ಸನ್ನಿ ಡಿಯೋಲ್ ಗೆ ಟಿಕೆಟ್, ವಿನೋದ್ ಖನ್ನಾ ಪತ್ನಿಗೆ ಬೇಸರ
ಅಮೃತಸರ್, ಏಪ್ರಿಲ್ 25: ಪಂಜಾಬಿನ ಗುರುದಾಸಪುರ ಕ್ಷೇತ್ರದಿಂದ ಸ್ಪರ್ಧಿಸಲು ಧರ್ಮೇಂದ್ರ ಅವರ ಪುತ್ರ ನಟ ಸನ್ನಿ ಡಿಯೋಲ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಕ್ಷೇತ್ರವನ್ನು ಸಂಸದರಾಗಿ ಹಿರಿಯ ನಟ ವಿನೋದ್ ಖನ್ನಾ ಪ್ರತಿನಿಧಿಸುತ್ತಿದ್ದರು. ಈಗ ಖನ್ನಾ ಕುಟುಂಬದ ಬದಲು ಧರ್ಮೇಂದ್ರ ಅವರ ಪುತ್ರನಿಗೆ ಟಿಕೆಟ್ ಸಿಕ್ಕಿರುವುದರ ಬಗ್ಗೆ ದಿವಂಗತ ಖನ್ನಾ ಅವರ ಪತ್ನಿ ಕವಿತಾ ಬೇಸರ ವ್ಯಕ್ತಪಡಿಸಿದ್ದಾರೆ.
2017ರಲ್ಲಿ ವಿನೋದ್ ಖನ್ನಾ ಅವರ ಮರಣ ನಂತರ ಅವರ ಪತ್ನಿ ಕವಿತಾ ಖನ್ನಾ ಅಥವಾ ಅಕ್ಷಯ್ ಖನ್ನಾ ಅವರನ್ನು ಕರೆ ತರುವ ಸುದ್ದಿ ಹಬ್ಬಿತ್ತು. ಆದರೆ, ಈಗ 62 ವರ್ಷ ವಯಸ್ಸಿನ ಸನ್ನಿ ಡಿಯೋಲ್ ಗೆ ಟಿಕೆಟ್ ಸಿಕ್ಕಿದೆ.
ಪಂಜಾಬಿನ ಗುರ್ದಾಸ್ಪುರ್ ನಿಂದ ಸನ್ನಿ ಡಿಯೋಲ್ ಸ್ಪರ್ಧೆ
ಪಕ್ಷದ ಈ ನಿರ್ಧಾರದಿಂದ ನನಗೆ ಮಾತ್ರವಲ್ಲ, ನನ್ನನ್ನು ಸಂಸತ್ಗೆ ಕಳುಹಿಸಲು ನಿರ್ಧರಿಸಿದ್ದ ಮತದಾರರ ಮನಸ್ಸಿಗೂ ಘಾಸಿಯನ್ನುಂಟು ಮಾಡಲಾಗಿದೆ, ನನ್ನ ಮುಂದಿನ ನಿರ್ಧಾರದ ಬಗ್ಗೆ ವಿನೋದ್ ಖನ್ನಾ ಬೆಂಬಲಿಗರ ಜೊತೆ ಚರ್ಚಿಸುತ್ತೇನೆ ಎಂದು ಕವಿತಾ ಹೇಳಿದ್ದಾರೆ. ಆದರೆ, ಕವಿತಾ ಅವರು ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಬಿಜೆಪಿ ನಂಬಿಸಿ ಮೋಸಮಾಡಿದೆ ಎಂದಿದ್ದಾರೆ
ಪಂಜಾಬ್ನ ಗುರುದಾಸಪುರದಿಂದ 1998, 1999, 2004 ಮತ್ತು 2014ರಲ್ಲಿ ವಿನೋದ್ ಖನ್ನಾ ಗೆಲುವು ಸಾಧಿಸಿ, ನಾಲ್ಕು ಬಾರಿ ಸಂಸದರಾಗಿ ಕಾರ್ಯ ನಿರ್ವಹಿಸಿದ್ದರು. ಕವಿತಾ ಖನ್ನಾ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ತಮಗೆ ಟಿಕೆಟ್ ನೀಡದೆ ಸನ್ನಿ ಡಿಯೋಲ್ಗೆ ಟಿಕೆಟ್ ನೀಡಿರುವುದರಿಂದ ಸಹಜವಾಗಿ ಬೇಸರಗೊಂಡು, ಬಿಜೆಪಿ ನಂಬಿಸಿ ಮೋಸಮಾಡಿದೆ ಎಂದಿದ್ದಾರೆ.
3 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಸ್ಪರ್ಧೆ
ಪಂಜಾಬಿನಲ್ಲಿ ಶಿರೋಮಣಿ ಅಕಾಲಿ ದಳದ ಜತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಒಟ್ಟು 13 ಲೋಕಸಭಾ ಸ್ಥಾನಗಳ ಪೈಕಿ ಅಮೃತಸರ್, ಗುರ್ ದಾಸ್ಪುರ್, ಹೋಶಿಯಾರ್ ಪುರ್ 3 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದೆ. ಅಮೃತಸರ ಕ್ಷೇತ್ರಕ್ಕೆ ನಟಿ ಪೂನಂ ದಿಲ್ಲೋನ್ ಹಾಗೂ ರಾಜಿಂದರ್ ಸಿಂಗ್ ಹೆಸರು ಕೂಡ ಕೇಳಿ ಬಂದಿದೆ.
2017ರಲ್ಲೇ ಕವಿತಾ ಹೆಸರು ಕೇಳಿ ಬಂದಿತ್ತು
2017ರಲ್ಲಿ ಹಾಲಿ ಸಂಸದ ವಿನೋದ್ ಖನ್ನಾ ಅವರ ಮರಣ ನಂತರ ಅವರ ಪತ್ನಿ ಕವಿತಾ ಖನ್ನಾ ಅಥವಾ ಅಕ್ಷಯ್ ಖನ್ನಾ ಅವರನ್ನು ಕರೆ ತರುವ ಸುದ್ದಿ ಹಬ್ಬಿತ್ತು. ಆದರೆ, ಗುರ್ ದಾಸ್ ಪುರ್ ಉಪಚುನಾವಣೆಯಲ್ಲಿ ಮುಂಬೈ ಮೂಲದ ಉದ್ಯಮಿ ಸ್ವರನ್ ಸಲಾರಿಯಾ ಅವರಿಗೆ ಟಿಕೆಟ್ ನೀಡಿತ್ತು. ಸಲಾರಿಯಾ ಅವರು ಕಾಂಗ್ರೆಸ್ಸಿನ ಸುನೀಲ್ ಜಖಾರ್ ಅವರನ್ನು 1.93 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಆದರೆ, ಕವಿತಾ ಅವರು ಬಿಜೆಪಿ ವಿರುದ್ಧ ಆಗ ದನಿಯೆತ್ತಿರಲಿಲ್ಲ.
ಮೋದಿ ಕೂಡಾ ಖನ್ನಾರನ್ನು ಹೊಗಳಿದ್ದರು
ಜನವರಿ 03ರಂದು ಧನ್ವಾದ್ ನಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ಗುರ್ ದಾಸ್ಪುರ್ ಕ್ಷೇತ್ರದಲ್ಲಿ ಸಂಸದರಾಗಿದ್ದ ವಿನೋದ್ ಖನ್ನಾ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಅನುಕರಣೀಯ ಎಂದು ಹೊಗಳಿದ್ದರು. ಹೀಗಾಗಿ, ಕವಿತಾ ಖನ್ನಾ ಅವರಿಗೆ ಈ ಬಾರಿಯಾದರೂ ತಮ್ಮ ಕುಟುಂಬಕ್ಕೆ ಟಿಕೆಟ್ ಸಿಗಬಹುದು ಎಂಬ ಆಸೆ ಚಿಗುರೊಡೆದಿತ್ತು.
ಸಲಾರಿಯಾಗೂ ಕೈಕೊಟ್ಟ ಬಿಜೆಪಿ
ಉಪಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದಿದ್ದ ಉದ್ಯಮಿ ಸಲಾರಿಯಾಗೂ ಬಿಜೆಪಿ ಕೈಕೊಟ್ಟಿದೆ. ಹೈಕಮಾಂಡ್ ನಿರ್ಧಾರದಿಂದ ಬೇಸರಗೊಂಡಿರುವ ಸಲಾರಿಯಾ ಅವರು ಏಪ್ರಿಲ್ 27ರಂದು ಸುದ್ದಿಗೋಷ್ಠಿ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಪಠಾಣ್ ಕೋಟ್ ಜಿಲ್ಲೆಯ ಗುರದಾಸಪುರ ಕ್ಷೇತ್ರಕ್ಕೆ ಸೇರುವ ಛೊಹಾನಾ ಗ್ರಾಮದವರಾದರೂ ಮುಂಬೈನಲ್ಲಿ ಉದ್ಯಮ ಹೊಂದಿದ್ದಾರೆ. ಹಾಲಿ ಸಂಸದರಾದರೂ ಸಲಾರಿಯಾ ಅವರಿಗೆ ಟಿಕೆಟ್ ಕೈ ತಪ್ಪಿದೆ.