ಬಾದಾಮಿಯ ಮಾದರಿ ಉಪನ್ಯಾಸಕ ರಾಜಶೇಖರ್ ಕಥೆ ಕೇಳಿ
ಬಾಗಲಕೋಟೆ, 25: ಡಿಗ್ರಿ ಕಾಲೇಜ್ ಉಪನ್ಯಾಸಕರಂದ್ರೆ ಸುಮ್ನೆನಾ? ತಿಂಗಳಿಗೆ ಲಕ್ಷಾಂತರ ಸಂಬಳ. ಬತ್ಯೆ ಎಲ್ಲವೂ ಇರುತ್ತೆ. ಅದೆಷ್ಟೋ ಉಪನ್ಯಾಸಕರು ಐಶಾರಾಮಿ ಜೀವನ ನಡೆಸುತ್ತಾರೆ. ಕಾರು ಬಂಗಲೆಯಲ್ಲಿ ಎಂದು ಜೀವನವನ್ನ ಸಂಭ್ರಮಿಸುತ್ತಾರೆ. ಆದರೆ ಇಲ್ಲೊಬ್ಬ ಉಪನ್ಯಾಸಕರಿದ್ದಾರೆ. ಲಕ್ಷಾಂತರ ರೂ. ಸಂಬಳ ಇದ್ರೂ ಬರೋಬ್ಬರಿ 30 ವರ್ಷಗಳಿಂದ ಸೈಕಲ್ ಮೇಲೆಯೇ ಸವಾರಿ ಮಾಡ್ತಾರೆ. ಕಣ್ಣಿಗೆ ಕನ್ನಡಕ. ಸರಳವಾದ ಉಡುಪುಗಳು. ದಿನನಿತ್ಯ ಸೈಕಲ್ ಮೇಲೆ ಸವಾರಿ. ಇವರು ಕಾಲೇಜ್ ಉಪನ್ಯಾಸಕ ಡಾ. ರಾಜಶೇಖರ್ ಬಸುಪಟ್ಟದ.
ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದಲ್ಲಿರೋ ಶ್ರೀ ವೀರಪುಲಿಕೇಶಿ ಡಿಗ್ರಿ ಕಾಲೇಜಿನಲ್ಲಿ ಸುಮಾರು 27 ವರ್ಷಗಳಿಂದ ಕನ್ನಡ ವಿಷಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಸರ್ಕಾರ ತಿಂಗಳಿಗೆ ಲಕ್ಷಾಂತರ ರೂ. ಸಂಬಳ ನೀಡುತ್ತೆ. ಆದ್ರೆ ಇವರು ಸರಳ ವ್ಯಕ್ತಿತ್ವದಿಂದ ಒಬ್ಬ ಮಾದರಿ ಉಪನ್ಯಾಸಕರಾಗಿ ವಿದ್ಯಾರ್ಥಿಗಳಿಗೆ ಆದರ್ಶವಾಗಿ ಬದುಕು ಸಾಗಿಸುತ್ತಿದ್ದಾರೆ.
ಕಾಲೇಜಿಗೆ ಹೋಗುವಾಗ, ಅಂದ್ರೆ 1983ರಲ್ಲಿ ತೆಗೆದುಕೊಂಡಿದ್ದ ಖರೀದಿ ಮಾಡಿದ್ದ ಸೈಕಲ್ ಅನ್ನೇ ಇದೂವರೆಗೂ ಉಳಿಸಿಕೊಂಡು ಅದರ ಮೇಲೆಯೇ ಸವಾರಿ ಮಾಡುತ್ತಾರೆ. ಪರಿಸರ ಕಾಳಜಿ ದೃಷ್ಟಿಯಿಂದ ಯಾವುದೇ ಹೊಗೆ ಉಗುಳುವ ವಾಹನಗಳನ್ನು ಬಳಸುವುದಿಲ್ಲ.
ಇವರು ಗುಳೇದಗುಡ್ಡ ಪಟ್ಟಣದಲ್ಲಿ ಡಿಫರೆಂಟ್ ಉಪನ್ಯಾಸಕರೆಂದೇ ಹೆಸರಾಗಿದ್ದಾರೆ. ಮೂಲತಃ ಬದಾಮಿ ತಾಲೂಕಿನ ಗುಳೇದಗುಡ್ಡದವರಾಗಿರೋ ರಾಜಶೇಖರ್ ಗುರುಗಳು ವೃತ್ತಿ ಜೀವನದಲ್ಲಿ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಚಿತ್ತರಗಿ ಇಳಕಲ್ಲ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಕುರಿತು ಒಂದು ಸಾಂಸ್ಕೃತಿಕ ಅಧ್ಯಯನ ಬಗೆಗೆ ಮಹಾಪ್ರಬಂಧ, ನಿನ್ನೆ ನಾಳೆಗಳ ಮಧ್ಯೆ ಎನ್ನುವ ಕವನ ಸಂಕಲನ, ವಚನ ಸಾಹಿತ್ಯ- ಪ್ರಗತಿಪರ ಸಾಹಿತ್ಯೆ, ವಿಮರ್ಶಾ ಗ್ರಂಥಗಳನ್ನು ರಚಿಸಿದ್ದಾರೆ. ಅಲ್ಲದೆ ಸಹಕಾರ ಸಂಪದ, ಶರಣರ ಸಂಗಮ, ಚಾಲುಕ್ ಸೌರಭ ಸೇರಿದಂತೆ ಐದು ಗ್ರಂಥಗಳನ್ನ ಸಂಪಾದಿಸಿದ್ದಾರೆ. ಹಲವು ಸಂಘ ಸಂಸ್ಥೆಗಳು, ಮಠ ಮಾನ್ಯಗಳು ಅವರ ಸಾಹಿತ್ಯ ಕೃಷಿ ಮತ್ತು ಸರಳ ವ್ಯಕ್ತಿತ್ವವನ್ನ ಗಮನಿಸಿ ಹಲವು ಪ್ರಶಸ್ತಿ ಪುರಸ್ಕಾರಗಳನ್ನ ನೀಡಿ ಗೌರವಿಸಿವೆ.
ಒಟ್ಟಿನಲ್ಲಿ ಸರಳ ವ್ಯಕ್ತಿತ್ವವನ್ನ ರೂಢಿಸಿಕೊಂಡಿರುವ ರಾಜಶೇಖರ್ ಗುರುಗಳು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು. ಕನ್ನಡ ಪ್ರಾಧ್ಯಾಪಕರಾಗಿ ಸೇವೆಯ ಉದ್ದಕ್ಕೂ ಇವರಿಗೆ ವಿದ್ಯಾರ್ಥಿಗಳ ಮಹಾ ಬಳಗವೇ ಇದೆ. ಇವರ ವ್ಯಕ್ತಿತ್ವ ಅದೆಷ್ಟೋ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ.