ಪಂಜಾಬ್ನಲ್ಲಿ ನಾಯಕರ ಹುಡುಕಾಟ ನಡೆಸುತ್ತಿರುವ ಬಿಜೆಪಿ
ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ಪಂಜಾಬ್ನಲ್ಲಿ ನಾಯಕರಿಗಾಗಿ ಹುಡುಕಾಟ ನಡೆಸುತ್ತಿದೆ.
ಒಂದೆಡೆ ಬಿಜೆಪಿಗೆ ಈ ಬಾರಿ ಯಾವುದೇ ಮಿತ್ರ ಪಕ್ಷವೂ ಇಲ್ಲ, ಇನ್ನೊಂದೆಡೆ ರೈತರ ಪ್ರತಿಭಟನೆಯ ಬಿಸಿ ತಟ್ಟಿದೆ, ಹೀಗಿರುವಾಗ ಬಿಜೆಪಿಗೆ ಒಬ್ಬ ರಾಜ್ಯ ಮಟ್ಟದ ನಾಯಕನನ್ನು ಹುಡುಕುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈ ಹಿಂದೆ ಬಿಜೆಪಿ ಕೇವಲ 23 ಸ್ಥಾನಗಳಿಗೆ ಸ್ಪರ್ಧಿಸುತ್ತಿತ್ತು, ಆದರೆ ಈ ಬಾರಿ ಎಲ್ಲಾ 117 ಸ್ಥಾನಗಳಿಗೆ ಸ್ಪರ್ಧಿಸುವ ಅನಿವಾರ್ಯತೆ ಎದುರಾಗಿದೆ, ಆದರೆ ಬಿಜೆಪಿಗೆ ರಾಜ್ಯ ಹಾಗೂ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಸಿಖ್ ನಾಯಕರ ಕೊರತೆ ತೀವ್ರವಾಗಿ ಕಾಣಿಸುತ್ತಿದೆ. ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಶಿರೋಮಣಿ ಅಕಾಲಿದಳ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ ಎದುರು ನಿಲ್ಲುವಂತಹ ನಾಯಕರು ಬಿಜೆಪಿಯಲ್ಲಿ ಕಾಣಿಸುತ್ತಿಲ್ಲ.
ಆದಾಗ್ಯೂ, ಪಕ್ಷ ಬಲವರ್ಧನೆಗೆ ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಪಕ್ಷಕ್ಕಾಗಿ ಕೆಲಸ ಮಾಡುವ 300-400 ಸ್ವಯಂ ಸೇವಕರನ್ನು ಗುರುತಿಸುವಂತೆ ರಾಜ್ಯ ನಾಯಕರಿಗೆ ಸೂಚಿಸಲಾಗಿದೆ.
ಇಂತಹವರಲ್ಲಿ ಬುದ್ಧಿಜೀವಿಗಳು ಹಾಗೂ ಪ್ರಭಾವಿಗಳನ್ನು ಹೆಚ್ಚು ಸೇರಿಸಿಕೊಳ್ಳಲು ಸೂಚಿಸಲಾಗಿದೆ, ಇದರ ಪರಿಣಾಮವಾಗಿಯೇ ಕಳೆದ ವಾರ ಗುರುಕಾಶಿ ವಿವಿಯ ಕುಲಪತಿ ಜಸ್ವಿಂದರ್ ಸಿಂಗ್ ದಿಲ್ಲೋನ್ ವಕೀಲರಾದ ಹರಿಂದರ್ ಖಲೋನ್, ಜಗ್ಮೋಹನ್ ಸಿಂಗ್ ಸೈನಿ, ನಿರ್ಮಲ್ ಸಿಂಗ್ ಮೊಹಾಲಿ ಬಿಜೆಪಿ ಸೇರಿದ್ದರು.
ಇಂಥವರ ಮೂಲಕ ಸಿಖ್ಖರು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ವಿರುದ್ಧ ಇದ್ದಾರೆ ಎನ್ನುವ ಅಭಿಪ್ರಾಯವನ್ನು ಹೋಗಲಾಡಿಸಿದ್ದಾರೆ.
ಇನ್ನೊಂದೆಡೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇ9ರಷ್ಟು ಮತ ಪ್ರಮಾಣವನ್ನು ಹೊಂದಿತ್ತು, ಈ ಚುನಾವಣೆ ಒಳಗೆ ರೈತ ಮಸೂದೆಗೆ ಪರಿಹಾರವನ್ನು ಕಂಡುಕೊಂಡರೆ ಈ ಪ್ರಮಾಣವನ್ನು ಹೆಚ್ಚಿಸಬಹುದು. ಹಾಗೆಯೇ ಬಿಜೆಪಿಯು ಇತರ ಪಕ್ಷಗಳಲ್ಲಿನ ಅತೃಪ್ತರ ಮೇಲೂ ಕಣ್ಣಿಟ್ಟಿದೆ.