ಸಿದ್ದರಾಮೋತ್ಸವಕ್ಕೆ ಬರುವಾಗ ಅಪಘಾತದಲ್ಲಿ ಅಭಿಮಾನಿ ಸಾವು: ಸಿದ್ದರಾಮಯ್ಯ ಸಂತಾಪ
ಬಾಗಲಕೋಟೆ, ಆಗಸ್ಟ್ 02: ಸಿದ್ದರಾಮೋತ್ಸವ ಜಯಂತಿ ಆಚರಣೆಗಾಗಿ ದಾವಣಗೆರೆಗೆ ಆಗಮಿಸುತ್ತಿದ್ದ ವೇಳೆ ನಡೆದ ಅಪಘಾತದಲ್ಲಿ ಮುದೋಳ ತಾಲೂಕಿನ ಪ್ರಕಾಶ್ ಬಡಿಗೇರ್ ಎನ್ನುವವರು ಮೃತಪಟ್ಟಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು ಸಂತಾಪ ಸೂಚಿಸಿದ್ದಾರೆ.
ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದ ಕ್ರೂಸರ್ ಅಪಘಾತಕ್ಕೀಡಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹೂಲಗೇರಿ ಬಳಿ ನಡೆದಿದೆ.
Breaking; ಸಿದ್ದರಾಮೋತ್ಸವ, ಸರ್ಕಾರಿ ಬಸ್ ಸಂಚಾರದಲ್ಲಿ ವ್ಯತ್ಯಯ
ಸಂಜೆ 7 ಗಂಟೆ ಸುಮಾರಿಗೆ ಹೊಸ ಬೈಕ್ ತುಂಬಿದ್ದ ಗೂಡ್ಸ್ ವಾಹನ ಹಾಗೂ ಕ್ರೂಸರ್ ನಡುವೆ ಅಪಘಾತ ಸಂಭವಿಸಿದೆ. ಕ್ರೂಸರ್ ವಾಹನದ ಚಾಲಕ ಪ್ರಕಾಶ ಬಡಿಗೇರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕ್ರೂಸ್ನಲ್ಲಿದ್ದ 12 ಜನರಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಲ್ಲಿ 9 ಜನರನ್ನ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಣ್ಣ ಪುಟ್ಟ ಗಾಯಗಳಾಗಿರುವ ಮೂವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿರುವ ಚಾಲಕ ಪ್ರಕಾಶ ಸೇರಿದಂತೆ ಎಲ್ಲರೂ ಮುಧೋಳ ತಾಲ್ಲೂಕಿನ ಚಿಕ್ಕ ಆಲಗುಂಡಿ ಗ್ರಾಮದವರೆಂದು ತಿಳಿದುಬಂದಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಓರ್ವನ ಸ್ಥಿತಿ ಗಂಭೀರವಾಗಿದೆ.
ಗಾಯಗೊಂಡವರನ್ನು ಮಂಜುನಾಥ ಚಿಚಖಂಡಿ, ಆನಂದ ಮುತ್ತಪ್ಪನವರ, ಬಾಬು ನದಾಫ್, ಶಿವಪ್ಪ ಚಿಚಖಂಡಿ, ಸೋಮೇಶ ಹೊಂಬಾಳೆ, ಸಿದ್ದಪ್ಪ ಪಂಚಗಾಂವಿ, ಮುತ್ತಪ್ಪ ಗುಂಜಾಗೋಳ, ಮುದಕಪ್ಪ ಹೊಂಬಾಳೆ, ಶ್ರೀಶೈಲ ಮಠಪತಿ ಎಂದು ಗುರುತಿಸಲಾಗಿದೆ.
ಗಾಯಾಳುಗಳ ಪರಿಸ್ಥಿತಿ ವಿಚಾರಿಸಿದ ಎಸ್ಪಿ
ಬಾಗಲಕೋಟೆ ಎಸ್ಪಿ ಜಯಪ್ರಕಾಶ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ನಂತರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಓರ್ವ ಗಾಯಾಳು ಸ್ಥಿತಿ ಗಂಭೀರವಾಗಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ಇನ್ನಿಬ್ಬರಿಗೂ ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಎಸ್ಪಿ ಜಯಪ್ರಕಾಶ ಮಾಹಿತಿ ನೀಡಿದ್ದಾರೆ.
ಜಿಲ್ಲಾ ಪ್ರವಾಸದಲ್ಲಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಹ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಮೃತಪಟ್ಟ ಪ್ರಕಾಶ ಹಾಗೂ ಗಾಯಾಳುಗಳೆಲ್ಲರೂ ಕಾರಜೋಳ ಮತಕ್ಷೇತ್ರದವರಾಗಿದ್ದಾರೆ. ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗುವಂತೆ ಪ್ರಾರ್ಥನೆ ಮಾಡುತ್ತೇನೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಸಂತಾಪ ಸೂಚಿಸಿ ಸಿದ್ದರಾಮಯ್ಯ ಟ್ವೀಟ್
ಅಭಿಮಾನಿ ಪ್ರಕಾಶ್ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, "ನನ್ನ ಹುಟ್ಟುಹಬ್ಬದ ಸಮಾರಂಭಕ್ಕಾಗಿ ದಾವಣಗೆರೆಗೆ ಆಗಮಿಸುತ್ತಿದ್ದ ಮುದೋಳ ತಾಲೂಕಿನ ಪ್ರಕಾಶ್ ಬಡಿಗೇರ್ ಎಂಬವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುದ್ದಿ ತಿಳಿದು ಆಘಾತವಾಯಿತು. ಮೃತ ಪ್ರಕಾಶ್ ಅವರ ಕುಟುಂಬದ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ." ಎಂದು ಹೇಳಿದ್ದಾರೆ.
|
ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಸಿದ್ದರಾಮಯ್ಯ ಮನವಿ
ಕಾರ್ಯಕ್ರಮಕ್ಕಾಗಿ ಆಗಮಿಸುತ್ತಿರುವ ಅಭಿಮಾನಿಗಳು ಹಾಗೂ ಬೆಂಬಲಿಗರಿಗೆ ವಾಹನ ಚಾಲನೆ ವೇಳೆ ಜಾಗ್ರತೆ ವಹಿಸುವಂತೆ ಮನವಿ ಮಾಡಿದ್ದಾರೆ.
"ನನ್ನ ಹುಟ್ಟುಹಬ್ಬದ ಸಮಾರಂಭಕ್ಕಾಗಿ ದಾವಣಗೆರೆಗೆ ವಾಹನಗಳಲ್ಲಿ ಆಗಮಿಸುವವರು ಅನಗತ್ಯ ಧಾವಂತ ತೋರದೆ ಎಚ್ಚರಿಕೆಯಿಂದ ವಾಹನ ಚಲಾಯಿಸಿಕೊಂಡು ಬರಬೇಕೆಂದು ಕೈಮುಗಿದು ಮನವಿ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮ ಜೀವ ನಮಗೆ ಮಾತ್ರವಲ್ಲ ನಿಮ್ಮನ್ನು ನಂಬಿರುವ ಕುಟುಂಬಕ್ಕೂ ಅಷ್ಟೇ ಅಮೂಲ್ಯ ಎಂಬ ಅರಿವಿರಲಿ." ಎಂದು ಅಭಿಮಾನಿಗಳು, ಬೆಂಬಲಿಗರನ್ನು ಕುರಿತು ಟ್ವೀಟ್ ಮಾಡಿದ್ದಾರೆ.
ಅದ್ದೂರಿ ಸಿದ್ದರಾಮೋತ್ಸವಕ್ಕೆ ಕ್ಷಣಗಣನೆ
ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಸಿದ್ದರಾಮಯ್ಯ 75ನೇ ಜನ್ಮದಿನದ ಅಂಗವಾಗಿ ಅಭಿಮಾನಿಗಳು, ಸ್ನೇಹಿತರು ಅದ್ಧೂರಿಯಾಗಿ ಆಚರಣೆ ಮಾಡಲು ಮುಂದಾಗಿದ್ದಾರೆ. ಲಕ್ಷಾಂತರ ಜನ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಸಿದ್ದರಾಮೋತ್ಸವಕ್ಕೆ ಜನರನ್ನು ಕರೆತರಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 7000 ಕ್ಕೂ ಅಧಿಕ ಬಸ್ಗಳನ್ನು ಬುಕ್ ಮಾಡಲಾಗಿದೆ. ದಾವಣಗೆರೆಯ ಎಲ್ಲಾ ಹೋಟೆಲ್, ಲಾಡ್ಜ್ಗಳು ಭರ್ತಿಯಾಗಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.