ಪಂಜಾಬ್ ನಲ್ಲಿ 15ನೇ ದಿನಕ್ಕೆ ಕಾಲಿಟ್ಟ "ರೈಲ್ ರೋಖೋ" ಚಳುವಳಿ
ಅಮೃತಸರ್, ಅಕ್ಟೋಬರ್.08: ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ಪಂಜಾಬ್ ಪ್ರತಿಭಟನೆಯ ತೀವ್ರತೆ ಕಿಂಚಿತ್ತೂ ಕಡಿಮೆಯಾಗಿಲ್ಲ. ಭಾರತೀಯ ಕಿಸಾನ್ ಒಕ್ಕೂಟ ಮತ್ತು ಜಮ್ಹುರಿ ಕಿಸಾನ್ ಸಭಾ ಸಂಘಟನೆಗಳ ಹೋರಾಟ 15ನೇ ದಿನಕ್ಕೆ ಕಾಲಿಟ್ಟಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೃಷಿ ಸಂಬಂಧಿತ ಕಾಯ್ದೆಗೆ ಅಂಕಿತ ಹಾಕಿದ ಮರುಕ್ಷಣದಿಂದಲೇ ಅಮೃತಸರ್ ನಲ್ಲಿ ದೇವಿದಾಸಪುರ್ ನಲ್ಲಿ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ವತಿಯಿಂದ ರೈಲ್ ರೋಖೋ ಚಳುವಳಿ ಆರಂಭಿಸಲಾಗಿತ್ತು.
ರೈತರನ್ನು ಗುಲಾಮರನ್ನಾಗಿಸಲು ಕೃಷಿ ಕಾಯ್ದೆ ಜಾರಿ ಎಂದ ರಾಹುಲ್ ಗಾಂಧಿ
ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ ಕಾಯ್ದೆಯನ್ನು ಪ್ರತಿಪಕ್ಷಗಳು ಈಗ ವಿರೋಧಿಸುತ್ತಿವೆ. ರಾಜಕೀಯ ಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಪ್ರೇರಿತ ಹೋರಾಟ ನಡೆಸುತ್ತಿವೆ. ಒಂದು ವೇಳೆ ರೈತರ ಹಿತ ಕಾಪಾಡುವುದೇ ಅವರ ಉದ್ದೇಶವಾಗಿದ್ದಲ್ಲಿ, ಸಂಸತ್ ನಲ್ಲಿಯೇ ಕೃಷಿ ಕಾಯ್ದೆ ಅಂಗೀಕಾರಗೊಳ್ಳದಂತೆ ನೋಡಿಕೊಳ್ಳಬಹುದಿತ್ತಲ್ಲವೇ ಎಂದು ಪ್ರತಿಭಟನಾನಿರತ ರೈತರು ಮೇಲಿಂದ ಮೇಲೆ ಪ್ರಶ್ನೆ ಮಾಡುತ್ತಿದ್ದಾರೆ.
ರೈಲ್ವೆ ಹಳಿ ಮೇಲೆ ದಿನ ಕಳೆಯುತ್ತಿರುವ ಪ್ರತಿಭಟನಾಕಾರರು:
ಕೃಷಿ ಮಸೂದೆಗಳನ್ನು ವಾಪಸ್ ತೆಗೆದುಕೊಳ್ಳುವವರೆಗೂ ಕೇಂದ್ರ ಸರ್ಕಾರದ ವಿರುದ್ಧ ನಮ್ಮ ಹೋರಾಟ ಹೀಗೆ ಮುಂದುವರಿಯಲಿದೆ. ನಾವು ರೈಲಿನ ಹಳಿಗಳ ಮೇಲೆಯೇ ಕುಳಿತುಕೊಳ್ಳುತ್ತೇವೆ. ಪಂಜಾಬ್ ರಾಜ್ಯಾದ್ಯಂತ ಒಂದೇ ಒಂದು ರೈಲು ಸಂಚಾರಕ್ಕೂ ಅನುಮತಿ ನೀಡುವುದಿಲ್ಲ ಎಂದು ಜಮ್ಹುರಿ ಕಿಸಾನ್ ಸಭಾ ಸದಸ್ಯ ಜಸ್ವಿಂದರ್ ಸಿಂಗ್ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ರೈಲು ಹಳಿಗಳ ಮೇಲೆ ಕಪ್ಪು ಬಟ್ಟೆ ಧರಿಸಿದ ರೈತರು ಹೋರಾಟ ಮುಂದುವರಿಸಿರುವ ಪ್ರತಿಭಟನಾಕಾರರು, ರೈಲ್ವೆ ಹಳಿಗಳ ಮೇಲೆಯೇ ದಿನ ಕಳೆಯುತ್ತಿದ್ದಾರೆ.
ರೈತರ ವಿರೋಧಕ್ಕೆ ಕಾರಣವಾಗಿರುವ ಕೃಷಿ ಕಾಯ್ದೆಗಳು:
ಸಂಸತ್ ನಲ್ಲಿ ತೀವ್ರ ಸದ್ದು ಗದ್ದಲಕ್ಕೆ ಕಾರಣವಾದ ಕೃಷಿ ಸಂಬಂಧಿತ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಳೆದ ಸಪ್ಟೆಂಬರ್.27ರಂದು ಅನುಮೋದನೆ ನೀಡಿದ್ದರು. ಇದರಿಂದ ಮೂರು ಮಸೂದೆಗಳು ಇದೀಗ ಕಾಯ್ದೆಗಳಾಗಿ ಬದಲಾಗಿವೆ. ಈ ಮೂರು ಕೃಷಿ ಸಂಬಂಧಿತ ಕಾಯ್ದೆಗಳು ಯಾವುವು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
1. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ
2. ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ
3. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ