ನದಿಗೆ ಹಾರಿದ ದಂಪತಿ: ಪತಿ-ಪತ್ನಿ ಕಿತ್ತಾಟ; ಹೆತ್ತವರಿಗೆ ಸಂಕಟ!
ಬಾಗಲಕೋಟೆ, ನವೆಂಬರ್.10: ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋದು ಗಾದೆ ಮಾತು. ಆದರೆ, ಬಾಗಲಕೋಟೆಯಲ್ಲಿ ನಡೆದ ಅಸಲಿಯತ್ತೇ ಬೇರೆ. ಈ ಘಟನೆ ಕೇಳಿದರೆ ಎಂಥವರೂ ಒಂದ ಕ್ಷಣ ಶಾಕ್ ಆಗುತ್ತಾರೆ. ಒಂದು ಸಣ್ಣ ಜಗಳಕ್ಕೆ, ಈ ದಂಪತಿ ತೆಗೆದುಕೊಂಡ ನಿರ್ಧಾರವೇ ಅಂಥದ್ದು.
ಕೌಟುಂಬಿಕ ಕಲಹ ಯಾರ ಮನೆಯಲ್ಲಿ ಯಾನೇ ಇರೋದಿಲ್ಲ ಹೇಳಿ. ಆದರೆ, ಈ ಪತಿ-ಪತ್ನಿಯ ವೈಮನಸ್ಸಿನಿಂದ ಇದು ಇಡೀ ಮನೆಯಲ್ಲಿ ಸೂತಕದ ವಾತಾವರಣ ಮನೆ ಮಾಡಿದೆ. ಎರಡು ಮನೆಗಳಲ್ಲಿ ಹೆತ್ತವರು ಕಣ್ಣೀರು ಇಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು, ಯಾವುದೋ ಸಣ್ಣ ಮನಸ್ತಾಪಕ್ಕೆ ಪತಿ-ಪತ್ನಿಯಿಬ್ಬರೂ ನೊಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂಥದೊಂದು ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿಂಚಖಂಡಿ ಕೆಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಳಿಯ ಘಟಪ್ರಭಾ ನದಿಗೆ ದಂಪತಿ ಹಾರಿದ್ದಾರೆ ಎನ್ನಲಾಗಿದೆ.
20 ವರ್ಷದ ಅಕ್ಷತಾ ಹಾಗೂ 28 ವರ್ಷದ ಮೌನೇಶ್ ಕಮ್ಮಾರ ಇತ್ತೀಚಿಗಷ್ಟೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿ ಎಂದು ತಿಳಿದು ಬಂದಿದೆ. ಇನ್ನು ಮೃತ ದಂಪತಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಮಕೇರಿ ಗ್ರಾಮದ ನಿವಾಸಿಗಳು ಎನ್ನಲಾಗುತ್ತಿದೆ.
ದಂಪತಿಯ ಮೃತದೇಹಕ್ಕಾಗಿ ಶೋಧಕಾರ್ಯ:
ದಂಪತಿ ನದಿಗೆ ಹಾರಿದ ಸುದ್ದಿ ತಿಳಿದ ಮುಧೋಳ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳದಲ್ಲಿ ಮೃತದೇಹಗಳ ಶೋಧಕಾರ್ಯ ನಡೆಯುತ್ತಿದ್ದು, ಮುಧೋಳ ಠಾಣೆ ಪೊಲೀಸರು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.