ಬಾಗಲಕೋಟೆ: ಸಹಾಯಕ ಎಂಜಿನಿಯರ್ ಮನೆ-ಕಚೇರಿ ಮೇಲೆ ಎಸಿಬಿ ದಾಳಿ
ಬೆಂಗಳೂರು, ಜುಲೈ 6: ಭ್ರಷ್ಟಾಚಾರ ನಿಗ್ರಹ ದಳವು ಬಾಗಲಕೋಟೆಯ ನೀರಾವರಿ ನಿಗಮದ ಸಹಾಯಕ ಎಂಜಿಯರ್ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿ-ಹಣವನ್ನು ಪತ್ತೆ ಹಚ್ಚಿದೆ.
ಶಿವಲಿಂಗಪ್ಪ ಬಸ್ಪಪ್ಪ ಹಡಗಲಿ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಎಲೆಕ್ಟ್ರಿಕಲ್ ಸಬ್-ಡಿವಿಷನ್ ಕರ್ನಾಟಕ ನೀರಾವರಿ ನಿಗಮ, ಸವದತ್ತಿ ರವರು ತಮ್ಮ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ದಾಖಲಿಸಿ ಅವರಿಗೆ ಸಂಬಂಧಿಸಿದ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದೆ.
ಲಂಚ ಸ್ವೀಕರಿಸುತ್ತಿದ್ದ ವೇಳೆಯೇ ಎಸಿಬಿಗೆ ಸಿಕ್ಕಿ ಬಿದ್ದ 7 ಅಧಿಕಾರಿಗಳು
ಬಾಗಲಕೋಟೆ ನವನಗರದಲ್ಲಿ 1 ವಾಸದ ಮನೆ & 1 ನಿವೇಶನ ಹಾಗೂ ಯರಗಟ್ಟಿ ಗ್ರಾಮದಲ್ಲಿ 1 ಮನೆ ಮತ್ತು 4 ನಿವೇಶನ, ಮುಟಗಾ, ಬೈಲಹೊಂಗಲ & ಬಸವನಕುಡಚಿ ಗ್ರಾಮದಲ್ಲಿ 1 ನಿವೇಶನ, ತೋಂಡಿಹಾಳ & ಇಳಕಲ್ನಲ್ಲಿ 2 ಪ್ಲಾಟ್ಗಳು ಮತ್ತು ಸವದತ್ತಿಯ ವಿವಿಧ ಸರ್ವೆ ನಂಬರುಗಳಲ್ಲಿ 38 ಎಕರೆ ಕೃಷಿ ಜಮೀನು, ಚಿನ್ನ 276 ಗ್ರಾಂ, ಬೆಳ್ಳಿ 832 ಗ್ರಾಂ, 1 ಮಹಿಂದ್ರಾ ಟಿಯುವಿ-300 ಜೀಪ್, 2 ದ್ವಿಚಕ್ರ ವಾಹನ, ನಗದು ₹ 55 ಸಾವಿರ ಹಾಗೂ ಬ್ಯಾಂಕ್ ಖಾತೆಯಲ್ಲಿ ₹ 39.88 ಲಕ್ಷ ಮತ್ತು ₹ 2 ಲಕ್ಷ ಗೃಹೋಪಯೋಗಿ ವಸ್ತುಗಳು ಕಂಡು ಬಂದಿರುತ್ತದೆ.
ತನಿಖೆ ಮುಂದುವರೆದಿದ್ದು, ಆರೋಪಿತ ಸರ್ಕಾರಿ ನೌಕರನು ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಹಾಗೂ ಸಂಬಂಧಪಟ್ಟ ಇನ್ನು ಹೆಚ್ಚಿನ ಸ್ಥಳಗಳ ಮಾಹಿತಿ ಸಂಗ್ರಹಣೆ ಮುಂದುವರೆದಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.