ಬಾಗಲಕೋಟೆ: ಮೂಲಭೂತ ಸೌಕರ್ಯಗಳಿಲ್ಲದೇ ಸೊರಗಿದ ವಾಜಪೇಯಿ ಕಾಲೋನಿ
ಬಾಗಲಕೋಟೆ, ಜೂ.20: ಸರಕಾರ ಬಡವರ ತಲೆ ಮೇಲೆ ಸೂರಿರಲಿ ಅಂತ ಆಶ್ರಯ ಯೋಜನೆ ಜಾರಿಗೆ ತಂದಿದೆ. ಇಂತಹ ಮಹತ್ವಾಕಾಂಕ್ಷಿ ಯೋಜನೆ ಮೂಲಕ ಎಷ್ಟೋ ಬಡಜನರು ಮನೆ ಸೌಲಭ್ಯ ಪಡೆದು ನೆಮ್ಮದಿಯಿಂದ ಇದ್ದಾರೆ. ಆದರೆ ಬಾಗಲಕೋಟೆಯ ಪಟ್ಟಣವೊಂದರಲ್ಲಿ ಈ ಯೋಜನೆ ಹಳ್ಳ ಹಿಡಿದಿದೆ. ಎಷ್ಟೋ ಮನೆಗಳು ಅರ್ಧಂಬರ್ಧ ಇದ್ದರೆ, ಅಲ್ಲಿರುವ ನಿವಾಸಿಗಳಿಗೇ ಮೂಲಭೂತ ಸೌಲಭ್ಯವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಇದರಿಂದ ಆಶ್ರಯ ಯೋಜನೆಗೆ ಬಂದ ಸರಕಾರದ ಕೋಟಿ ಕೋಟಿ ಅನುದಾನ ನೀರಲ್ಲಿ ಹೋಮ ಮಾಡಿದಂತಾಗುತ್ತಿದೆ.
ಕರ್ನಾಟಕದಲ್ಲಿ ಮೋದಿ: ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ವಿವರ
ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದ ವಾಜಪೇಯಿ ಆಶ್ರಯ ಕಾಲೋನಿಯಲ್ಲಿ ಸೆಂಟ್ರಿಂಗ್ ಹಂತದಲ್ಲೇ ನಿಂತ ಮನೆಗಳು ಮನೆಗಳು ಅಸ್ಥಿಪಂಜರದಂತೆ ಕಾಣುತ್ತಿವೆ. ಸರಕಾರ ಬಡವರಿಗೆ ತಲೆ ಮೇಲೆ ಒಂದು ಸೂರು ಇರಲಿ ಎಂದು ವಿವಿಧ ಆಶ್ರಯ ಯೋಜನೆಗಳನ್ನು ಜಾರಿ ಮಾಡಿದೆ. ಅದರಲ್ಲಿ ವಾಜಪೇಯಿ ನಗರ ವಸತಿ ಯೋಜನೆ ಕೂಡ ಒಂದು. ಆದರೆ ಈ ಯೋಜನೆಯಲ್ಲಿ ಜಾರಿಯಾದ ಸಾವಿರಕ್ಕೂ ಅಧಿಕ ಮನೆಗಳ ಸ್ಥಿತಿ ನೋಡಿದರೆ ಯೋಜನೆ ಸಂಪೂರ್ಣ ಹಳ್ಳ ಹಿಡಿದಂತಾಗಿದೆ.
ಕೆಲವೇ ಮನೆಗಳು ಪೂರ್ಣ
ಬೀಳಗಿ ಪಟ್ಟಣದ ಹೊರವಲಯದಲ್ಲಿ ವಾಜಪೇಯಿ ಆಶ್ರಯ ಯೋಜನೆಯಲ್ಲಿ ಮನೆಗಳನ್ನು ಕಟ್ಟಿಸಿದ್ದು, ಕೆಲವೇ ಕೆಲ ಮನೆಗಳು ಪೂರ್ಣಗೊಂಡಿವೆ. ಬಹುತೇಕ ಮನೆಗಳು ಅರ್ಧಂಬರ್ಧ ಸ್ಥಿತಿಯಲ್ಲಿವೆ. ಕಟ್ಟಿಸಿದ ಮನೆಗಳು ಕೂಡ ಯಾರು ವಾಸ ಮಾಡದ ಹಿನ್ನೆಲೆ ಶಿಥಿಲಾವಸ್ಥೆಗೆ ತಲುಪಿದರೆ, ನಿರ್ಮಾಣ ಹಂತದಲ್ಲೇ ನೂರಾರು ಮನೆಗಳು ಅವನತಿ ಅಂಚಿಗೆ ಸಾಗಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಮನೆಗಳನ್ನು ಪೂರ್ಣಗೊಳಿಸದ ಕಾರಣ ಇಲ್ಲಿಯವರೆಗೆ ಮಾಡಿದ ಖರ್ಚು ವ್ಯರ್ಥವಾಗುತ್ತಿದೆ.
ನೀರು, ವಿದ್ಯುತ್ ಸೌಲಭ್ಯವಿಲ್ಲ
ಇಲ್ಲಿ ಇದುವರೆಗೂ ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸದಿರೋದು ಈ ದುರವಸ್ಥೆಗೆ ಪ್ರಮುಖ ಕಾರಣವಾಗಿದೆ. ಈ ಸ್ಥಳಕ್ಕೆ ಸರಿಯಾದ ರಸ್ತೆಗಳಿಲ್ಲ, ವಿದ್ಯುತ್ ಸೌಲಭ್ಯವಿಲ್ಲ, ಕುಡಿಯುವ ನೀರಿನ ಸೌಲಭ್ಯ ಅಂತೂ ಇಲ್ಲವೇ ಇಲ್ಲ. ಇದರಿಂದ ಇಲ್ಲಿ ವಾಸವಿದ್ದ ಕೆಲವೇ ಕೆಲ ನಿವಾಸಿಗಳು ಕೂಡ ಹೈರಾಣಾಗಿದ್ದು, ನಮಗೆ ಮೂಲಭೂತ ಸೌಲಭ್ಯ ಕಲ್ಪಿಸಿ ಕೊಡಿ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ರಾಜ್ಯಕ್ಕೆ ಅನ್ಯಾಯವೆಸಗಿ ಯೋಗ ಮಾಡಲು ಬಂದ ಮೋದಿ- ಸಿದ್ದರಾಮಯ್ಯ ಗುಡುಗು
ರಾಜ್ಯ ಸರಕಾರದ ಅನುದಾನ ಬಾರದ ಹಿನ್ನೆಲೆ ಕೆಲಸ ಸ್ಥಗಿತ
2016-17ನೇ ಸಾಲಿನಲ್ಲಿ ಇಲ್ಲಿ ಒಟ್ಟು 1032 ಮನೆಗಳು ಮಂಜೂರಾಗಿದ್ದು, ಈಗಾಗಲೇ ಮನೆ ಮಾಲೀಕರಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ. ಒಂದು ಮನೆಗೆ ಕೇಂದ್ರ ಸರಕಾರದಿಂದ 1 ಲಕ್ಷ 50 ಸಾವಿರ, ರಾಜ್ಯ ಸರಕಾರದ 1 ಲಕ್ಷ 20 ಸಾವಿರ ಒಟ್ಟು 2 ಲಕ್ಷ 70 ಸಾವಿರ ಅನುದಾನ ನೀಡಲಾಗಿದೆ. ಫಲಾನುಭವಿಗಳು ತಾವೆ ಖುದ್ದಾಗಿ ಮನೆಗಳನ್ನು ಕಟ್ಟಿಸಿಕೊಳ್ಳಬಹುದಾಗಿದೆ. ಆದರೆ ಇಲ್ಲಿ ಕೆಲವೊಂದಿಷ್ಟು ಜನರಿಗೆ ಗುತ್ತಿಗೆದಾರರು ಮನೆಗಳನ್ನು ಕಟ್ಟಿಸಿಕೊಡುವುದಾಗಿ ಹಣ ಪಡೆದು ಅರ್ಧಂಬರ್ಧ ಕಟ್ಟಿ ಹೋಗಿದ್ದಾರಂತೆ. ಇನ್ನು ರಾಜ್ಯ ಸರಕಾರ 1 ಲಕ್ಷ 20 ಸಾವಿರ ಅನುದಾನ ಬಾರದ ಹಿನ್ನೆಲೆ ಕೆಲವೊಂದಿಷ್ಟು ಮನೆಗಳು ಅರ್ಧಕ್ಕೆ ನಿಂತಿವೆ.
ಕೆಲ ಫಲಾನುಭವಿಗಳು ಸ್ವಲ್ಪ ಹಣವನ್ನು ಕೈಯಿಂದ ಹಾಕಿ ತಮಗೆ ಅನುಕೂಲಕರ ನಿಟ್ಟಿನಲ್ಲಿ ಮನೆಗ ಕಟ್ಟಿಸಿಕೊಳ್ಳೋದಕ್ಕೆ ಮುಂದಾಗಿದ್ದು, ಹಣದ ಕೊರತೆಯಿಂದಲೂ ಮನೆ ಅರ್ಧ ಕಟ್ಟಿಸಿ ಸುಮ್ಮನಿದ್ದಾರೆ. ಇನ್ನು ಕೆಲವರು ಇಲ್ಲಿ ಮನೆ ಕಟ್ಟಿಸುವುದಕ್ಕೆ ನೀರಿನ ಸೌಲಭ್ಯವಿಲ್ಲದ ಹಿನ್ನೆಲೆಯೂ ಮನೆ ಕೆಲಸ ಮುಂದುವರಿಸಲು ಆಗಿಲ್ಲ. ಕೆಲವರಂತೂ ಮೂಲಭೂತ ಸೌಲಭ್ಯವಿಲ್ಲದ ಹಿನ್ನೆಲೆಯಲ್ಲಿ ಈ ಜಾಗದ ಸಹವಾಸವೇ ಬೇಡ ಎಂದು ಹೋದವರೂ ಇತ್ತಕಡೆ ಕಡೆ ತಿರುಗಿ ನೋಡಿಲ್ಲ.
ನಿರ್ಲಕ್ಷ್ಯಕ್ಕೆ ಆಶ್ರಯ ಹಣ ಪೋಲು
ಇದು ಬೀಳಗಿ ಶಾಸಕ, ಪ್ರಭಾವಿ ಸಚಿವ ಮುರುಗೇಶ್ ನಿರಾಣಿ ಕ್ಷೇತ್ರದಲ್ಲಿನ ಸ್ಥಿತಿಯಾಗಿದ್ದು ಮುರುಗೇಶ್ ನಿರಾಣಿ ಅವರು ಕೂಡ ಇತ್ತ ಕಡೆ ಗಮನಹರಿಸಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಯಾರದ್ದೋ ನಿರ್ಲಕ್ಷ್ಯಕ್ಕೆ ಸರಕಾರದ ಆಶ್ರಯ ಯೋಜನೆ ಹಣ ಪೋಲಾಗುತ್ತಿದೆ. ಇನ್ನು ಈ ಬಗ್ಗೆ ಬೀಳಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷರನ್ನು ಕೇಳಿದರೆ, ಮೂಲಭೂತ ಸೌಲಭ್ಯಕ್ಕಾಗಿ 6 ಕೋಟಿ ಅನುದಾನಕ್ಕೆ ಆರು ನಾಲ್ಕು ತಿಂಗಳ ಹಿಂದೆಯೇ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣ ಬಂದ ನಂತರ ಎಲ್ಲಾ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.
ಸರಕಾರದ ಒಂದು ಮಹತ್ವಾಕಾಂಕ್ಷಿ ಯೋಜನೆ , ಮೂಲಭೂತ ಸೌಲಭ್ಯ ಕೊರತೆ ಹಿನ್ನೆಲೆ ಹಳ್ಳ ಹಿಡಿಯುತ್ತಿದ್ದು ,ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಸ್ಥಳೀಯ ಶಾಸಕ ಮುರುಗೇಶ್ ನಿರಾಣಿ ಈ ಬಗ್ಗೆ ಗಮನ ಹರಿಸಿ ಮೂಲಭೂತ ಸೌಲಭ್ಯ ಕಲ್ಪಿಸಬೇಕಾಗಿದೆ.
Recommended Video