ಬಾಗಲಕೋಟೆಯ ಮುಚಖಂಡಿ ಕೆರೆಗೆ ವೈಭವದ ಕಾಲ!
ಬಾಗಲಕೋಟೆ, ಅಕ್ಟೋಬರ್ 16 : ಅದು 20 ವರ್ಷಗಳ ಕಾಲ ನಿರ್ಲಕ್ಷಕ್ಕೆ ಒಳಗಾಗಿದ್ದ ಕೆರೆ. ಆ ಕೆರೆಗೆ ನೀರು ಅನ್ನೋದು ಅಪರಿಚಿತವಾಗಿತ್ತು. ಇಪ್ಪತ್ತು ವರ್ಷದಿಂದ ಆ ಕೆರೆ ಹನಿ ನೀರಿಲ್ಲದೆ ತನ್ನಿಂದ ಯಾರಿಗೂ ಉಪಕಾರವಿಲ್ಲದೆ ಬಂಜೆಯಂತಾಗಿತ್ತು. ಆದರೆ, ಈಗ ಆ ಕೆರೆ ತನ್ನ ಮೈ ತುಂಬಾ ನೀರು ತುಂಬಿಕೊಂಡು ಕಂಗೊಳಿಸುತ್ತಿದೆ.
ಅಂದಹಾಗೆ ಇದು ಮುಳುಗಡೆ ನಗರಿ ಬಾಗಲಕೋಟೆಗೆ ಹೊಂದಿಕೊಂಡಿರುವ ಮುಚಖಂಡಿ ಕೆರೆ. ದಿನಾಲೂ ಕೆರೆಯ ಒಡಲಲ್ಲಿ ಚಿಣ್ಣರು, ಯುವಕರು ಮಸ್ತಿ ಮಾಡುತ್ತಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಕೆರೆ ಪ್ರವಾಸಿ ತಾಣವಾಗಲಿಕ್ಕೆ 10 ಕೋಟಿ ಹಣ ಮಂಜೂರಾಗಿದೆ. ಕೆರೆ ಕೈಲಾಸವಾಸಿ ಶಿವನ ತಾಣವಾಗಲಿದೆ.
ಯಶ್ ಹೂಳೆತ್ತಿದ್ದ ಕೊಪ್ಪಳದ ತಲ್ಲೂರು ಕೆರೆಯಲ್ಲೀಗ ನೀರೋ ನೀರು
ಸುತ್ತಮುತ್ತಲಿನ 10 ಹಳ್ಳಿಗಳ ಅಂತರ್ಜಲಕ್ಕೆ ಆಧಾರವಾಗಿದೆ ಮುಚಖಂಡಿ ಕೆರೆ. ಈ ಕೆರೆಯನ್ನು ಪ್ರವಾಸಿ ತಾಣವಾಗಿ ಮಾಡಲು ನೀಲ ನಕ್ಷೆ ಸಿದ್ಧವಾಗಿದೆ. ಕೆರೆ ಪಕ್ಕದಲ್ಲಿರುವ ಬೆಟ್ಟದ ಮೇಲೆ ಬೃಹತ್ ಶಿವನಮೂರ್ತಿ, ಪಕ್ಕದಲ್ಲಿ ಉದ್ಯಾನವನ, ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲಾಗುತ್ತದೆ.
ದಾವಣಗೆರೆಯ ಸೂಳೆಕೆರೆ ಭರ್ತಿ, ಬಾಗಿನ ಅರ್ಪಣೆ
ಕೆರೆ ಪ್ರವಾಸಿ ತಾಣವಾದರೆ ಪಕ್ಕದಲ್ಲೇ ಇರುವ ವೀರಭದ್ರೇಶ್ವರ ದೇವಸ್ಥಾನಕ್ಕೂ ಹೆಚ್ಚಿನ ಜನರು ಬರಲಿದ್ದಾರೆ. ಈ ಕೆರೆಗೆ 12.50 ಕೋಟಿ ವೆಚ್ಚದಲ್ಲಿ ನೀರು ಹರಿಸಲಾಗಿದೆ. ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ ಅವರ ಪ್ರಯತ್ನದ ಫಲವಾಗಿ ಇಂದು ಕೆರೆಗೆ ನೀರು ಹರಿದುಬಂದಿದೆ...
ಮಂಡ್ಯ: ಭಾರೀ ಮಳೆಗೆ ತುಂಬಿ ಹರಿಯುತ್ತಿರುವ ಕೆರೆಕಟ್ಟೆಗಳು
1982ರಲ್ಲಿ ನಿರ್ಮಾಣಗೊಂಡ ಕೆರೆ
ಮುಚಖಂಡಿ ಕೆರೆ 1882ರಲ್ಲಿ ಬ್ರಿಟಿಷರು ನಿರ್ಮಾಣ ಮಾಡಿದ ಕೆರೆ ಇದು. ಬಾಗಲಕೋಟೆ ಸೇರಿದಂತೆ ಸುತ್ತ ಹತ್ತಾರು ಹಳ್ಳಿಗಳಿಗೆ ಕುಡಿಯುವ ನೀರು, ಕೃಷಿ ಮತ್ತು ಜಾನುವಾರುಗಳಿಗೆ ನೀರನ್ನು ಒದಗಿಸುವ ಕೆರೆ ಇದಾಗಿತ್ತು. ಒಟ್ಟು 720 ಎಕರೆ ವಿಸ್ತೀರ್ಣದ ಕೆರೆ ಎರಡು ದಶಕಗಳ ಕಾಲ ನೀರಿಲ್ಲದೆ ಬರಡಾಗಿತ್ತು.
12 ಕೋಟಿ ವೆಚ್ಚದಲ್ಲಿ ಕೆರೆ ತುಂಬಿಸಲಾಗುತ್ತಿದೆ
ಬರಿದಾದ ಕೆರೆಯನ್ನು ಸಾಕಷ್ಟು ಪ್ರಮಾಣದಲ್ಲಿ ಒತ್ತುವರಿ ಕೂಡ ಮಾಡಲಾಗಿತ್ತು. ಆದರೆ, ಸದ್ಯ 12 ಕೋಟಿ ವೆಚ್ಚದಲ್ಲಿ ಕೆರೆಗೆ ನೀರು ಹರಿಸುವ ಕಾರ್ಯ ಪ್ರಗತಿಯಲ್ಲಿದೆ. ಆಲಮಟ್ಟಿ ಹಿನ್ನೀರಿನಿಂದ ಪೈಪ್ ಲೈನ್ ಮೂಲಕ ಕೆರೆಗೆ ನೀರನ್ನು ಹರಿಸಲಾಗುತ್ತಿದೆ. ಜೊತೆಗೆ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಕೆರೆ ಮೈತುಬಿಕೊಂಡಿದೆ.
ಪ್ರವಾಸಿಗರನ್ನು ಸೆಳೆಯುತ್ತಿದೆ ಕೆರೆ
ಪೈಪ್ ಲೈನ್ ಮೂಲಕ ಬರುವ ನೀರು ಜಲಪಾತ ಸೃಷ್ಟಿಸಿದೆ. ಇದರಿಂದ ಈ ಜಲಧಾರೆಯಲ್ಲಿ ಮೈ ತಣಿಸಲು ದಿನಾಲು ಚಿಣ್ಣರು, ಯುವಕರು ಕೆರೆಗೆ ಭೇಟಿ ನೀಡುತ್ತಿದ್ದಾರೆ. ರಜೆ ದಿನಗಳನ್ನು ಇಲ್ಲಿ ಕಳೆಯುತ್ತಿದ್ದು, ಈಗಾಗಲೇ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಸರ್ಕಾರದಿಂದ 10 ಕೋಟಿ ಹಣ ಮಂಜೂರಾಗಿದ್ದಕ್ಕೆ ಬಾಗಲಕೋಟೆ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.
ಸುಂದರ ಪ್ರವಾಸಿ ತಾಣವಾಗಲಿದೆ
ಒಟ್ಟಾರೆ ಎರಡು ದಶಕಗಳ ಕಾಲ ನೀರು ಕಾಣದ ಕೆರೆ ಇಂದು ತುಂಬಿ ತುಳುಕುವಂತಾಗಿದೆ. ಜೊತೆಗೆ 10 ಕೋಟಿ ವೆಚ್ಚದಲ್ಲಿ ಪ್ರವಾಸಿ ತಾಣವಾಗಲು ಸಿದ್ಧವಾಗುತ್ತಿದೆ. ಇಷ್ಟು ದಿನ ಯಾರೂ ತಿರುಗಿ ನೋಡದ ಕೆರೆ ಈಗ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ.