ಅಮೃತ್ ಸರ್ ದಾಳಿ ಪ್ರಕರಣದಲ್ಲಿ ಒಬ್ಬನ ಬಂಧನ, ಇನ್ನೊಬ್ಬನಿಗೆ ತಲಾಶ್
ಚಂಡೀಗಢ, ನವೆಂಬರ್ 21: ಪಂಜಾಬ್ ನ ಅಮೃತ್ ಸರ್ ನಲ್ಲಿ ಬಳಸಿದ ಗ್ರೆನೇಡ್ ಪಾಕಿಸ್ತಾನದಲ್ಲಿ ತಯಾರಾಗಿದ್ದು ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಬುಧವಾರ ಹೇಳಿದ್ದಾರೆ. ಕಳೆದ ಭಾನುವಾರ ಅಪರಿಚಿತರು ನಡೆಸಿದ ದಾಳಿಯಲ್ಲಿ ಮೂವರು ಮೃತಪಟ್ಟಿದ್ದರು. ಈ ದಾಳಿಯ ಹಿಂದೆ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ ಐ ಕೈವಾಡ ಇದೆ ಎಂದು ಅವರು ಆರೋಪಿಸಿದ್ದಾರೆ.
ಭಾನುವಾರ ನಡೆದ ದಾಳಿಯಲ್ಲಿ ಮೂವರು ಮೃತಪಟ್ಟು, ಇಪ್ಪತ್ತು ಮಂದಿ ಗಾಯಗೊಂಡಿದ್ದರು. ಮೋಟಾರ್ ಸೈಕಲ್ ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಅದ್ಲಿವಾಲ್ ಹಳ್ಳಿಯ ರಾಜಸನ್ಸಿ ಪ್ರದೇಶದ ಧಾರ್ಮಿಕ ಕೇಂದ್ರದಲ್ಲಿ ಗ್ರೆನೇಡ್ ಎಸೆದು ಪರಾರಿ ಆಗಿದ್ದರು. ಈ ಸ್ಥಳವು ಅಮೃತ್ ಸರ್ ನಿಂದ ಹದಿನೈದು ಕಿ.ಮೀ. ದೂರದಲ್ಲಿದೆ.
ಅಮೃತಸರದ ನಿರಂಕಾರಿ ಭವನದ ಮೇಲೆ ಬಾಂಬ್ ದಾಳಿ, 3 ಸಾವು
ವಾರದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಗಾಯಾಳುಗಳು ಹತ್ತಿರದ ಹಳ್ಳಿಗಳಿಂದ ಬಂದಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಗಳು ಗ್ರೆನೇಡ್ ದಾಳಿ ನಡೆಸಿದ್ದರು. ಆ ನಂತರ ಶಂಕಿತ ಉಗ್ರರ ಫೋಟೋಗಳನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಅಮರೀಂದರ್ ಸಿಂಗ್ ಪಾಕಿಸ್ತಾನದ ವಿರುದ್ಧ ನೇರವಾಗಿ ಆರೋಪ ಮಾಡಿದ್ದಾರೆ.
ಈ ದಾಳಿಯಲ್ಲಿ ಕೋಮು ಆಯಾಮ ಇಲ್ಲ
ಈ ದಾಳಿ ಪ್ರಕರಣದಲ್ಲಿ ಯಾವುದೇ ಕೋಮು ಆಯಾಮ ಇಲ್ಲ. ಇದು ಭಯೋತ್ಪಾದನಾ ಕೃತ್ಯ. ಅವರು ಸುಲಭವಾಗಿ ಸಿಗ್ತಾರೆ ಎಂಬ ಕಾರಣಕ್ಕೆ ಆ ಸ್ಥಳವನ್ನು ಗುರಿ ಮಾಡಿಕೊಳ್ಳಲಾಗಿದೆ. ಇದಕ್ಕೂ ಮುನ್ನ ಬೇರೆ ಸಂಘಟನೆಗಳಿಗೆ ಇದೇ ರೀತಿಯ ಗುರಿ ಇದೆ ಎಂಬ ಮಾಹಿತಿ ನಮಗೆ ಸಿಕ್ಕಿತ್ತು. ಆಗ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು, ಅವುಗಳನ್ನು ತಡೆಯಲು ಸಾಧ್ಯವಾಯಿತು ಎಂದು ಸಿಂಗ್ ಹೇಳಿದ್ದಾರೆ.
ಒಬ್ಬ ಭಯೋತ್ಪಾದಕನ ಬಂಧನ
ಭಯೋತ್ಪಾದನಾ ಕೃತ್ಯದಲ್ಲಿ ಪಾಲ್ಗೊಂಡಿದ್ದ ಇಬ್ಬರ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಹೆಸರು ಬಿಕ್ರಮ್ ಜಿತ್ ಸಿಂಗ್. ವಯಸ್ಸು ಇಪ್ಪತ್ತಾರು ವರ್ಷ. ಇನ್ನೊಬ್ಬನ ಹೆಸರು ಅವತಾರ್ ಸಿಂಗ್ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.
ಅಮೃತಸರ ದಾಳಿ ಹಿಂದೆ ಪಾಕ್ ಮೂಲದ ಖಲಿಸ್ತಾನ ಉಗ್ರರ ಕೈವಾಡ?
ಪಾಕಿಸ್ತಾನದ ಲೈಸೆನ್ಸ್ ಪಡೆದ ಕಾರ್ಖಾನೆಯಲ್ಲಿ ಗ್ರೆನೇಡ್ ತಯಾರಿ
ದಾಳಿಯಲ್ಲಿ ಬಳಸಿದ್ದ ಗ್ರೆನೇಡ್ ಬೇರೆ ಮಾದರಿಯದು. ಇದೇ ಮಾದರಿ ಗ್ರೆನೇಡ್ ಅನ್ನೇ ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಬಳಸಲಾಗುತ್ತದೆ. ಅದೇ ಮೊನ್ನೆ ಸ್ಫೋಟಿಸಲಾಗಿದೆ. ಈ ಗ್ರೆನೇಡ್ ಅನ್ನು ಪಾಕಿಸ್ತಾನದಲ್ಲಿ ಲೈಸೆನ್ಸ್ ಪಡೆದು ನಡೆಯುತ್ತಿರುವ ಕಾರ್ಖಾನೆಯಲ್ಲಿ ತಯಾರಿಸಲಾಗಿದೆ. ಅದರೊಳಗೆ ಗುಂಡಾದ ವಸ್ತುಗಳನ್ನು ತುಂಬಿರಲಾಗುತ್ತದೆ ಎಂದಿದ್ದಾರೆ.
ದಾಳಿಯ ಮಾಸ್ಟರ್ ಮೈಂಡ್ ಐಎಸ್ ಐ
ದಾಳಿಯ ಹಿಂದಿರುವ ಮಾಸ್ಟರ್ ಮೈಂಡ್ ಐಎಸ್ ಐಗೆ ಸೇರಿದಂಥವನು. ಇವು (ಹರ್ಮಿತ್ ಸಿಂಗ್ 'ಪಿಎಚ್ ಡಿ' ಅಲಿಯಾಸ್ ಹ್ಯಾಪಿ) ಅವರು ಬಳಸುವ ಸಂಕೇತಗಳು ಎಂದಿದ್ದು, ಸದ್ಯಕ್ಕೆ ತಲೆ ತಪ್ಪಿಸಿಕೊಂಡಿರುವ ಮತ್ತೊಬ್ಬ ಭಯೋತ್ಪಾದಕನನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.