ಬಸವಣ್ಣನ ಭಕ್ತರಿಗೆ ಆಘಾತ: ಐಕ್ಯ ಮಂಟಪಕ್ಕೆ ಪ್ರವೇಶ ನಿರ್ಬಂಧ
ಬಾಗಲಕೋಟೆ, ಮೇ 21: ಇತಿಹಾಸ ಪ್ರಸಿದ್ಧ ಬಸವಣ್ಣನವರ ಐಕ್ಯ ಮಂಟಪಕ್ಕೆ ಇನ್ನು ಕೆಲವು ದಿನಗಳವರೆಗೆ ಭಕ್ತರು ಪ್ರವೇಶಿಸುವಂತಿಲ್ಲ. ದುರಸ್ತಿ ಕಾರ್ಯದ ಪ್ರಯುಕ್ತ ಐಕ್ಯ ಮಂಟಪಕ್ಕೆ ತಾತ್ಕಾಲಿಕ ಪ್ರವೇಶ ನಿರ್ಬಂಧಿಸಲಾಗಿದೆ.
ರಾಜ್ಯದ ಪ್ರಮುಖ ಧಾರ್ಮಿಕ ತಾಣಗಳಲ್ಲಿ ಒಂದಾದ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿರುವ ಬಸವಣ್ಣನವರ ಐಕ್ಯ ಮಂಟಪ ಹಾನಿಗೊಳಗಾಗಿದೆ. ಮಂಟಪದಲ್ಲಿನ ಬಾವಿ ಆಗಾರದ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ಬಿರುಕು ಅಪಾಯಕ್ಕೆ ಎಡೆಮಾಡಿಕೊಡುವಂತಿತ್ತು. ಯಾವುದೇ ಸಂದರ್ಭದಲ್ಲಿ ಬೇಕಾದರೂ ಅದು ಕುಸಿದು ಬೀಳುವ ಸಂಭವ ಇರುವುದರಿಂದ ಅಲ್ಲಿಗೆ ಭೇಟಿ ನೀಡುವ ಭಕ್ತರಿಗೆ ಹಾನಿಯಾಗುವ ಅಪಾಯವಿತ್ತು.
ಬಸವಣ್ಣನ ಐಕ್ಯಸ್ಥಳದಲ್ಲಿನ ಇಷ್ಟಲಿಂಗದಲ್ಲಿ ಬಿರುಕು
ಈ ಬಗ್ಗೆ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಜಿಲ್ಲಾಡಳಿತ ಅದರ ದುರಸ್ತಿಗೆ ಮುಂದಾಗಿದೆ. ಹೀಗಾಗಿ ಐಕ್ಯ ಮಂಟಪದೊಳಗೆ ಪ್ರವೇಶಿಸಲು ಭಕ್ತರಿಗೆ ಮುನ್ನೆಚ್ಚರಿಕೆಯಿಂದ ನಿರ್ಬಂಧ ವಿಧಿಸಲಾಗಿದೆ. ದುರಸ್ತಿ ಕಾರ್ಯ ಮುಗಿಯುವವರೆಗೂ ಈ ನಿರ್ಬಂಧ ಮುಂದುವರಿಯಲಿದೆ ಎನ್ನಲಾಗಿದೆ.
ಇದರಿಂದ ಐತಿಹಾಸಿಕ ಧಾರ್ಮಿಕ ಮತ್ತು ಪ್ರವಾಸಿ ಕೇಂದ್ರವಾಗಿರುವ ಕೂಡಲಸಂಗಮಕ್ಕೆ ಭೇಟಿ ನೀಡುವ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಸಂಕಷ್ಟ ಎದುರಾಗಿದೆ. ರಜೆ ಕಾಲವಾಗಿರುವುದರಿಂದ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಆದರೆ, ರಜೆ ಅವಧಿ ಮುಕ್ತಾಯವಾಗುತ್ತಾ ಬಂದಿರುವುದರಿಂದ ಹಾಗೂ ಮಳೆಗಾಲ ಆರಂಭವಾಗಲಿರುವುದರಿಂದ ಇದು ದುರಸ್ತಿ ಕಾರ್ಯ ನಡೆಸಲು ಸೂಕ್ತ ಸಮಯವಾಗಿದೆ.
ಪಿಲ್ಲರ್ಗಳಲ್ಲಿ ಬಿರುಕು
ಐಕ್ಯಮಂಟಪದ ಬಾವಿ ಪಿಲ್ಲರ್ಗಳ ಪ್ಲಾಸ್ಟರ್ ಕೂಡ ಕಿತ್ತು ಬಂದಿದೆ. ಅವುಗಳನ್ನು ಸಂಪೂರ್ಣವಾಗಿ ದುರಸ್ತಿಪಡಿಸಿ ಮೊದಲಿನ ಸ್ಥಿತಿಗೆ ತರಬೇಕಾಗಿದೆ.
ಬಾವಿ ಆಕಾರದ ಮೆಟ್ಟಿಲುಗಳ ಕೆಳಗೆ ಕೂಡ ಪ್ಲಾಸ್ಟರ್ಗಳು ಕಿತ್ತುಬಂದಿವೆ. ಜತೆಗೆ ಬಾವಿಯ ಪಿಲ್ಲರ್ಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಈ ಬಗ್ಗೆ ಕೂಡಲಸಂಗಮ ಅಭಿವೃದ್ಧಿ ಮಂಡಳಿಯಿಂದ ಆರ್ ಆಂಡ್ ಆರ್ ಆಯುಕ್ತ ಮೇಘಣ್ಣವರ ಅವರಿಗೆ ಮಾಹಿತಿ ನೀಡಿತ್ತು.
1979ರಲ್ಲಿ ಐಕ್ಯ ಮಂಟಪ ನಿರ್ಮಾಣ
1979ರಲ್ಲಿ ಇಲ್ಲಿ ಐಕ್ಯ ಮಂಟಪವನ್ನು ನಿರ್ಮಿಸಲಾಗಿತ್ತು. ಇದನ್ನು 1998ರಲ್ಲಿ ಆರ್ ಆಂಡ್ ಆರ್ ವಿಭಾಗದ ಆಗಿನ ಆಯುಕ್ತ ಎಸ್.ಎಂ. ಜಾಮದಾರ್ ನವೀಕರಣಗೊಳಿಸಿದ್ದರು. ಆಗ ಸುಮಾರು 34 ಕೋಟಿ ರೂ. ವೆಚ್ಚದಲ್ಲಿ ಅದಕ್ಕೆ ಸೇತುವೆ ನಿರ್ಮಾಣದ ಜತೆಗೆ ಮಂಟಪದ ಆಧುನೀಕರಣ ಕಾರ್ಯ ನಡೆಸಲಾಗಿತ್ತು. ನೀರಿನಲ್ಲಿಯೇ ಇರುವುದರಿಂದ ಕಟ್ಟಡದ ಕಂಬಗಳಲ್ಲಿ ಬಿರುಕು ಉಂಟಾಗಿದೆ. ದುರಸ್ತಿಗೆ ಕನಿಷ್ಠ ಒಂದು ತಿಂಗಳು ಬೇಕಾಗಬಹುದು. ಅಲ್ಲಿಯವರೆಗೂ ಸಾರ್ವಜನಿಕರ ಪ್ರವೇಶಕ್ಕೆ ಮಂಟಪ ಲಭ್ಯವಾಗುವುದು ಅನುಮಾನ.
'ಕಾಯಕ ಯೋಗಿ' ಅಣ್ಣ ಬಸವಣ್ಣನ ನೆನೆದ ಪ್ರಧಾನಿ ಮೋದಿ
ಲಿಂಗದಲ್ಲಿ ಬಿರುಕು ಮೂಡಿತ್ತು
ಇದಕ್ಕೂ ಮೊದಲು ಐಕ್ಯ ಮಂಪಟಲ್ಲಿರುವ ಲಿಂಗದಲ್ಲಿ ಬಿರುಕು ಬಿಟ್ಟಿರುವುದು ಸುದ್ದಿಯಾಗಿತ್ತು. ಅದನ್ನು ಪರಿಶೀಲನೆ ಮಾಡಿದ್ದ ಗೃಹ ಸಚಿವ ಎಂಬಿ ಪಾಟೀಲ್, ಶಿವಲಿಂಗಕ್ಕೆ ಕಂತಿ ಮಾಡಿದ ಭಾಗಕ್ಕೆ ಮಾತ್ರ ಹಾನಿಯಾಗಿದೆ. ಶಿವಲಿಂಗದ ಮೂಲಸ್ವರೂಪಕ್ಕೆ ಯಾವುದೇ ಧಕ್ಕೆಯಾಗಿಲ್ಲ ಎಂದಿದ್ದರು. ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳ ತಂಡದಿಂದ ಪರಿಣತರನ್ನು ಕರೆಯಿಸಿ ಮತ್ತೊಮ್ಮೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದರು.
ಫೈಬರ್ ಗ್ಲಾಸ್ ಅಳವಡಿಕೆ
ಕೃಷ್ಣಾ ಮತ್ತು ಮಲಪ್ರಭಾ ನದಿಗಳ ಸಂಗಮದಲ್ಲಿ ಬಸವಣ್ಣನವರ ಐಕ್ಯಮಂಟಪವಿದೆ. ನಿತ್ಯವೂ ಇಲ್ಲಿಗೆ ನೂರಾರು ಸಂಖ್ಯೆಯ ಭಕ್ತರು ಬರುತ್ತಾರೆ. ಐಕ್ಯ ಸ್ಥಳದ ಸುತ್ತಮುತ್ತ ಮೂಢನಂಬಿಕೆಗಳನ್ನು ಬಿತ್ತುವ ಚಟುವಟಿಕೆಗಳು ಸಹ ನಡೆಯುತ್ತಿವೆ ಎಂದು ಆರೋಪಿಸಲಾಗಿದೆ. ಐಕ್ಯ ಸ್ಥಳ ಲಿಂಗದ ಸುತ್ತಲೂ ಫೈಬರ್ ಗ್ಲಾಸ್ ಅಳವಡಿಸುವುದು ಸೂಕ್ತ ಎಂದು ಭಕ್ತರು ಅಭಿಪ್ರಾಯವ್ಯಕ್ತಪಡಿಸಿದ್ದರು. ಲಿಂಗಕ್ಕೆ ನಾಣ್ಯ ಎಸೆಯುವುದರಿಂದ ಅದಕ್ಕೆ ಹಾನಿಯಾಗಿರಬಹುದು ಎಂದು ದೂರಿದ್ದರು. ಫೈಬರ್ ಗ್ಲಾಸ್ ಅಳವಡಿಸುವ ವಿಚಾರದಲ್ಲಿ ಎಂಬಿ ಪಾಟೀಲ್ ಕೂಡ ಸಹಮತ ವ್ಯಕ್ತಪಡಿಸಿದ್ದರು.