ಕೃಷಿ ಕಾಯ್ದೆ ವಿರುದ್ಧ ಹರಿಯಾಣ-ಪಂಜಾಬ್ ನಲ್ಲಿ ಹೋರಾಟ
ಅಮೃತಸರ್, ಸಪ್ಟೆಂಬರ್.30: ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರ ಪ್ರತಿಭಟನೆ ಮುಂದುವರಿದಿದೆ. ಪಂಜಾಬ್ ನಲ್ಲಿ ನಡೆಯುತ್ತಿರುವ ರೈತರ ಹೋರಾಟ 7ನೇ ದಿನಕ್ಕೆ ಕಾಲಿಟ್ಟಿದೆ.
ಅಮೃತಸರ್ ನಲ್ಲಿರುವ ದೇವಿದಾಸ್ ಪುರ್ ಗ್ರಾಮದಲ್ಲಿ ಕಿಸಾನ್ ಮಜದೂರ್ ಸಂಘರ್ಷ ಸಮಿತಿ ನಡೆಸುತ್ತಿರುವ 'ರೈಲ್ ರುಖೋ'(ರೈಲು ತಡೆ) ಪ್ರತಿಭಟನೆಯು 7ನೇ ದಿನಕ್ಕೆ ಕಾಲಿಟ್ಟಿದೆ. ರೈಲು ಹಳಿಗಳ ಮೇಲೆ ಕಪ್ಪು ಬಟ್ಟೆ ಧರಿಸಿದ ರೈತರು ಹೋರಾಟ ಮುಂದುವರಿಸಿದ್ದಾರೆ.
ನೆರೆರಾಜ್ಯದ ರೈತರಿಂದ ಬೆಳೆ ಖರೀದಿಸಲ್ಲ ಎಂದ CM ಮನೋಹರ್ ಲಾಲ್ ಖಟ್ಟರ್!
ಹರಿಯಾಣದ ಅಂಬಾಲಾ ಜಿಲ್ಲೆ ಅನಜ್ ಮಂಡಿ ಹತ್ತಿರ ನೆರೆದ ನೂರಾರು ಪ್ರತಿಭಟನಾಕಾರರು, ಅಂಬಾಲಾ-ಹಿಸಾರ್ ಹೆದ್ದಾರಿ ತಡೆ ನಡೆಸಿದರು. ಕೃಷಿ ಕಾಯ್ದೆ ಜಾರಿಗೊಳಿಸಿದ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಅಲ್ಲದೇ ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ಅಕ್ಟೋಬರ್.01ರಂದು ದೇಶಾದ್ಯಂತ ಕಿಸಾನ್ ಮಜದೂರ್ ಸಂಘರ್ಷ ಸಮಿತಿ ಉಗ್ರ ಹೋರಾಟ ನಡೆಸುವುದಾಗಿ ಸಂಘಟನೆ ಕಾರ್ಯದರ್ಶಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ವಿವಾದಿತ ಮಸೂದೆಗೆ ರಾಷ್ಟ್ರಪತಿ ಅಂಕಿತ:
ಸಂಸತ್ ನಲ್ಲಿ ತೀವ್ರ ಸದ್ದು ಗದ್ದಲಕ್ಕೆ ಕಾರಣವಾದ ಕೃಷಿ ಸಂಬಂಧಿತ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಳೆದ ಸಪ್ಟೆಂಬರ್.27ರಂದು ಅನುಮೋದನೆ ನೀಡಿದ್ದರು. ಇದರಿಂದ ಮೂರು ಮಸೂದೆಗಳು ಇದೀಗ ಕಾಯ್ದೆಗಳಾಗಿ ಬದಲಾಗಿವೆ. ಈ ಮೂರು ಕೃಷಿ ಸಂಬಂಧಿತ ಕಾಯ್ದೆಗಳು ಯಾವುವು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
1. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ
2. ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ
3. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ