ಸಿದ್ದರಾಮಯ್ಯಗೆ ಜೆಡಿಎಸ್ನಲ್ಲಾದ ಸ್ಥಿತಿ 'ಕೈ'ನಲ್ಲೂ ಬರುತ್ತದೆ: ಈಶ್ವರಪ್ಪ
ಬಾಗಲಕೋಟೆ, ಮೇ 13: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೆಡಿಎಸ್ನಲ್ಲಿ ಆದ ಸ್ಥಿತಿಯೇ ಕಾಂಗ್ರೆಸ್ನಲ್ಲಿಯೂ ಬರುತ್ತದೆ. ಅಲ್ಲಿ ಉಚ್ಚಾಟನೆ ಆದಂತೆ, ಇಲ್ಲಿಯೂ ಆಗುತ್ತಾರೆ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಹೇಳಿದರು.
ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, ಸಿದ್ದರಾಮಯ್ಯ ಅವರು ತಾವೇ ಮುಖ್ಯಮಂತ್ರಿ ಎಂದು ಓಡಾಡುತ್ತಿದ್ದಾರೆ. ಇದೊಂದು ರೀತಿ ಮದುಕಿ ಯೌವನದಲ್ಲಿನ ತನ್ನ ತುರುಬನ್ನು ನೆನಪಿಸಿಕೊಂಡು ಸಂಭ್ರಮಿಸುವ ಹಾಗೆ ಎಂದು ಲೇವಡಿ ಮಾಡಿದರು.
ಈ ಜನ್ಮದಲ್ಲಿ ಸಿದ್ದು ಸಿಎಂ ಆಗೊಲ್ಲ, ರಾಹುಲ್ ಗಾಂಧಿ ಮದುವೆ ಆಗೊಲ್ಲ: ಈಶ್ವರಪ್ಪ ಲೇವಡಿ
ಸಿದ್ದರಾಮಯ್ಯ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಕಾಂಗ್ರೆಸ್ನ ಕೆಲವು ಚೇಲಾ ಶಾಸಕರಿಂದ ಹೇಳಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರದು ತಿರುಕನ ಕನಸು. ಸಿಎಂ ಆಗುವ ಹುಚ್ಚಿನಿಂದ ಅವರು ಹೊರ ಬರಬೇಕು. ಕಾಂಗ್ರೆಸ್ನ ಕಾಟದಿಂದ ಕುಮಾರಸ್ವಾಮಿ ವರ್ಷವಿಡೀ ಕಣ್ಣೀರು ಹಾಕಿದರು ಎಂದರು.
ಈಶ್ವರಪ್ಪ ಅವರಿಗೆ ತಾಕತ್ತಿದ್ದರೆ ತಾವೇ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಲಿ ಎಂಬ ಸಿದ್ದರಾಮಯ್ಯ ಅವರ ಸವಾಲಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಶಿಸ್ತಿನ ಪಕ್ಷ. ನಾಟಕದ ಪಕ್ಷವಲ್ಲ. ಅವರಂತೆ ನಾವು ಹೇಳಿಕೊಳ್ಳುವುದಿಲ್ಲ ಎಂದರು.
ದಿನೇಶ್ ಗುಂಡೂರಾವ್ ಬಟ್ಟೆಹಾವು
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒಬ್ಬ ಬಟ್ಟೆ ಹಾವು. ಸಿದ್ದರಾಮಯ್ಯ ಅವರ ಚೇಲಾಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿಲ್ಲ. ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತಾರೆ ಎಂದು ಹೇಳಿಕೆ ನೀಡಿದ ಶಾಸಕರಿಗೆ ನೋಟಿಸ್ ಕೊಟ್ಟಿಲ್ಲ. ಬದಲಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ವಿರುದ್ಧ ಹರಿಹಾಯುತ್ತಿದ್ದಾರೆ ಎಂದು ಟೀಕಿಸಿದರು.
ರಮೇಶ್ ಬಿಜೆಪಿ ಸೇರುತ್ತಾರೆ
ಕಾಂಗ್ರೆಸ್ ಮತ್ತು ಜೆಡಿಎಸ್ನಲ್ಲಿ ಇನ್ನೂ ಬಹಳ ಮಂದಿ ಅತೃಪ್ತ ಶಾಸಕರಿದ್ದಾರೆ. ಅವರು ಬಹಿರಂಗವಾಗಿ ಮಾತನಾಡುತ್ತಿಲ್ಲವಷ್ಟೇ. ಸದ್ಯ ರಮೇಶ್ ಜಾರಕಿಹೊಳಿ ಮಾತ್ರ ಮಾತನಾಡುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್ನ ಅನೇಕ ಅತೃಪ್ತ ಶಾಸಕರು ಬಿಜೆಪಿ ಸೇರಿಕೊಳ್ಳಲಿದ್ದಾರೆ. ನಮ್ಮ ಸಂಖ್ಯಾಬಲ 104 ಇರುವುದು 106 ಆಗುತ್ತದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ನಾಯಕರ ಮೇಲೆ ಬೆಂಕಿ ಉಗುಳಿದ ಸಿದ್ದರಾಮಯ್ಯ
ಬಿಜೆಪಿಗೆ ಹೆಚ್ಚಿನ ಸ್ಥಾನ
ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿಂದಿಗಿಂತಲೂ ಹೆಚ್ಚು ಸ್ಥಾನಗಳು ಬರುತ್ತವೆ. ಇಲ್ಲಿ ಜನರ ಒಲವು ಬಿಜೆಪಿ ಕಡೆಗಿದೆ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಹುದ್ದೆಗೆ ಏರಲಿದ್ದಾರೆ. ಮೇ 23ರ ಬಳಿಕ ರಾಜ್ಯದಲ್ಲಿ ಬಿಜೆಪಿ ಪುನಃ ಅಧಿಕಾರಕ್ಕೆ ಬರಲಿದೆ.
ನಾಲಿಗೆ ಮೇಲೆ ಏನಿದೆಯೋ..
ಮೇ 23ರ ನಂತರ ಸಿದ್ದರಾಮಯ್ಯ ಎಲ್ಲಿರುತ್ತಾರೆ ಎಂಬುದನ್ನು ನೋಡುತ್ತಿರಿ. ಸಿದ್ದರಾಮಯ್ಯ ಅವರಿಗೆ ವಯಸ್ಸಾಗಿದೆ. ಆದರೂ ಮುದುಕಿಯಂತೆ ತುರುಬು ಕಟ್ಟಿಕೊಳ್ಳೋಕೆ ಹೋಗ್ತಿದ್ದಾರೆ. ಅವರ ನಾಲಿಗೆ ಮೇಲೆ ಏನಿದೆಯೋ ಗೊತ್ತಿಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಮತ್ತು ಮೋದಿ ಅವರಿಗೆ ಅವನು ಇವನು ಎನ್ನುತ್ತಾರೆ. ಶೋಭಾ ಕರಂದ್ಲಾಜೆಗೆ ಅವಳು ಇವಳು ಎಂದು ಏಕವಚನದಲ್ಲಿ ಅನ್ನುತ್ತಾರೆ ಎಂದು ಕಿಡಿಕಾರಿದರು.