ರೈತರನ್ನು ಗುಲಾಮರನ್ನಾಗಿಸಲು ಕೃಷಿ ಕಾಯ್ದೆ ಜಾರಿ ಎಂದ ರಾಹುಲ್ ಗಾಂಧಿ
ಪಟಿಯಾಲಾ, ಅಕ್ಟೋಬರ್.06: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಸಂಬಂಧಿತ ಕಾಯ್ದೆಗಳು ದೇಶದ ರೈತರನ್ನು ಮತ್ತು ಕೂಲಿ ಕಾರ್ಮಿಕರನ್ನು ಉದ್ಯಮಗಳ ಅಡಿಯಾಳು ಮಾಡುತ್ತವೆ ಎಂದು ಸಂಸದ ರಾಹುಲ್ ಗಾಂಧಿ ಗುಡುಗಿದ್ದಾರೆ.
ಪಂಜಾಬ್ ಪಟಿಯಾಲ ಜಿಲ್ಲೆಯ ಸನೌರ್ ಬಳಿಯ ಫ್ರಾನ್ಸಿವಾಲಾ ಗ್ರಾಮದಲ್ಲಿ 'ಖೇಟಿ ಬಚಾವೋ ಯಾತ್ರೆ' ಅಡಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ಹರಿ ಹಾಯ್ದರು.
ಹರಿಯಾಣ ಗಡಿಯಲ್ಲೇ 5000 ಗಂಟೆ ಕಾಯುತ್ತೇನೆ ಎಂದ ರಾಹುಲ್ ಗಾಂಧಿ
ಕೃಷಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಹೋರಾಟ ಕೇವಲ ರೈತರು ಮತ್ತು ಕಾರ್ಮಿಕರಿಂದ ಮಾತ್ರ ನಡೆಯುತ್ತಿಲ್ಲ. ಇಂದು ಇಡೀ ದೇಶವೇ ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ ಎಂದು ಕಿಡಿ ಕಾರಿದ್ದಾರೆ. ಕಳೆದ ಭಾನುವಾರ ಪಂಜಾಬ್ ಮೋಗಾ ಜಿಲ್ಲೆಯಿಂದ ಕೃಷಿ ಕಾಯ್ದೆ ವಿರೋಧಿಸಿ ರಾಹುಲ್ ಗಾಂಧಿ ಅವರು 'ಖೇಟಿ ಬಚಾವೋ ಯಾತ್ರೆ' ಆರಂಭಿಸಿದ್ದರು.
ಮುಂದೆ ಹೋರಾಟ ಮಾಡಿದರೂ ಉಪಯೋಗವಿಲ್ಲ
"ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ಈಗಲೇ ಹೋರಾಟ ನಡೆಸಬೇಕು. ಕಾಯ್ದೆಗಳನ್ನು ತಿದ್ದುಪಡಿಗೊಳಿಸುವುದು ಅಥವಾ ವಾಪಸ್ ಪಡೆಯುವವರೆಗೂ ಹೋರಾಟವನ್ನು ಮಾಡಬೇಕು. ಇಲ್ಲದಿದ್ದರೆ ಇಲ್ಲಿಂದ ಆರು ತಿಂಗಳ ಅಥವಾ ಒಂದು ವರ್ಷದ ಬಳಿಕ ನಾವು ಎಷ್ಟೇ ಹೋರಾಟ ಮತ್ತು ಪ್ರತಿಭಟನೆಗಳನ್ನು ನಡೆಸಿದರೂ ಉಪಯೋಗಕ್ಕೆ ಬರುವುದಿಲ್ಲ" ಎಂದು ರಾಹುಲ್ ಗಾಂಧಿ ದೂಷಿಸಿದ್ದಾರೆ.
ಕೃಷಿ ಕಾಯ್ದೆಯಿಂದ ರೈತರು, ಕೂಲಿ ಕಾರ್ಮಿಕರಿಗಷ್ಟೇ ನಷ್ಟವಲ್ಲ
ಕೃಷಿ ಸಂಬಂಧಿತ ಕಾಯ್ದೆ ಜಾರಿಗೊಳಿಸುವುದರಿಂದ ಕೇವಲ ರೈತರು ಮತ್ತು ಕೂಲಿ ಕಾರ್ಮಿಕರಿಗಷ್ಟೇ ನಷ್ಟವಲ್ಲ. ಬದಲಿಗೆ ಸಣ್ಣ ಪ್ರಮಾಣದ ವ್ಯಾಪಾರಿಗಳಿಗೂ ಅಪಾಯ ತಪ್ಪಿದ್ದಲ್ಲ. ಕೇಂದ್ರ ಸರ್ಕಾರವು ಈ ಬಗ್ಗೆ ಯಾವುದೇ ರೀತಿ ಲಕ್ಷ್ಯ ವಹಿಸಿಲ್ಲ ಮತ್ತು ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ರಾಹುಲ್ ಗಾಂಧಿ ದೂಷಿಸಿದ್ದಾರೆ.
"ರೈತರು ಮುಂದೊಂದು ದಿನ ಭೂಮಿಯನ್ನು ಕಳೆದುಕೊಳ್ಳುತ್ತಾರೆ"
"ರೈತರು ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಕೃಷಿ ಸಂಬಂಧಿತ ಕಾಯ್ದೆಗಳನ್ನು ಜಾರಿಗೊಳಿಸಿರುವುದಾಗಿ ಕೇಂದ್ರ ಸರ್ಕಾರವು ಹೇಳುತ್ತಿದೆ. ಆದರೆ ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಸಂಸದ ರಾಹುಲ್ ಗಾಂಧಿ ಅವರು ಹೇಳಿದಂತೆ ಮುಂದೊಂದು ದಿನ ಕಾರ್ಪೊರೇಟ್ ಉದ್ಯಮಿಗಳು ರೈತರನ್ನು ಅಡಿಯಾಳಾಗಿ ಮಾಡಿಕೊಳ್ಳುತ್ತಾರೆ. ಅಲ್ಲದೇ ನಿಮ್ಮ ಭೂಮಿಯನ್ನು ನಿಮ್ಮಿಂದ ಕಸಿಕೊಳ್ಳುತ್ತಾರೆ" ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ದೂಷಿಸಿದ್ದಾರೆ.
ಹರಿಯಾಣ ಗಡಿಯಲ್ಲಿ ರಾಜಕೀಯ ಹೈಡ್ರಾಮಾ
ಮಂಗಳವಾರ ಟ್ರ್ಯಾಕ್ಟರ್ ರ್ಯಾಲಿ ಮೂಲಕ ಪಂಜಾಬ್ ನಿಂದ ಹರಿಯಾಣಕ್ಕೆ ತೆರಳುತ್ತಿದ್ದ ರಾಹುಲ್ ಗಾಂಧಿ ನೇತೃತ್ವದ ಪ್ರತಿಭಟನಾಕಾರರನ್ನು ಪಟಿಯಾಲಾದ ನುರ್ಪುರ್ ಬಳಿ ತಡೆ ಹಿಡಯಲಾಗಿತ್ತು. ಹರಿಯಾಣದ ಗಡಿಯಲ್ಲಿ ಬ್ಯಾರಿಕೇಡ್ ಹಾಕುವ ಮೂಲಕ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಹರಿಯಾಣ ಪ್ರವೇಶಿಸಲು 5000 ಗಂಟೆಗಳವರೆಗೂ ಕಾಯುವುದಕ್ಕೂ ನಾನು ಸಿದ್ಧ ಎಂದು ರಾಹುಲ್ ಗಾಂಧಿ ಹೇಳಿದರು. ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ರಾಹುಲ್ ಗಾಂಧಿ ಮತ್ತು ಅವರೊಂದಿಗೆ ಗರಿಷ್ಠ 100 ಮಂದಿ ಪ್ರತಿಭಟನಾಕಾರರಿಗೆ ಹರಿಯಾಣ ಪ್ರವೇಶಿಸಲು ಅನುಮತಿ ನೀಡಲಾಯಿತು.