ನಟ ಸತ್ಯಜೀತ್ ನೋವಿನ ಕಥೆಗೆ ಅಂತ್ಯ ಹಾಡಿದ ಕೃತಕ ಕಾಲು
Recommended Video
ಸತ್ಯಜಿತ್-ಬ ಸ್ಯಾಂಡಲ್ವುಡ್ನ ಬಹುದೊಡ್ಡ ಕಲಾವಿದ. ಹತ್ತಾರು ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸಿ ಉತ್ತರ ಕರ್ನಾಟಕದ ಕೀರ್ತಿ ಪತಾಕಿ ಹಾರಿಸಿದವರು. ಓದಿದ್ದು ಹತ್ತನೇ ಕ್ಲಾಸ್, ಆದರೂ ಅವರ ಪ್ರತಿಭೆ ಮಾತ್ರ ಅನನ್ಯ ಅಪ್ರತಿಮ.
ಒಂದು ಕಾಲದಲ್ಲಿ ಬಹುಬೇಡಿಕೆಯುಳ್ಳ ನಟನಾಗಿದ್ರು. ಲಕ್ಷ ಲಕ್ಷ ಸಂಬಳ ಪಡೀತಾಯಿದ್ರು. ಆದ್ರೆ, ಇಂಥ ಕಲಾವಿದ ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗಾಗಿ ಅಲೆದಾಡುವ ಪರಿಸ್ಥಿತಿಯನ್ನು ಎದುರಿಸಿದ್ದಾರೆ.
ನಟ ಸತ್ಯಜೀತ್ ಯಾರಿಗೆ ಗೊತ್ತಿಲ್ಲ ಹೇಳಿ. ಕನ್ನಡ ಸಿನಿಮಾ ಇಂಡಸ್ಟ್ರೀಯ ಬಹುದೊಡ್ಡ ಕಲಾವಿದ. ಮೇರು ಖಳನಟರ ಸಾಲಿನಲ್ಲಿ ಇವರ ಹೆಸರೂ ಸಹ ಕೇಳಿಬರುತ್ತೆ. ಇಂಥ ನಟ ಈಗ ಹಾಸಿಗೆ ಹಿಡಿದಿದ್ದಾರೆ. ಚಿಕಿತ್ಸೆಗಾಗಿ ಊರೂರು ಅಲೆದಾಡುತ್ತಿದ್ದಾರೆ. ಗ್ಯಾಂಗ್ರಿನ್ ನಿಂದ ಎಡಗಾಲನ್ನ ಕಳೆದುಕೊಂಡ ಸತ್ಯಜೀತ್, ಈಗ ಕಾಲಿಲ್ಲದ ಅಂಗವಿಕಲ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ ಆದ್ರೆ ಇದೇ ಸತ್ಯಜೀತ್ ಇವತ್ತು ಮುಳುಗಡೆ ನಗರಿ ಬಾಗಲಕೋಟೆಯಲ್ಲಿ ಬೀಡುಬಿಟ್ಟಿದ್ದರು.
ಸತ್ಯಜೀತ್ ಗೆ ಮತ್ತೆ ಮಿಂಚುವ ಭರವಸೆ ಇದೆ
ಎಡಗಾಲಿಗೆ ಕೃತಕ ಕಾಲನ್ನ ಜೋಡಿಸಿಕೊಂಡು ಮತ್ತೆ ಇಂಡಸ್ಟ್ರೀಯಲ್ಲಿ ಮಿಂಚುವ ಭರವಸೆಯನ್ನ ವ್ಯಕ್ತಪಡಿಸಿದ್ರು. ಬಾಗಲಕೋಟೆಯ ಖಾಸಗಿ ಹೊಟೆಲ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಒರಿಸ್ಸಾ ಮೂಲದ ಶ್ರೀಧರ್ ನಾಯಕ್ ಎನ್ನುವ ವೈದ್ಯರ ಬಳಿ ಕೃತಕ ಕಾಲು ಜೋಡಣೆಯ ಚಿಕಿತ್ಸೆಗೆ ಆಗಮಿಸಿದ್ದಾಗಿ ಹೇಳಿದ್ರು. ವೈದ್ಯ ಶ್ರೀಧರ್ ನಾಯಕ ಕೇವಲ ಎರಡು ಲಕ್ಷದ ಇಪ್ಪತ್ತು ಸಾವಿರದಲ್ಲಿ ನನಗೆ ಕೃತಕ ಕಾಲು ರೆಡಿ ಮಾಡಿದ್ದಾರೆ
ನೆರವಾಗಿದ್ದ ಸ್ಟಾರ್ ನಟರು
ಈ ಹಿಂದೆ ನನ್ನ ಕಾಲಿನ ಆಪರೇಷನ್ಗೆ ನಟರಾದ ಶಿವರಾಜಕುಮಾರ್, ಉಪೇಂದ್ರ ಹಾಗೂ ಅಪ್ಪು ತಲಾ ಒಂದು ಲಕ್ಷ ನೀಡಿ ಸಹಾಯ ಮಾಡಿದ್ದಾರೆ, ಸರ್ಕಾರ ನಾಲ್ಕು ಲಕ್ಷದಷ್ಟು ಪರಿಹಾರ ನೀಡಿದೆ. ಇನ್ನು ಇದೇ ವೇಳೆ ಕನ್ನಡ ಇಂಡಸ್ಟ್ರೀ ಮತ್ತು ಅಲ್ಲಿನ ಅವ್ಯವಸ್ಥೆಯ ಬಗ್ಗೆಯೂ ಅಸಮಾಧಾನ ಹೊರಹಾಕಿದ್ರು.
ಕಲಾವಿದರ ಸಂಘದಿಂದ ನೆರವು ಸಿಕ್ಕಿಲ್ಲ
ಗ್ಯಾಂಗ್ರಿನ್ ನಿಂದಾಗಿ ನನ್ನ ಕಾಲು ಕಟ್ ಆಗಿದೆಯಾದ್ರೂ ಕಲಾವಿದರ ಸಂಘದಿಂದ ಇನ್ನೂ ಪರಿಹಾರ ಸಿಕ್ಕಿಲ್ಲ, ಹಿರಿಯ ನಟ ಅಂಬರೀಶ್ ನೀನು ಹೇಗಿದ್ದೀಯಾ ಎಂದು ಕೇಳಿಲ್ಲ ಎಂದು ಹಿರಿಯ ನಟ ಸತ್ಯಜೀತ್ ಅಳಲನ್ನು ತೋಡಿಕೊಂಡಿದ್ದಾರೆ. ಕೃತಕ ಕಾಲು ಅಳವಡಿಕೆ ಚಿಕಿತ್ಸೆಗಾಗಿ ಬಾಗಲಕೋಟೆಗೆ ಆಗಮಿಸಿದ ಸತ್ಯಜಿತ್,ಧನಸಹಾಯ ಮಾಡದ ಕಲಾವಿದರ ಸಂಘದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಪ್ರತಿಭೆಗಳಿಗೆ ಬೆಲೆ ಕೊಡಿ
ಇನ್ನು ಸಿನೆಮಾ ಇಂಡಸ್ಟ್ರೀ ನಿಂತಿರೋದೆ ಉತ್ತರ ಕರ್ನಾಟಕದಿಂದ ಆದ್ರೂ ಅಲ್ಲಿ ಉತ್ತರ ಕರ್ನಾಟಕ ಪ್ರತಿಭೆಗಳಿಗೆ ಅವಕಾಶವಿಲ್ಲ, ಸಿನೆಮಾ ಅಂದ್ರೆ ಕೇವಲ ಬೆಂಗಳೂರು ಅಲ್ಲ ಎಂದು ಪ್ರಾದೇಶಿಕ ತಾರತಮ್ಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕ ಬಾಷೆ ಹಾಗೂ ಕಲಾವಿದರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದರು.
ಮತ್ತೆ ನಟಿಸುವ ಅಭಿಲಾಷೆ ಇದೆ
ನನ್ನ ಬಳಿ ಕಥೆ ಇದೆ ಉತ್ತರ ಕರ್ನಾಟಕ ನಿರ್ಮಾಪಕರು ಸಿನಿಮಾ ಮಾಡೋಕೆ ಹೆಚ್ಚಾಗಿ ಮುಂದೆ ಬರಬೇಕು ಉತ್ತರ ಕರ್ನಾಟಕ ಬಾಷೆಯಲ್ಲಿ ಫಿಲ್ಮ್ ಮಾಡಿ ಎಂದು ನಿರ್ಮಾಪಕರಿಗೆ ಆಹ್ವಾನ ನೀಡಿದ್ರು. ನನ್ನ 35 ವರ್ಷಗಳ ಸಿನಿಮಾ ಜರ್ನಿಯಲ್ಲಿ 654 ಸಿನೆಮಾಗಳಲ್ಲಿ ನಟಿಸಿದ್ದೇನೆ, ಕಾಲು ಜೋಡಣೆಯ ನಂತರ ಮತ್ತೆ ನಟಿಸುವ ಅಭಿಲಾಷೆ ಇದೆ, ನಿಮ್ಮ ಆರ್ಶೀವಾದ ಇರಲಿ ಎಂದು ಅಭಿಮಾನಿಗಳಿಗೆ ಮನವಿ ಮಡಿಕೊಂಡ್ರು.
ಕಾಲು ಜೋಡಣೆಯಾದರೂ ಸತ್ಯಜೀವ್ ಗೆ ನೋವಿದೆ
ಖಳನಟನಾಗಿ, ಹಾಸ್ಯನಟನಾಗಿ, ಪೋಷಕನಟನಾಗಿ ತಮ್ಮದೆ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿರುವ ಸತ್ಯಜೀತ್ ಅವರ ಕಾಲಿಗೆ ಕೃತಕ ಕಾಲು ಜೋಡಣೆಯಾಗಿದೆ. ಕಲಾವಿದರನ್ನು ವಾಣಿಜ್ಯ ಮಂಡಳಿ, ಕಲಾವಿದರ ಸಂಘ ನಡೆಸಿಕೊಳ್ಳುವ ರೀತಿಯ ಬಗ್ಗೆ ಅವರಿಗೆ ಬೇಸರವಿದೆ, ನೋವಿದೆ. ಆದರೆ, ಮತ್ತೆ ಕಲಾ ಸೇವೆ ಸಿದ್ಧರಾಗುವ ಉತ್ಸಾಹ ಇನ್ನೂ ಅವರಲ್ಲಿದೆ.