ಪಂಜಾಬ್ನಲ್ಲಿ ರಾತ್ರಿ ಕರ್ಫ್ಯೂ ಇಡೀ ರಾಜ್ಯಕ್ಕೆ ವಿಸ್ತರಣೆ: ರಾಜಕೀಯ ಸಮಾವೇಶಕ್ಕೆ ಸಂಪೂರ್ಣ ನಿಷೇಧ
ಅಮೃತಸರ, ಏಪ್ರಿಲ್ 7: ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿರುವ ರಾಜ್ಯಗಳಲ್ಲಿ ಒಂದಾದ ಪಂಜಾಬ್ನಲ್ಲಿ ರಾತ್ರಿ ನಿಷೇಧಾಜ್ಞೆ ಸೇರಿದಂತೆ ವಿವಿಧ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ. ರಾತ್ರಿ 9 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾಜ್ಯದಾದ್ಯಂತ ಜನರ ಸಂಚಾರ, ವ್ಯಾಪಾರ ವಹಿವಾಟಿನ ಮೇಲೆ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧಗಳು ಇದಕ್ಕೂ ಮುನ್ನ 12 ಜಿಲ್ಲೆಗಳಲ್ಲಿ ಜಾರಿಯಲ್ಲಿದ್ದವು.
ಇದರ ಜತೆಗೆ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳಿಗೆ ಜನರು ಸೇರುವುದನ್ನು ನಿಷೇಧಿಸಲಾಗಿದೆ. ಅಂತ್ಯಸಂಸ್ಕಾರ, ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ ಜನರು ಗುಂಪುಗೂಡುವುದನ್ನು ನಿಯಂತ್ರಿಸಲು ಒಬ್ಬ ಪೊಲೀಸ್ ಸಿಬ್ಬಂದಿ ಹಾಜರಿರುವುದು ಕಡ್ಡಾಯವಾಗಿದೆ. ಒಳಾಂಗಣ ಕಾರ್ಯಕ್ರಮಗಳಲ್ಲಿ ಗರಿಷ್ಠ 50 ಹಾಗೂ ಹೊರಾಂಗಣ ಕಾರ್ಯಕ್ರಮಗಳಲ್ಲಿ ಗರಿಷ್ಠ 100 ಮಂದಿ ಮಾತ್ರ ಸೇರಲು ಅವಕಾಶ ನೀಡಲಾಗಿದೆ.
ಲಸಿಕೆ ಪಡೆದ ಬಳಿಕ ಕೊರೊನಾ ಸೋಂಕು: ಕೇಂದ್ರದಿಂದ ಅಧ್ಯಯನ
ಸರ್ಕಾರಿ ಕಚೇರಿಗಳು ಉದ್ಯೋಗಿಗಳು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಈ ಹೊಸ ನಿರ್ಬಂಧಗಳ ಜತೆಗೆ ಶಾಲೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ಮುಚ್ಚುವುದು ಸೇರಿದಂತೆ, ವಿವಿಧ ನಿಯಗಳು ಏಪ್ರಿಲ್ 30ರವರೆಗೂ ಮುಂದುವರಿಯಲಿವೆ.
ಸಿನಿಮಾ ಮಂದಿರಗಳು ಶೇ 50ರಷ್ಟು ಸಾಮರ್ಥ್ಯದೊಂದಿಗೆ ಮಾತ್ರ ನಡೆಯಬೇಕಿವೆ. ಮಾಲ್ಗಳಲ್ಲಿನ ಅಂಗಡಿಗಳಿಗೆ ತಲಾ 10 ಮಂದಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಒಂದು ಮಾಲ್ಗೆ ಗರಿಷ್ಠ 100 ಮಂದಿ ಒಂದು ಕಾಲದಲ್ಲಿ ಪ್ರವೇಶ ಪಡೆಯಬಹುದಾಗಿತ್ತು. ಆ ನಿಯಮದಲ್ಲಿ ಸಡಿಲಿಕೆ ಮಾಡಲಾಗಿದೆ.
ವಿರೋಧಪಕ್ಷಗಳಾದ ಶಿರೋಮಣಿ ಅಕಾಲಿದಳ ಮತ್ತು ಎಎಪಿ ನಾಯಕರ ವರ್ತನೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಜನರು ಗುಂಪುಗೂಡಬಾರದೆಂಬ ನಿಯಮ ಉಲ್ಲಂಘಿಸಿದವರಲ್ಲಿ ರಾಜಕೀಯ ಮುಖಂಡರು ಇದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಎಸ್ಎಡಿ ನಾಯಕ ಸುಖ್ಬೀರ್ ಸಿಂಗ್ ಬಾದಲ್ ಅವರು ಕೋವಿಡ್ ಸುರಕ್ಷತಾ ಶಿಷ್ಟಾಚಾರಗಳನ್ನು ಉಲ್ಲಂಘಿಸಿ ರಾಜಕೀಯ ಸಮಾವೇಶ ನಡೆಸಿರುವುದನ್ನು ಅಮರಿಂದರ್ ಖಂಡಿಸಿದ್ದಾರೆ.
'ಹಿರಿಯ ರಾಜಕೀಯ ನಾಯಕರು ಈ ರೀತಿ ವರ್ತಿಸುವಾಗ ಕಾಯಿಲೆ ಹರಡುವುದನ್ನು ತಡೆಯಲು ಜನರು ಹೆಚ್ಚು ಗಂಭೀರವಾಗಬೇಕು ಎಂಬುದನ್ನು ಹೇಗೆ ನಿರೀಕ್ಷಿಸಲು ಸಾಧ್ಯ? ಅಂತಹ ಉಲ್ಲಂಘನೆಗಳನ್ನು ತಡೆಯಲು ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ರಾಜಕೀಯ ನಾಯಕರ ವಿರುದ್ಧವೂ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.