ಅಪಘಾತದ 'ಮೆಡಿಕಲ್ ಕ್ಲೇಮ್'ಗೆ ಲಂಚ ಕೇಳಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ
ಬಾಗಲಕೋಟೆ, ನವೆಂಬರ್ 15: ಅಪಘಾತಗೊಂಡು ಖಾಸಗಿ ಆಸ್ಪತ್ರೆ ಸೇರಿದ್ದ ವ್ಯಕ್ತಿಯೊಬ್ಬರು ವೈದ್ಯಕೀಯ ವೆಚ್ಚವನ್ನು ಹಿಂಪಡೆಯಲು ಮೆಡಿಕಲ್ ಕ್ಲೇಮ್ ಗೆ ಸಹಿಗೆಂದು ಹೋದರೆ ಅವರನ್ನು ಸುಖಾಸುಮ್ಮನೆ ಅಲೆದಾಡಿಸಿದ್ದಲ್ಲದೇ ಲಂಚಕ್ಕೆ ಬೇಡಿಕೆಯಿಟ್ಟ ಅಧಿಕಾರಿಯೊಬ್ಬರು ಇದೀಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಹೆದ್ದಾರಿಗಾಗಿ ಭೂಮಿ ಕಳೆದುಕೊಂಡ ರೈತನಿಂದ ಲಂಚ ಪಡೆಯುತ್ತಿದ್ದ ಮೂವರ ಬಂಧನ
ಬಾಗಲಕೋಟೆ ಜಿಲ್ಲಾಸ್ಪತ್ರೆಯ ದ್ವಿತೀಯ ದರ್ಜೆಯ ಸಹಾಯಕ ಸುರೇಶ ಮುಂಡೋಡಗಿ ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿ. ವ್ಯಕ್ತಿಯೊಬ್ಬರಿಗೆ ಮೆಡಿಕಲ್ ಕ್ಲೇಮ್ ಪ್ರಮಾಣ ಪತ್ರ ನೀಡಲು ಹತ್ತು ಸಾವಿರ ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.\
ಯುಕೆಪಿಯ ಪುನರ್ ವಸತಿ ನೌಕರ ಸಂಜಯ ಜಿಂಗಾಡೆ ಎನ್ನುವವರು ಈಚೆಗೆ ಅಪಘಾತದಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮೆಡಿಕಲ್ ಕ್ಲೇಮ್ ಗಾಗಿ ಸರ್ಕಾರಿ ವೈದ್ಯರಿಂದ ಪ್ರಮಾಣ ಪತ್ರ ಬೇಕಿತ್ತು. ಹೀಗಾಗಿ ಪತ್ರ ನೀಡುವಂತೆ ಜಿಲ್ಲಾಸ್ಪತ್ರೆಯ ಎಸ್ಡಿಸಿ ಸುರೇಶ್ ಅವರ ಹತ್ತಿರ ಕೇಳಿದ್ದಾರೆ. ಆದರೆ ವೈದ್ಯರಿಂದ ಸಹಿ ಮಾಡಿಸಲು ಹತ್ತು ಸಾವಿರ ರೂಪಾಯಿ ಲಂಚ ಕೊಟ್ಟರೆ ಮಾತ್ರ ಕೆಲಸ ಮಾಡಿಸುವುದಾಗಿ ಸುರೇಶ್ ಹೇಳಿದ್ದಾರೆ. ಅಲ್ಲದೇ ಕೆಲಸ ಮಾಡಿಕೊಡದೇ ಎರಡು ತಿಂಗಳು ಸಂಜಯ ಅವರನ್ನು ಅಲೆದಾಡಿಸಿದ್ದೂ ಇದೆ. ಇದರಿಂದ ಬೇಸರಗೊಂಡ ಸಂಜಯ್ ಎಸಿಬಿಗೆ ದೂರು ನೀಡಿದ್ದರು. ದೂರು ಪಡೆದಿದ್ದ ಎಸಿವಿ ಡಿವೈಎಸ್ ಪಿ ಡಿ.ಎಸ್. ಬಿಸ್ನಳ್ಳಿ ನೇತೃತ್ವದ ತಂಡ ನವೆಂಬರ್ 14ರಂದು ಗುರುವಾರ ಲಂಚ ಪಡೆಯುವ ವೇಳೆ ಅಧಿಕಾರಿಯನ್ನು ಹಿಡಿದಿದ್ದಾರೆ.