸೀಫ್ ತರಾಟೆಗೆ ತೆಗೆದುಕೊಂಡು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.
Fact Check: ಭಾರತಕ್ಕೆ ಬೆದರಿಕೆ ಹಾಕಿದರಾ ತಾಲಿಬಾನ್ ಉಗ್ರರು!?
ಮಹಮದ್ ಯಾಕುಬ್ ಎಂಬುವವರು ವಿಡಿಯೋವೊಂದನ್ನು ಮಾಡಿದ್ದು, ಅವನಿಗೆ ಅಫ್ಘಾನಿಸ್ತಾನ ಅಷ್ಟು ಇಷ್ಟವಿದ್ದರೆ ಅಲ್ಲೇ ಹೋಗಿ ಬದುಕಲಿ. ಇಂತಹವರಿಂದ ಸಮುದಾಯ ತಲೆ ತಗ್ಗಿಸುವಂತೆ ಆಗಿದೆ. ಆಸೀಫ್ ಬಂಧಿಸಿ ಎಂದು ಜಮಖಂಡಿ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಆಸೀಫ್ ಗಲಗಲಿಯಿಂದ ಸಮಯದಾಯದ ಎಲ್ಲರಿಗೂ ಕೆಟ್ಟ ಹೆಸರು ಬರುತ್ತದೆ. ಆತನ ವಿರುದ್ಧ ದೇಶದ್ರೋಹದ ಕೇಸ್ ಹಾಕಿ. ಈ ರೀತಿ ಸ್ಟೇಟಸ್ ಹಾಕುವವರಿಗೆ ಪಾಠವಾಗಬೇಕು. ಗಲಗಲಿ ಹುಡುಕಿ ಬಂಧಿಸಿ ಎಂದು ಪೊಲೀಸರನ್ನು ಆಗ್ರಹಿಸಿದ್ದಾರೆ.
ದೇಶದ ವಿಚಾರಕ್ಕೆ ಬಂದಾಗ ಸಿಡಿದೇಳುವುದು ಮುಖ್ಯ. ದೇಶದ್ರೋಹಿಗಳ ವಿರುದ್ಧ ಸದಾ ಧ್ವನಿ ಎತ್ತಬೇಕು ಎಂದು ಆಸೀಫ್ ಗಲಗಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ವಶವಾಗಿ ಒಂದು ವಾರ ಕಳೆಯುತ್ತಾ ಬಂದಿದೆ. ದೇಶದಲ್ಲಿನ ಅಸ್ಥಿರತೆ ಮತ್ತು ಆತಂಕದ ವಾತಾವರಣ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ದೇಶದಿಂದ ಹೊರ ಹೋಗಲು ವಿದೇಶಿಯರು ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿದ್ದಾರೆ.
ತಾಲಿಬಾನ್ ಉಗ್ರರು ಕಂದಹಾರ್ ಮತ್ತು ಹೆರಾತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ನುಗ್ಗಿದ್ದಾರೆ. ದಾಖಲೆಗಳಿಗಾಗಿ ಹುಡುಕಾಟ ನಡೆಸಿದ್ದು, ಕೆಲವು ಕಾಗದ ಪತ್ರಗಳನ್ನು ಹೊತ್ತುಕೊಂಡು ಹೋಗಿದ್ದಾರೆ.
ಭಾರತ ಅಫ್ಘಾನಿಸ್ತಾನದಲ್ಲಿ 4 ದೂತವಾಸ ಕಚೇರಿಗಳನ್ನು ಹೊಂದಿದೆ. ಕೆಲವು ಕಚೇರಿಗಳ ವಾಹನಗಳನ್ನು ಉಗ್ರರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಕಂದಹಾರ್, ಹೆರಾತ್ನಲ್ಲಿರುವ ಕಚೇರಿಗಳನ್ನು ಆಗಸ್ಟ್ 15ರಿಂದಲೇ ಮುಚ್ಚಲಾಗಿದೆ.
ಭಾರತೀಯ ದೂತವಾಸ ಕಚೇರಿ ಸಿಬ್ಬಂದಿ, ಅಲ್ಲಿ ರಕ್ಷಣೆಗೆ ನಿಯೋಜನೆಗೊಂಡಿದ್ದ ಐಟಿಬಿಪಿ ಸಿಬ್ಬಂದಿ ಸೇರಿದಂತೆ 120 ಜನರನ್ನು ಮಂಗಳವಾರ ರಕ್ಷಣೆ ಮಾಡಲಾಗಿತ್ತು. ಕಾಬೂಲ್ನಲ್ಲಿದ್ದ ಎಲ್ಲರನ್ನೂ ವಾಯುಪಡೆ ವಿಮಾನದ ಮೂಲಕ ಭಾರತಕ್ಕೆ ವಾಪಸ್ ಕರೆತರಲಾಗಿತ್ತು.
ನಾವು ಯಾರಿಗೂ ಹಿಂಸೆ ಮಾಡುವುದಿಲ್ಲ ದೈನಂದಿನ ಜನಜೀವನ ಆರಂಭಿಸಿ ಎಂದು ತಾಲಿಬಾನಿಗಳು ಕರೆ ಕೊಟ್ಟಿದ್ದಾರೆ. ಆದರೆ ಯಾರೂ ಸಹ ಅವರನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಗುರುವಾರ ಬಾವುಟದ ವಿಚಾರಕ್ಕೆ ಹಿಂಸಾಚಾರ ನಡೆದಿದ್ದು, ಗುಂಡಿನ ದಾಳಿಯಿಂದಾಗಿ ನಾಲ್ವರು ಮೃತಪಟ್ಟಿದ್ದಾರೆ.
ಕಾಬೂಲ್ನಲ್ಲಿದ್ದ ಸರ್ಕಾರಿ ಸ್ವಾಮ್ಯದ ಸುದ್ದಿ ವಾಹಿನಿಗೆ ಉಗ್ರರು ನುಗ್ಗಿದ್ದಾರೆ. ಆರು ವರ್ಷಗಳಿಂದ ಅಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ನಿರೂಪಕಿ ಶಬನಮ್ ದವ್ರಾನ್ಗೆ ಕೆಲಸ ಮಾಡದಂತೆ ನಿರ್ಬಂಧ ಹೇರಿದ್ದಾರೆ. 'ನೀನು ಮಹಿಳೆ, ಮನೆಗೆ ತೆರಳು' ಎಂದು ತಾಲಿಬಾನಿಗಳು ತಾಕೀತು ಮಾಡಿದರು ಎಂದು ನಿರೂಪಕಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.