ರೈತರ ಪ್ರತಿಭಟನೆ: ಹೋಟೆಲ್ನ ಹಿಂಬಾಗಿಲಿನಿಂದ ಹೆದರಿ ಜಾರಿಕೊಂಡ ಬಿಜೆಪಿ ಮುಖಂಡರು
ಫಂಗ್ವಾರ, ಡಿಸೆಂಬರ್ 26: ರೈತರ ಪ್ರತಿಭಟನೆಗೆ ಹೆದರಿ ಬಿಜೆಪಿ ಮುಖಂಡರು ಹೋಟೆಲ್ ಹಿಂಬಾಗಿಲಿನಿಂದ ಓಡಿ ಹೋದ ಘಟನೆ ಪಂಜಾಬ್ನ ಫಂಗ್ವಾರದಲ್ಲಿ ನಡೆದಿದೆ.
ಕೇಂದ್ರದ ಮೂರು ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಫಂಗ್ವಾರದಲ್ಲಿ ಬಿಜೆಪಿ ಮುಖಂಡರಿದ್ದ ಹೋಟೆಲ್ ಮುಂಭಾಗದಲ್ಲಿ ಜಮಾವಣೆಗೊಂಡರು. ಪರಿಣಾಮ ಹೋಟೆಲ್ನಲ್ಲಿದ್ದ ಬಿಜೆಪಿ ಮುಖಂಡರು ಬಿಗಿ ಪೊಲೀಸ್ ಭದ್ರತೆಯಲ್ಲಿ ಹೋಟೆಲ್ ಹಿಂಬಾಗಿಲಿನಿಂದ ಜಾರಿಕೊಂಡಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯನ್ನು ಬಿಜೆಪಿ ನಾಯಕರು ಆಚರಿಸುತ್ತಿದ್ದ ಹೋಟೆಲ್ನ ಮಂಭಾಗದಲ್ಲಿ ಭಾರ್ತಿ ಕಿಸಾನ್ ಯೂನಿಯನ್ (ದೋಬಾ) ದ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು. ರೈತರ ಆಗಮನಕ್ಕೆ ಕೆಲವು ನಿಮಿಷಗಳ ಹಿಂದಷ್ಟೇ ಬಿಜೆಪಿ ನಾಯಕರು ಹೋಟೆಲ್ಗೆ ಬಂದಿದ್ದರು.
ಆದರೆ ಪ್ರತಿಭಟನೆ ಆರಂಭವಾದ ಬಳಿಕ ಬಿಜೆಪಿಯ ಜಿಲ್ಲಾಧ್ಯಕ್ಷ ಭಾರತಿ ಶರ್ಮಾ ಸೇರಿದಂತೆ ಯಾವೊಬ್ಬ ಬಿಜೆಪಿ ನಾಯಕರನ್ನು ಒಳಗೆ ಬಿಡಲಿಲ್ಲ. ಹೀಗಾಗಿ ಪ್ರತಿಭಟನಾಕಾರರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪೊಲೀಸ್ ರಕ್ಷಣೆಯಲ್ಲಿ ಹಿಂಬಾಗಿಲಿನಿಂದ ಒಬ್ಬೊಬ್ಬರೇ ತೆರಳಬೇಕಾಯಿತು ಎಂದು ಎನ್ಡಿಟಿವಿ ವರದಿ ಮಾಡಿದೆ.
ಅವರಲ್ಲಿ ಬಿಜೆಪಿ ಜಿಲ್ಲೆ ಮತ್ತು ಬ್ಲಾಕ್ ಅಧ್ಯಕ್ಷರಾದ ರಾಕೇಶ್ ದುಗ್ಗಲ್ ಮತ್ತು ಪರಮ್ಜಿತ್ ಸಿಂಗ್ ಪಮ್ಮಾ ಚಚೋಕಿ ಮತ್ತು ಮಾಜಿ ಮೇಯರ್ ಅರುಣ್ ಖೋಸ್ಲಾ ಸೇರಿದ್ದಾರೆ.