ಪಾಕಿಸ್ತಾನದಿಂದ ಹಾರಿಬಂದ ಪಾರಿವಾಳದ ವಿರುದ್ಧ ಎಫ್ಐಆರ್ ದಾಖಲು
ಅಮೃತಸರ, ಏಪ್ರಿಲ್ 22: ಪಾಕಿಸ್ತಾನದಿಂದ ಹಾರಿಬಂದಿದ್ದ ಪಾರಿವಾಳದ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಪಾರಿವಾಳದ ಬಾಯಲ್ಲಿ ಬಿಳಿಯ ಕಾಗದವಿದ್ದಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ಒಳನುಸುಳವವರನ್ನು ಹಿಡಿದು ಪ್ರಕರಣ ದಾಖಲಿಸುವುದು ಬಿಎಸ್ ಎಫ್ ಕೆಲಸ,ಆದರೆ ಈ ಬಾರಿ ಗಡಿ ಭದ್ರತಾ ಪಡೆ ವಿಚಿತ್ರ ಆಗಂತುಕನನ್ನು ಬಂಧಿಸಿದ್ದು, ಆ ಆಗಂತುಕ ಬೇರಾರು ಅಲ್ಲ ಪಾರಿವಾಳ. ಪಾಕಿಸ್ತಾನದಿಂದ ಭಾರತದೊಳಗೆ ಹಾರಿ ಬಂದಿರುವ ಪಾರಿವಾಳದ ವಿರುದ್ಧ ಗೂಢಚಾರಿಕೆ ನಡೆಸಿದ ಆರೋಪದ ಮೇರೆಗೆ ಎಫ್ ಐಆರ್ ದಾಖಲಿಸುವಂತೆ ಬಿಎಸ್ ಎಫ್ ಅಧಿಕಾರಿಗಳು ಒತ್ತಾಯಿಸಿದ್ದರು.
ಅರುಣಾಚಲ ಪ್ರದೇಶದಲ್ಲಿ ಚೀನಿ ಭಾಷೆ ಸಂದೇಶ ಹೊತ್ತ ಪಾರಿವಾಳಗಳ ಸೆರೆ
ಇದೀಗ ಪಾರಿವಾಳದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಈ ಕುರಿತು ಮಾತನಾಡಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಧ್ರುವ್ ದಹಿಯಾ ಅವರು ಮಾತನಾಡಿ, ಬಿಎಸ್ಎಫ್ ಪಾರಿವಾಳದ ವಿರುದ್ಧ ಎಫ್ಐಆರ್ ನೋಂದಾಯಿಸಲು ಒತ್ತಾಯಿಸಲಾಗಿದೆ. ಪಾರಿವಾಳವು ಪಕ್ಷಿಯಾಗಿರುವುದರಿಂದ, ಅದರ ವಿರುದ್ಧ ಎಫ್ಐಆರ್ ದಾಖಲಿಸಬಹುದು ಎಂದು ನಾನು ಭಾವಿಸುವುದಿಲ್ಲ.
ಆದರೆ ಅವರ ಅಭಿಪ್ರಾಯಕ್ಕಾಗಿ ನಾವು ಈ ವಿಷಯವನ್ನು ನಮ್ಮ ಕಾನೂನು ತಜ್ಞರಿಗೆ ಹಸ್ತಾಂತರಿಸಿದ್ದೇವೆ ಎಂದು ಅವರು ಬುಧವಾರ ಹೇಳಿದ್ದರು. ಪಾರಿವಾಳದ ಕಾಲಿಗೆ ಟ್ಯಾಗ್ ಮಾಡಲಾದ ಸಂಖ್ಯೆಯನ್ನು ವಿಶ್ಲೇಷಿಸಲಾಗುತ್ತಿದ್ದು, ಗೂಢಚರ್ಯೆ ಯತ್ನಗಳನ್ನು ಶಂಕಿಸಲಾಗುತ್ತಿದೆ. ಗಡಿ ಪ್ರದೇಶಗಳಲ್ಲಿ ಪಾರಿವಾಳಗಳನ್ನು ಸೆರೆಹಿಡಿಯಲಾಗಿದೆ ಎಂದು ಹೇಳಿದ್ದಾರೆ.
ಕಳೆದ ಶನಿವಾರ ಇಲ್ಲಿನ ರೊರಾವಾಲಾ ಪೋಸ್ಟ್ನಲ್ಲಿರುವ ಗಡಿ ಭದ್ರತಾ ಪಡೆಯ ಜವಾನನ ಭುಜದ ಮೇಲೆ ಶಂಕಿತ ಪಾರಿವಾಳವೊಂದು ತಾನೇ ತಾನಾಗಿ ಬಂದು ಕೂತಿದೆ. ಈ ಪಾರಿವಾಳದ ಕಾಲಿನಲ್ಲಿ ಸಣ್ಣ ಪೇಪರ್ ತುಂಡನ್ನು ಕಟ್ಟಲಾಗಿತ್ತು.
ಈ ಪೇಪರ್ ನಲ್ಲಿ ಕೆಲ ಸಂಪರ್ಕ ಸಂಖ್ಯೆಗಳನ್ನು ನಮೂದಿಸಲಾಗಿತ್ತು. ಈ ಪಾರಿವಾಳ ಗಡಿಯುದ್ದಕ್ಕೂ ಹಾರಾಟ ನಡೆಸಿತ್ತು. ಹೀಗಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಎಸ್ಎಫ್ ಸಿಬ್ಬಂದಿ ಲಿಖಿತ ಬೇಡಿಕೆಯೊಂದಿಗೆ ಪಕ್ಷಿಯನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ಬಿಎಸ್ಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.