ಮಾಜಿ ಕ್ರಿಕೆಟಿಗ, ಶಾಸಕ ಸಿಧು ಪತ್ನಿ ಕಾಂಗ್ರೆಸ್ಗೆ ಗುಡ್ಬೈ
ಚಂಡೀಗಡ, ಅಕ್ಟೋಬರ್ 22: ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಕಾಂಗ್ರೆಸ್ ಶಾಸಕ ನವಜೋತ್ ಸಿಂಗ್ ಸಿಧು ಅವರ ಪತ್ನಿ, ಮಾಜಿ ಸಚಿವೆ ನವಜೋತ್ ಕೌರ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಲೋಕಸಭೆ ಚುನಾವಣೆ ವೇಳೆ ಪಕ್ಷ ತಮಗೆ ಟಿಕೆಟ್ ನೀಡದೆ ಇದ್ದಿದ್ದರಿಂದ ಕೌರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಪಕ್ಷ ತೊರೆಯಲು ಅದೇ ಕಾರಣ ಎಂದು ಹೇಳಲಾಗಿದೆ. ಅಮೃತಸರ (ಪೂರ್ವ) ಕ್ಷೇತ್ರದ ಮಾಜಿ ಶಾಸಕಿ ಹಾಗೂ ಮಾಜಿ ಮುಖ್ಯ ಸಂಸದೀಯ ಕಾರ್ಯದರ್ಶಿಯಾಗಿರುವ ನವಜೋತ್ ಕೌರ್, ಏಪ್ರಿಲ್-ಮೇನಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಚಂಡೀಗಡ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಟಿಕೆಟ್ ಬಯಸಿದ್ದರು. ಆದರೆ ಅವರಿಗೆ ಟಿಕೆಟ್ ದೊರೆತಿರಲಿಲ್ಲ.
ಕಾಂಗ್ರೆಸ್ನಲ್ಲಿಯೂ ಶುರುವಾಯ್ತು ಸಿಧು ರಂಪಾಟ: ಸಿಎಂ ವಿರುದ್ಧ ಗರಂ
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಕೈವಾಡದಿಂದಲೇ ತಮಗೆ ಲೋಕಸಭೆ ಟಿಕೆಟ್ ಕೈತಪ್ಪಿದೆ ಎಂದು ಅವರು ಆರೋಪಿಸಿದ್ದರು.
ಈಗ ಕಾಂಗ್ರೆಸ್ಗೆ ರಾಜೀನಾಮೆ ನೀಡಿರುವ ಕೌರ್, 'ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ನಾನು ಎಲ್ಲವನ್ನೂ ತ್ಯಜಿಸಿದ್ದೇನೆ. ನಾನೀಗ ಸಮಾಜ ಸೇವಕಿ ಮಾತ್ರ' ಎಂದು ಹೇಳಿದ್ದಾರೆ.
ಮಂತ್ರಿ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ
2016ರಲ್ಲಿ ಪತಿ ಸಿಧು ಅವರಂತೆಯೇ ಬಿಜೆಪಿ ತೊರೆದಿದ್ದ ಕೌರ್, ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಆದರೆ ಕಾಂಗ್ರೆಸ್ನಿಂದ ಅವರಿಗೆ ಟಿಕೆಟ್ ದೊರಕಿರಲಿಲ್ಲ.
ನಾನು ಪಲಾಯನ ಮಾಡಿಲ್ಲ: ಸಿಧು ಪತ್ನಿಯಿಂದ ಸಮಜಾಯಿಷಿ
ಬಿಜೆಪಿಯ ಸಂಸದರಾಗಿದ್ದ ನವಜೋತ್ ಸಿಂಗ್ ಸಿಧು, ಬಳಿಕ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ನಂತರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಸಚಿವರಾಗಿದ್ದರು. ಆದರೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಮತ್ತು ಭಾರತ-ಪಾಕಿಸ್ತಾನ ವಿಚಾರಗಳಲ್ಲಿ ಪಾಕ್ ಬೆಂಬಲಿಸಿ ಹೇಳಿಕೆ ನೀಡಿದ್ದು ಕಾಂಗ್ರೆಸ್ಗೆ ಕಸಿವಿಸಿ ಉಂಟುಮಾಡಿತ್ತು. ಕೊನೆಗೆ ಸಿಧು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.