ಪಾಕ್ ಏಜೆಂಟ್ ನಂತಾಗಿರುವ ಸಿಧು ಬಗ್ಗೆ ರಾಹುಲ್ ನಿಲುವೇನು?: ಬಾದಲ್
ಅಮೃತ್ ಸರ್, ನವೆಂಬರ್ 29: ಪಂಜಾಬ್ ನ ಸಚಿವ-ಕಾಂಗ್ರೆಸ್ ಶಾಸಕ, ಮಾಜಿ ಕ್ರಿಕೆಟರ್ ಸಿಧು ಕರ್ತರ್ ಪುರ್ ಕಾರಿಡಾರ್ ನ ಶಂಕುಸ್ಥಾಪನೆಗಾಗಿ ಪಾಕಿಸ್ತಾನಕ್ಕೆ ತೆರಳಿದ್ದಕ್ಕಿಂತ ಅಲ್ಲಿನ ನಡೆದ ಇತರ ವಿಚಾರಗಳು ಭಾರೀ ಚರ್ಚೆಗೆ ಕಾರಣವಾಗಿದೆ. ಸಿಧುನನ್ನು ವಿಪರೀತ ಹೊಗಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಪ್ರತಿಯಾಗಿ ಸಿಧು ಕೂಡ ಇಮ್ರಾನ್ ನನ್ನು ಹೊಗಳಿದ್ದು ಇದು ಯಾಕೋ ಅತಿರೇಕ ಆಯಿತು ಎನ್ನುವಂತಾಗಿದೆ.
ಇನ್ನು ಖಲೀಸ್ತಾನ್ ಹೋರಾಟದ ನಾಯಕರಲ್ಲಿ ಒಬ್ಬನಾದ ಗೋಪಾಲ್ ಸಿಂಗ್ ಚಾವ್ಲಾನ ಜತೆಗೆ ಸಿಧು ಇರುವ ಫೋಟೋ ಗುರುವಾರದ ಬೆಳಗ್ಗೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಭಾರತದ ವಿಭಜನೆಗಾಗಿ ಸಂಚು ರೂಪಿಸುತ್ತಿರುವ ಚಾವ್ಲಾನಂಥವನ ಜತೆಗೆ ಸಿಧು ಫೋಟೋ ತೆಗೆಸಿಕೊಂಡಿರುವುದು ಕೂಡ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ವಿವಾದ ಸೃಷ್ಟಿಸಿತು ಖಲೀಸ್ತಾನ್ ಹೋರಾಟಗಾರನ ಜತೆಗಿನ ಸಿಧು ಫೋಟೋ
ಈ ಮಧ್ಯೆ ಕೇಂದ್ರ ಸಚಿವರಾದ ಜರ್ ಸಿಮ್ರತ್ ಕೌರ್ ಬಾದಲ್ ಮಾತನಾಡಿ, ನಮ್ಮ ಜನರನ್ನು ಕೊಲ್ಲುತ್ತಿರುವ ಜನರಲ್ ನನ್ನು ಸಿಧು ಅಪ್ಪಿಕೊಂಡಿದ್ದಾರೆ. ಅಲ್ಲಿ ಆತನ ಜತೆಗೆ ಮೂರು ದಿನ ಕಳೆದಿದ್ದಾರೆ. ಇದರ ಜತೆಗೆ ಭಯೋತ್ಪಾದಕನ ಜತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ಅಲ್ಲಿಗೆ ಹೋದ ಮೇಲೆ ಆತ ಪಾಕಿಸ್ತಾನ್ ಏಜೆಂಟ್ ಆಗಿದ್ದಾರೆ. ಈ ಬಗ್ಗೆ ತಮ್ಮ ನಿಲುವು ಏನು ಅಂತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಬೇಕು ಎಂದು ಹೇಳಿದ್ದಾರೆ.