ಹರಿಯಾಣ ಗಡಿಯಲ್ಲೇ 5000 ಗಂಟೆ ಕಾಯುತ್ತೇನೆ ಎಂದ ರಾಹುಲ್ ಗಾಂಧಿ
ಅಮೃತಸರ್, ಅಕ್ಟೋಬರ್.06: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ಪಂಜಾಬ್ ಮತ್ತು ಹರಿಯಾಣದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ 'ಖೇಟಿ ಬಚಾವೋ ಯಾತ್ರೆ' ಅಡಿ ಟ್ರ್ಯಾಕ್ಟರ್ ರ್ಯಾಲಿ ನಡೆಸಿದರು.
ಮಂಗಳವಾರ ಟ್ರ್ಯಾಕ್ಟರ್ ರ್ಯಾಲಿ ಮೂಲಕ ಪಂಜಾಬ್ ನಿಂದ ಹರಿಯಾಣಕ್ಕೆ ತೆರಳುತ್ತಿದ್ದ ರಾಹುಲ್ ಗಾಂಧಿ ನೇತೃತ್ವದ ಪ್ರತಿಭಟನಾಕಾರರನ್ನು ಪಟಿಯಾಲಾದ ನುರ್ಪುರ್ ಬಳಿ ತಡೆ ಹಿಡಯಲಾಗಿತ್ತು. ಹರಿಯಾಣದ ಗಡಿಯಲ್ಲಿ ಬ್ಯಾರಿಕೇಡ್ ಹಾಕುವ ಮೂಲಕ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು.
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮಾಡಿದ್ದನ್ನೇ ಈಗ ಮೋದಿ ಮಾಡುತ್ತಿದ್ದಾರೆ: ರಾಹುಲ್
ಹರಿಯಾಣ ಪ್ರವೇಶಿಸಲು 5000 ಗಂಟೆಗಳವರೆಗೂ ಕಾಯುವುದಕ್ಕೂ ನಾನು ಸಿದ್ಧ ಎಂದು ರಾಹುಲ್ ಗಾಂಧಿ ಹೇಳಿದರು. ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ರಾಹುಲ್ ಗಾಂಧಿ ಮತ್ತು ಅವರೊಂದಿಗೆ ಗರಿಷ್ಠ 100 ಮಂದಿ ಪ್ರತಿಭಟನಾಕಾರರಿಗೆ ಹರಿಯಾಣ ಪ್ರವೇಶಿಸಲು ಅನುಮತಿ ನೀಡಲಾಯಿತು.
5000 ಗಂಟೆ ಕಾಯುವುದಕ್ಕೂ ಸಿದ್ಧ ಎಂದು ಟ್ವೀಟ್
"ಹರಿಯಾಣದ ಬ್ರಿಡ್ಜ್ ಬಳಿಯೇ ನಮ್ಮನ್ನು ತಡೆದಿದ್ದಾರೆ. ಇಲ್ಲಿಂದ ನಾವು ಮುಂದುವರೆಯುವುದಕ್ಕೆ ಬಯಸುವುದಿಲ್ಲ, ಕಾಯುವುದರಲ್ಲೇ ನನಗೆ ಸಂತೋಷವಿದೆ. 1 ಗಂಟೆ, 5 ಗಂಟೆ, 5 ಗಂಟೆ, 24, 100 ಗಂಟೆ, 1000 ಗಂಟೆ ಮತ್ತು 5000 ಗಂಟೆ ಹಾಗೂ ಅದಕ್ಕೂ ಹೆಚ್ಚು ಸಮಯ ಕಾಯುವುದಕ್ಕೂ ನಾನು ಸಿದ್ಧನಾಗಿದ್ದೇನೆ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.
ನಿಯಮ ಉಲ್ಲಂಘಿಸುವುದಕ್ಕೆ ಅವಕಾಶ ನೀಡಿಲ್ಲ
ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ಸಂಸದ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಹೋರಾಟದ ಬಗ್ಗೆ ಯಾವುದೇ ರೀತಿ ಅಭ್ಯಂತರವಿಲ್ಲ. ಆದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ನಿಯಮಗಳನ್ನು ಉಲ್ಲಂಘಿಸುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಿಳಿಸಿದ್ದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದರೆ ಕೃಷಿ ಕಾಯ್ದೆ ರದ್ದು
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವು ಆಡಳಿತಕ್ಕೆ ಬಂದರೆ ವಿವಾದಾತ್ಮಕ ಕೃಷಿ ಸಂಬಂಧಿತ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ವಯನಾಡು ಸಂಸದ ರಾಹುಲ್ ಗಾಂಧಿ ಪ್ರಮಾಣ ಭರವಸೆ ನೀಡಿದ್ದಾರೆ. ಪಂಜಾಬ್ ನಲ್ಲಿ 'ಖೇಟಿ ಬಚಾವೋ ಯಾತ್ರೆ' ನಡೆಸಿದ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ, ಸಂಗ್ರಹಣೆ ಮತ್ತು ಸಗಟು ವ್ಯಾಪಾರವು ದೇಶದ ಮೂರು ಆಧಾರ ಸ್ತಂಭಗಳಾಗಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ವ್ಯವಸ್ಥೆಯನ್ನೇ ಹಾಳುಗೆಡವಲು ಹೊರಟಿದ್ದಾರೆ ಎಂದು ರಾಹುಲ್ ಗಾಂಧಿ ದೂಷಿಸಿದ್ದಾರೆ.
ರೈತರ ಆಕ್ರೋಶಕ್ಕೆ ಕಾರಣವಾಗಿರುವ ಕೃಷಿ ಕಾಯ್ದೆಗಳು
ಸಂಸತ್ ನಲ್ಲಿ ತೀವ್ರ ಸದ್ದು ಗದ್ದಲಕ್ಕೆ ಕಾರಣವಾದ ಕೃಷಿ ಸಂಬಂಧಿತ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಳೆದ ಸಪ್ಟೆಂಬರ್.27ರಂದು ಅನುಮೋದನೆ ನೀಡಿದ್ದರು. ಇದರಿಂದ ಮೂರು ಮಸೂದೆಗಳು ಇದೀಗ ಕಾಯ್ದೆಗಳಾಗಿ ಬದಲಾಗಿವೆ. ಈ ಮೂರು ಕೃಷಿ ಸಂಬಂಧಿತ ಕಾಯ್ದೆಗಳು ಯಾವುವು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
1. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ
2. ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ
3. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ
Recommended Video