ವಿವಾದ ಸೃಷ್ಟಿಸಿತು ಖಲೀಸ್ತಾನ್ ಹೋರಾಟಗಾರನ ಜತೆಗಿನ ಸಿಧು ಫೋಟೋ
ಅಮೃತ್ ಸರ್, ನವೆಂಬರ್ 29: ಕರ್ತರ್ ಪುರ್ ಕಾರಿಡಾರ್ ಶಂಕುಸ್ಥಾಪನೆ ಕಾರ್ಯಕ್ರಮಕ್ಕಾಗಿ ಪಾಕಿಸ್ತಾನಕ್ಕೆ ತೆರಳಿ, ಮೂರು ದಿನ ಅಲ್ಲಿದ್ದು, ವಾಪಸಾಗಿರುವ ಪಂಜಾಬ್ ನ ಸಚಿವ- ಕಾಂಗ್ರೆಸ್ ಶಾಸಕ- ಮಾಜಿ ಕ್ರಿಕೆಟರ್ ನವ್ ಜೋತ್ ಸಿಧು ಇದೀಗ ಮತ್ತೆ ಚರ್ಚೆಯ ಕೇಂದ್ರದಲ್ಲಿದ್ದಾರೆ. ಇದು ಹೊಸ ವಿವಾದವಾಗಿದ್ದು, ಖಲೀಸ್ತಾನಿ ಹೋರಾಟದ ನಾಯಕ ಗೋಪಾಲ್ ಚಾವ್ಲಾ ಜತೆಗೆ ಸಿಧು ಇರುವ ಫೋಟೋ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.
ಕರ್ತರ್ ಪುರ್ ಕಾರಿಡಾರ್ ಯೋಜನೆಯ ಶಂಕುಸ್ಥಾಪನೆ ನಂತರ ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಜತೆ ಗೋಪಾಲ್ ಚಾವ್ಲಾ ಇರುವ ಫೋಟೋಗೆ ಪಾಕ್ ಸ್ಪಷ್ಟನೆ ನೀಡಿತ್ತು. ಅದಾಗಿ ಕೆಲ ಗಂಟೆಗಳಲ್ಲಿ ಗೋಪಾಲ್ ಚಾವ್ಲಾ ತನ್ನ ಫೇಸ್ ಬುಕ್ ಖಾತೆಯಲ್ಲಿ ಫೋಟೋ ಹಾಕಿ, ಸಿಧು ಪಾ ಜಿ ಜತೆಗೆ (ನನ್ನ ಸೋದರ) ಎಂದು ಹಾಕಿದ್ದಾರೆ. ಅದರಲ್ಲಿ ಚಾವ್ಲಾ ಜತೆಗೆ ಸಿಧು ಇದ್ದಾರೆ.
ಒಂದು ಸೆಕೆಂಡ್ ಅಪ್ಪಿದ್ದೇನೆ ಅಷ್ಟೇ, ಅದು ರಫೇಲ್ ಡೀಲ್ ಅಲ್ಲ: ಸಿಧು
ಇನ್ನು ಸಿಧು ಫೋಟೋ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿ, ಪಾಕಿಸ್ತಾನದಲ್ಲಿ ನನ್ನ ಜತೆಗೆ ಐದರಿಂದ ಹತ್ತು ಸಾವಿರ ಜನರ ತನಕ ಫೋಟೋ ತೆಗೆಸಿಕೊಂಡರು. ನನಗೆ ಅವರೆಲ್ಲರೂ ಗೊತ್ತಿಲ್ಲ. ನನಗೆ ಗೋಪಾಲ್ ಚಾವ್ಲಾ ಯಾರೆಂದು ಗೊತ್ತಿಲ್ಲ ಎಂದು ಉತ್ತರ ನೀಡಿದ್ದಾರೆ. ಸಿಖ್ ಸಮುದಾಯಕ್ಕೆ ಪ್ರತ್ಯೇಕ ದೇಶ ಬೇಕು ಎಂದು ನಡೆಯುತ್ತಿರುವ ಹೋರಾಟದ ಮುಂಚೂಣಿಯಲ್ಲಿರುವ ನಾಯಕರ ಪೈಕಿ ಚಾವ್ಲಾ ಕೂಡ ಒಬ್ಬ.
ಗುರುವಾರ ಬೆಳಗ್ಗೆಯಿಂದ ಗೋಪಾಲ್ ಚಾವ್ಲಾ ಜತೆಗೆ ಸಿಧು ಇರುವ ಫೋಟೋ ವೈರಲ್ ಆಗಿದೆ. ಭಯೋತ್ಪಾದಕನನ್ನು ಭೇಟಿ ಆಗಲು ಪಾಕಿಸ್ತಾನಕ್ಕೆ ಹೋಗಿದ್ದರಾ ಎಂದು ಸಿಧುನನ್ನು ಪ್ರಶ್ನೆ ಕೇಳಲಾಗುತ್ತಿದೆ. ಪಾಕಿಸ್ತಾನದ ಸಿಖ್ ಗುರ್ ದ್ವಾರ್ ಪ್ರಬಂಧಕ್ ನ ಪ್ರಧಾನ ಕಾರ್ಯದರ್ಶಿ ಗೋಪಾಲ್ ಚಾವ್ಲಾ.
ಪಾಕ್ ಸೇನಾ ಮುಖ್ಯಸ್ಥರ ಅಪ್ಪುಗೆಯೇ ಇದಕ್ಕೆ ಕಾರಣ!: ಬೆನ್ನು ತಟ್ಟಿಕೊಂಡ ಸಿಧು
ಇತ್ತೀಚೆಗೆ ಅಮೃತ್ ಸರ್ ನಿರಂಕರಿ ಭವನ್ ನಲ್ಲಿ ನಡೆದ ಗ್ರೆನೇಡ್ ದಾಳಿಯ ತನಿಖೆ ವೇಖೆ ಆತನ ಹೆಸರು ಕೇಳಿಬಂದಿತ್ತು. ಆ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ಲಾಹೋರ್ ನಲ್ಲಿರುವ ಗುರ್ ದ್ವಾರಕ್ಕೆ ಭೇಟಿ ನೀಡಲು ತೆರಳಿದ್ದಾಗ ಆತ ತಡೆಯೊಡ್ಡಿದ್ದ.