'ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತುವವರನ್ನೆಲ್ಲ ದೇಶದ್ರೋಹಿ ಎನ್ನಲಾಗುತ್ತಿದೆ'
ಅಮೃತಸರ, ಡಿಸೆಂಬರ್ 12: ಮೂರು ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ತನ್ನ ಮಾಜಿ ಮಿತ್ರಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಶಿರೋಮಣಿ ಅಕಾಲಿದಳದ (ಎಸ್ಎಡಿ) ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಅವರು ಪ್ರತಿಭಟನಾ ನಿರತ ರೈತರನ್ನು ಖಲಿಸ್ತಾನಿಗಳು ಮತ್ತು ದೇಶ ವಿರೋಧಿಗಳು ಎಂದು ಅವಮಾನಿಸಿರುವ ಸಚಿವರು ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದ್ದಾರೆ.
ಅಮೃತಸರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾದಲ್, ಕೇಂದ್ರ ಸರ್ಕಾರವು ಏಕೆ ದಬ್ಬಾಳಿಕೆ ಪ್ರದರ್ಶಿಸುತ್ತಿದೆ ಮತ್ತು ಯಾರಿಗಾಗಿ ಕಾನೂನು ಮಾಡಲಾಗಿದೆ ಎನ್ನಲಾಗುತ್ತಿದೆಯೋ ಸಮಾಜದ ಆ ವರ್ಗದವರೇ ಅದರ ಬಗ್ಗೆ ಅಸಮಾಧಾನ ಹೊಂದಿರುವಾಗ ಅದನ್ನು ಏಕೆ ರದ್ದುಗೊಳಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ರೈತರು ಇನ್ನೆಷ್ಟು ಪ್ರಾಣತ್ಯಾಗ ಮಾಡಬೇಕು? ರಾಹುಲ್ ಗಾಂಧಿ ಪ್ರಶ್ನೆ
'ರೈತರು ನಡೆಸುತ್ತಿರುವ ಪ್ರತಿಭಟನೆಗಳಲ್ಲಿ ಖಲಿಸ್ತಾನಿಗಳು ಮತ್ತು ರಾಜಕೀಯ ಪಕ್ಷದವರು ಇದ್ದಾರೆ ಎಂದು ಪ್ರತಿಭಟನೆಗೆ ಅವಮಾನಿಸಲು ಕೇಂದ್ರ ಪ್ರಯತ್ನಿಸುತ್ತಿದೆ. ತಮ್ಮ ಅಭಿಪ್ರಾಯವನ್ನು ಒಪ್ಪದವರನ್ನು ದೇಶ ವಿರೋಧಿಗಳೆಂದು ಕರೆಯುವುದು ದುರದೃಷ್ಟಕರ. ಅಂತಹ ಹೇಳಿಕೆ ನೀಡಿದ ಸಚಿವರು ಸಾರ್ವಜನಿಕವಾಗಿ ಕ್ಷಮೆ ಕೋರಬೇಕು. ಕೇಂದ್ರ ಸರ್ಕಾರದ ವರ್ತನೆ ಮತ್ತು ಅಂತಹ ಹೇಳಿಕೆಗಳನ್ನು ನಾವು ಖಂಡಿಸುತ್ತೇವೆ' ಎಂದು ಹೇಳಿದರು.
'ಕೇಂದ್ರ ಸರ್ಕಾರವು ರೈತರ ಮಾತುಗಳನ್ನು ಆಲಿಸುವ ಬದಲು ಅವರ ಧ್ವನಿಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ದುರದೃಷ್ಟದ ಸಂಗತಿ. ಈ ಕೃಷಿ ಕಾಯ್ದೆಗಳು ಕೃಷಿಕರಿಗೆ ಬೇಕಿಲ್ಲ. ಯಾರಿಗಾಗಿ ಕಾಯ್ದೆಯನ್ನು ಮಾಡಲಾಗಿದೆಯೋ ಸಮಾಜದ ಆ ವರ್ಗವೇ ಅದನ್ನು ಬಯಸದೆ ಇರುವಾಗ ಕೇಂದ್ರವು ದಬ್ಬಾಳಿಕೆ ಪ್ರದರ್ಶಿಸುತ್ತಿರುವುದು ಏಕೆ? ರೈತರ ಅಭಿಪ್ರಾಯಗಳನ್ನು ಕೇಳುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡುತ್ತೇನೆ' ಎಂದರು.
ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್