ಮಹಾರಾಷ್ಟ್ರದಿಂದ ಪಂಜಾಬ್ ಗೆ ತೆರಳಿದ 23 ಮಂದಿಗೂ ಕೊರೊನಾ!
ಅಮೃತಸರ್, ಏಪ್ರಿಲ್.30: ನೊವೆಲ್ ಕೊರೊನಾ ವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಭಾರತ ಲಾಕ್ ಡೌನ್ ಘೋಷಿಸಿದೆ. ಇದರ ನಡುವೆಯೂ ಮಹಾರಾಷ್ಟ್ರದಿಂದ ಪಂಜಾಬ್ ಗೆ ತೆರಳಿದ 23 ಮಂದಿಗೆ ಕೊವಿಡ್-19 ಸೋಂಕು ಇರುವುದು ಪತ್ತೆಯಾಗಿದೆ.
ಮಹಾರಾಷ್ಟ್ರ ನಾಂದೇಡ್ ನಲ್ಲಿರುವ ತಾಖತ್ ಸಚ್ಕಂದ್ ಶ್ರೀ ಹಜುರ್ ಅಬ್ಚಲ್ ನಾಗರ್ ಸಾಹೇಬ್ ನಿಂದ ಅಮೃತಸರ್ ಗೆ ಆಗಮಿಸಿದ 23 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ವೈದ್ಯಕೀಯ ತಪಾಸಣೆ ವೇಳೆ ಪತ್ತೆಯಾಗಿದೆ ಎಂದು ಡೆಪ್ಯುಟಿ ಕಮಿಷನರ್ ಶಿವ್ದುಲರ್ ಸಿಂಗ್ ಧಿಲೋನ್ ತಿಳಿಸಿದ್ದಾರೆ.
ಈ 6 ಮಹಾನಗರಗಳಲ್ಲಿ ಕೊರೊನಾ ನಿಯಂತ್ರಿಸಿದರೆ ಭಾರತ ಗೆದ್ದಂತೆ!
ನಾಂದೇಡ್ ನಲ್ಲಿರುವ ತಾಖತ್ ಸಚ್ಕಂದ್ ಶ್ರೀ ಹಜುರ್ ಅಬ್ಚಲ್ ನಾಗರ್ ಸಾಹೇಬ್ ಗೆ ತೆರಳಿದ್ದ 23 ಮಂದಿ ಭಕ್ತಾಧಿಗಳು ಗುರುವಾರ ವಾಪಸ್ಸಾಗಿದ್ದಾರೆ. ಈ ವೇಳೆ ಎಲ್ಲರನ್ನೂ ಸ್ಕ್ರೀನಿಂಗ್ ಗೆ ಒಳಪಡಿಸಿದಾಗ ಸೋಂಕು ಇರುವುದು ಪತ್ತೆಯಾಗಿದೆ.
ಗುರುನಾನಕ್ ದೇವ್ ಆಸ್ಪತ್ರೆಗೆ ಸೋಂಕಿತರು ಶಿಫ್ಟ್:
ನಾಂದೇಡ್ ನಿಂದ ಆಗಮಿಸಿದ 23 ಮಂದಿ ಕೊರೊನಾ ವೈರಸ್ ಸೋಂಕಿತರನ್ನು ಗುರುನಾನಕ್ ದೇವ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ವೈರಸ್ ಸೋಂಕು ಇಲ್ಲದ ವ್ಯಕ್ತಿಗಳನ್ನು ಗೃಹ ದಿಗ್ಬಂಧನದಲ್ಲಿ ಇರಿಸಲಾಗುತ್ತಿದೆ ಎಂದು ಡೆಪ್ಯುಟಿ ಕಮಿಷನರ್ ಶಿವ್ದುಲರ್ ಸಿಂಗ್ ಧಿಲೋನ್ ಮಾಹಿತಿ ನೀಡಿದರು. ಇನ್ನು, ಪಂಜಾಬ್ ನಲ್ಲಿ ಈವರೆಗೂ ಕೊರೊನಾ ವೈರಸ್ ನಿಂದ 19 ಮಂದಿ ಪ್ರಾಣ ಬಿಟ್ಟಿದ್ದು, 357ಕ್ಕೂ ಅಧಿಕ ಜನರಿಗೆ ಸೋಂಕು ತಗಲಿರುವುದು ಸ್ಪಷ್ಟವಾಗಿದೆ. ಈ ಪೈಕಿ 90 ಮಂದಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.