ಪಂಜಾಬಿನಲ್ಲಿ ಪತ್ರಕರ್ತ ಅರ್ನಬ್ ವಿರುದ್ಧ ಎರಡು ಎಫ್ಐಆರ್
ಅಮೃತ್ ಸರ್, ಏಪ್ರಿಲ್ 24: ಹಿರಿಯ ಪತ್ರಕರ್ತ, ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಪಂಜಾಬ್ ನಲ್ಲಿ ಪ್ರಕರಣ ದಾಖಲಾಗಿದ್ದು, ಎರಡು ಎಫ್ಐಆರ್ ದಾಖಲಿಸಲಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಅರ್ನಬ್ ವಿರುದ್ಧ ದೂರು ದಾಖಲಾಗಿತ್ತು.
ಪಂಜಾಬಿನ ಬಟಾಲಾ ಹಾಗೂ ಅಬೊಹಾರ್ (ಫಜಿಕಾ) ಪೊಲೀಸ್ ಠಾಣೆಗಳಲ್ಲಿ ಪ್ರಕರಣ, ಎಫ್ಐಆರ್ ದಾಖಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರಾದ ರೋಷನ್ ಹಾಗೂ ಹರ್ ಮೊಹಿಂದರ್ ಎಂಬುವರು ಅರ್ನಬ್ ವಿರುದ್ಧ ದೂರು ನೀಡಿದ್ದರು.
ಪತ್ರಕರ್ತ ಅರ್ನಬ್ ದಂಪತಿ ಮೇಲೆ ಹಲ್ಲೆ: ಸೋನಿಯಾ ಮೇಲೆ ಆರೋಪ
ಅರ್ನಬ್ ವಿರುದ್ಧ ಐಪಿಸಿ ಸೆಕ್ಷನ್ 153 ಅನ್ವಯ ಪ್ರಕರಣ ದಾಖಲಾಗಿದ್ದು, ಜಾಮೀನು ಪಡೆಯಬಹುದಾಗಿದೆ. ಒಬ್ಬ ವ್ಯಕ್ತಿಯ ಧರ್ಮ, ಜಾತಿ, ಮತ, ಪಂಥದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದು, ಜನ್ಮಸ್ಥಳ, ಈಗ ನೆಲೆಸಿರುವ ಸ್ಥಳ, ಭಾಷೆ ಮುಂತಾದವುಗಳ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದರೆ ಈ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗುತ್ತದೆ. ಐಪಿಸಿ ಸೆಕ್ಷನ್ 505 (2), 505 ಕೂಡಾ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪಾಲ್ಗಾರ್ ಘಟನೆ ಕುರಿತಂತೆ ಟಿವಿಯಲ್ಲಿ ಚರ್ಚೆ ನಡೆಯುವಾಗ ಅರ್ನಬ್ ಅವರು, ಸೋನಿಯಾ ಗಾಂಧಿ ವಿರುದ್ಧ ನೇರವಾಗಿ ಟೀಕೆ ಮಾಡಿದ್ದರು. ಪಾಲ್ಗಾರ್ ನಲ್ಲಿ ಮಕ್ಕಳ ಕಳ್ಳರು ಎಂದು ಭಾವಿಸಿ ಇಬ್ಬರು ಸಾಧುಗಳು ಸೇರಿದಂತೆ ಮೂವರನ್ನು ಸಾರ್ವಜನಿಕರು ಹೊಡೆದು ಹತ್ಯೆ ಮಾಡಿದ ಘಟನೆ ಬಗ್ಗೆ ಭಾರಿ ಚರ್ಚೆ ನಡೆದಿದೆ.