ಟಿಟಿಡಿಗೆ ನೂತನ ಅಧ್ಯಕ್ಷ: ನಾನು ಹಿಂದೂ, ಕ್ರಿಶ್ಚಿಯನ್ ಅಲ್ಲ, ಸ್ಪಷ್ಟನೆ
ಅಮರಾವತಿ, ಜೂನ್ 22: ಆಂಧ್ರಪ್ರದೇಶ ಸರಕಾರಕ್ಕೆ ಭರ್ಜರಿ ಆದಾಯ ತಂದುಕೊಡುತ್ತಿರುವ ಮತ್ತು ದೇಶದ ಶ್ರೀಮಂತ ದೇವಾಲಯ ತಿರುಮಲ ತಿರುಪತಿ ತಿಮ್ಮಪ್ಪ ದೇವಸ್ಥಾನಂ (ಟಿಟಿಡಿ) ನೂತನ ಮುಖ್ಯಸ್ಥರಾಗಿ ಸಿಎಂ ಜಗನ್ಮೋಹನ್ ರೆಡ್ಡಿಯವರ ಹತ್ತಿರದ ಸಂಬಂಧಿ ವೈ ವಿ ಸುಬ್ಬಾ ರೆಡ್ಡಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರ ಹೆಸರು ಪ್ರಕಟವಾಗುತ್ತಿದ್ದಂತೆಯೇ, ಅವರು ಹಿಂದೂ ಸಮುದಾಯದವರಲ್ಲ ಎನ್ನುವ ಸುಳ್ಳು ಸುದ್ದಿ ಹರಡಿ, ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಲು ಆರಂಭಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸುಬ್ಬಾರೆಡ್ಡಿ, ನಾನು ಹಿಂದೂವಾಗಿಯೇ ಹುಟ್ಟಿದ್ದು, ಸಾಯುವುದು ಕೂಡಾ ಎಂದು ಹೇಳಿದ್ದಾರೆ.
ಟಿಟಿಡಿಗೆ ಸುಧಾಮೂರ್ತಿ ರಾಜೀನಾಮೆ ನೀಡಿದ್ದು ಸತ್ಯ: ಕಾರಣವೇನು?
ಪ್ರತೀ ವರ್ಷ ನಾನು ಶಬರಿಮಲೆ ಮತ್ತು ಶಿರಡಿಗೆ ಹೋಗುತ್ತೇನೆ, ನನ್ನ ವಿರುದ್ದ ಆರೋಪ ಮಾಡುತ್ತಿರುವವರು, ಒಂದು ಸಲ ಹೈದರಾಬಾದ್ ನಲ್ಲಿರುವ ನನ್ನ ಮನೆಗೆ ಒಮ್ಮೆ ಭೇಟಿ ಕೊಡಲಿ ಎಂದು ಸುಬ್ಬಾರೆಡ್ಡಿ ಸವಾಲೆಸೆದಿದ್ದಾರೆ.
ಹಾಲೀ ಟಿಟಿಡಿ ಅಧ್ಯಕ್ಷರಾಗಿದ್ದ ಮತ್ತು ತೆಲುಗುದೇಶಂ ಮುಖಂಡ ಪುಟ್ಟ ಸುಧಾಕರ್ ಯಾದವ್ ಪದವಿಯಿಂದ ಕೆಳಗೆ ಇಳಿಯಲು ನಿರಾಕರಿಸಿದ್ದರು. ಆದರೆ, ಆಂಧ್ರದ ನೂತನ ಮುಜರಾಯಿ ಸಚಿವ ವೆಲ್ಲಂಪಲ್ಲಿ ಶ್ರೀನಿವಾಸ್ ದೇವಾಲಯಕ್ಕೆ ಭೇಟಿ ನೀಡಿದ ನಂತರ, ಯಾದವ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು.
ರಾಜ್ಯದಲ್ಲಿಯೂ ನಿರ್ಮಾಣವಾಗಲಿದೆ ತಿರುಪತಿ ತಿಮ್ಮಪ್ಪನ ದೇವಸ್ಥಾನ
ಟಿಟಿಡಿ ನೂತನ ಅಧ್ಯಕ್ಷರಾದ ಸುಬ್ಬಾರೆಡ್ಡಿ ಶನಿವಾರ (ಜೂ 22) ಹನ್ನೊಂದು ಗಂಟೆಗೆ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ. ಟಿಟಿಡಿ ಮಂಡಳಿಗೆ ಇನ್ನಷ್ಟು ಸದಸ್ಯರು ಶೀಘ್ರದಲ್ಲೇ ನೇಮಕಗೊಳ್ಳಲಿದ್ದಾರೆ ಎಂದು ದೇವಾಲಯದ ಸಿಇಒ ಹೇಳಿದ್ದಾರೆ.
ರಾಜ್ಯಸಭಾ ಸೀಟಿನ ಆಕಾಂಕ್ಷಿಯಾಗಿದ್ದ ಸುಬ್ಬಾರೆಡ್ಡಿಗೆ ಟಿಟಿಡಿ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಟಿಟಿಡಿ ಮಂಡಳಿಯ ಸುಮಾರು ಹತ್ತು ಸದಸ್ಯರು, ಟಿಡಿಪಿ ಚುನಾವಣೆಯಲ್ಲಿ ಸೋತ ನಂತರ, ಟ್ರಸ್ಟ್ ನಿಂದ ತಾವಾಗಿಯೇ ಹೊರಕ್ಕೆ ಬಂದಿದ್ದಾರೆ.