ರಸ್ತೆ ದುರಸ್ತಿಗೆ ಬಾಲಕಿ ಮನವಿ ವೈರಲ್ ವಿಡಿಯೋ: ಯಾರೋ ಓದಿಸಿದ್ದಾರೆ ಎಂದ ಡಿಸಿಎಂ
Recommended Video
ಬಾಗಲಕೋಟೆ, ಅಕ್ಟೋಬರ್ 22: ಜಿಲ್ಲೆಯ ಮುಧೋಳ ತಾಲ್ಲೂಕಿನ ರನ್ನ ಬೆಳಗಲಿಯಲ್ಲಿ ಮಳೆ, ಪ್ರವಾಹದಿಂದ ಹಾನಿಗೊಳಗಾದ ರಸ್ತೆಯನ್ನು ದುರಸ್ತಿಪಡಿಸುವಂತೆ ಬಾಲಕಿಯೊಬ್ಬಳು ಸರ್ಕಾರಕ್ಕೆ ಮನವಿ ಮಾಡುವ ವಿಡಿಯೋ ವೈರಲ್ ಆಗಿದೆ. ರಸ್ತೆ ಮೇಲೆ ನೀರು ಹರಿಯುತ್ತಿದ್ದರೂ ಸರಿಪಡಿಸಲು ಯಾರೂ ಬರುತ್ತಿಲ್ಲ ಎಂದು ಬಾಲಕಿ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಯಾರೋ ಆ ಬಾಲಕಿಯ ಮೂಲಕ ಪತ್ರ ಓದಿಸಿ ವಿಡಿಯೋ ಮಾಡಿದ್ದಾರೆ. ಅಲ್ಲಿ ರಸ್ತೆಯ ಮೇಲೆ ನೀರು ನಿಂತಿದೆ ಹೊರತು, ಪ್ರವಾಹ ಪರಿಸ್ಥಿತಿ ಉಂಟಾಗಿಲ್ಲ ಎಂದಿದ್ದಾರೆ.
ಗೋಕಾಕ್ ನಲ್ಲಿ ಬಂಡೆ ಉರುಳುವ ಭೀತಿ; ಎನ್ ಡಿಆರ್ ಎಫ್ ತಂಡ ಭೇಟಿ
ಬಾಲಕಿ ಅನ್ನಪೂರ್ಣ ಬಾಳಪ್ಪ ಮಠದ ನೀರಿನಿಂದ ಆವೃತವಾದ ರಸ್ತೆಯಲ್ಲಿ ನಿಂತು ಪತ್ರವನ್ನು ಓದಿದ್ದಾಳೆ. ನಮ್ಮ ರಸ್ತೆ ಜಲಾವೃತವಾಗಿದೆ. ಮೂರು ದಿನಗಳಿಂದ ನೀರು ಹರಿದುಬರುತ್ತಿದೆ. ಯಾರೂ ಕೂಡ ಈ ಕುರಿತು ಕ್ರಮ ತೆಗೆದುಕೊಂಡಿಲ್ಲ. ನೀವು ನಿಜವಾಗಿಯೂ ಜನಸೇವೆ ಮಾಡಲು ಪ್ರಮಾಣ ಮಾಡಿದ್ದರೆ ಹೀಗೇಕೆ ಆಗುತ್ತಿತ್ತು. ಒಂದು ರಸ್ತೆಯನ್ನು ಸರಿಮಾಡಲು ಆಗದಿದ್ದರೆ ನೀವೇಕೆ ಜನಪ್ರತಿನಿಧಿಗಳಾಗಬೇಕು? ಎಂದು ಗೋವಿಂದ ಕಾರಜೋಳ ಅವರನ್ನು ಉದ್ದೇಶಿಸಿ ತರಾಟೆ ತೆಗೆದುಕೊಂಡಿದ್ದಾಳೆ.
ಹೆಚ್ಚಿದ ಮಳೆ; ತುಂಗಭದ್ರಾ ಜಲಾಶಯದಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಾರಜೋಳ, ರನ್ನ ಬೆಳಗಲಿಯಲ್ಲಿ ಪ್ರವಾಹ ಉಂಟಾಗಿಲ್ಲ. ಅದು ರೈತರ ಹೊಲಗಳಿಗೆ ಮತ್ತು ಸಣ್ಣ ಜನವಸತಿ ಇರುವ ಪ್ರದೇಶಕ್ಕೆ ಹೋಗುವ ರಸ್ತೆ. ಇಲ್ಲಿ ಮಳೆ ನೀರು ನಿಂತಿದೆಯಷ್ಟೇ. ಯಾರೋ ಒಬ್ಬರು ಈ ಮಗುವಿನ ಮೂಲಕ ಪತ್ರ ಓದಿಸಿದ್ದಾರೆ. ಅದು ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯೂ ಅಲ್ಲ. ಪಟ್ಟಣ ಪಂಚಾಯಿತಿಗೆ ಸೇರಿದ ರಸ್ತೆ. ನಾನು ನಾಳೆ ಕ್ಷೇತ್ರಕ್ಕೆ ಹೊರಟಿದ್ದೇನೆ. ನೀವೇ ಬೇಕಾದರು ಬೆಳಗಲಿಗೆ ಬಂದು ನೋಡಿ ಎಂದರು.
ಬೆಳಗಾವಿಯಲ್ಲಿ ಮಳೆ ಬಿರುಸಾಗುವ ಸಾಧ್ಯತೆ; ಮಲಪ್ರಭಾ ತಟದ ಹಳ್ಳಿಗಳಲ್ಲಿ ಹೈ ಅಲರ್ಟ್
ಈ ರಸ್ತೆಯನ್ನು ದುರಸ್ತಿ ಮಾಡಲು ಸಹ ಸೂಚಿಸುತ್ತೇನೆ. ಈಗ ಮಳೆ ಇರುವುದರಿಂದ ದುರಸ್ತಿ ಕಾರ್ಯ ಸಾಧ್ಯವಾಗುವುದಿಲ್ಲ. ಮಳೆ ನಿಂತ ಬಳಿಕ ಕೆಲಸ ನಡೆಯಲಿದೆ ಎಂದು ತಿಳಿಸಿದರು.