ಆಂಧ್ರ ಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆ; ಜಗನ್ ಪಕ್ಷದ ಜಯಭೇರಿ
ಹೈದರಾಬಾದ್, ಸೆಪ್ಟೆಂಬರ್ 20; ಆಂಧ್ರ ಪ್ರದೇಶದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದೆ. ವಿವಿಧ ಸ್ಥಳೀಯ ಸಂಸ್ಥೆಗಳ ಶೇ 90ರಷ್ಟು ಸ್ಥಾನಗಳಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಭಾನುವಾರ ಜಿಲ್ಲಾ ಪರಿಷತ್ ಹಾಗೂ ಮಂಡಳ ಪರಿಷತ್ ಚುನಾವಣೆಗಳ ಮತ ಎಣಿಕೆ ನಡೆದಿದೆ. ಜಿಲ್ಲಾ ಪರಿಷತ್ನ 553 ಸ್ಥಾನಗಳಲ್ಲಿ 547 ಸ್ಥಾನಗಳಲ್ಲಿ ವೈಎಸ್ಆರ್ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಮಂಡಲ ಪರಿಷತ್ನ 8083 ಸ್ಥಾನದಲ್ಲಿ 7284ಕ್ಕೂ ಹೆಚ್ಚು ಸ್ಥಾನ ಜಗನ್ ಮೋಹನ್ ರೆಡ್ಡಿ ಪಕ್ಷದ ಪಾಲಾಗಿದೆ.
ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಜೊತೆ ಜಗನ್ ಮಾತಾಡಿದ್ದೇನು?
ಏಪ್ರಿಲ್ 8ರಂದು 553 ಜಿಲ್ಲಾ ಪರಿಷತ್, 7284 ಮಂಡಲ ಪರಿಷತ್ ಚುನಾವಣೆ ನಡೆದಿತ್ತು. ನಿಗದಿತ ವೇಳಾಪಟ್ಟಿಯಂತೆ ಏಪ್ರಿಲ್ 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಬೇಕಿತ್ತು. ಆದರೆ ಟಿಡಿಪಿ, ಬಿಜೆಪಿ ಮತ್ತು ಇತರ ಪಕ್ಷಗಳು ಹೈಕೋರ್ಟ್ ಮೊರೆ ಹೋದ ಕಾರಣ ಮತ ಎಣಿಕೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿತ್ತು.
ಕಳೆದ ಗುರುವಾರ ಚುನಾವಣೆ ಮತ ಎಣಿಕೆ ಮಾಡಬಹುದು ಎಂದು ಹೈಕೋರ್ಟ್ನ ವಿಭಾಗೀಯ ಪೀಠ ಆದೇಶ ನೀಡಿತ್ತು. ಭಾನುವಾರ ಸಂಜೆ 7.30ರ ತನಕ ಪ್ರಕಟವಾದ ಫಲಿತಾಂಶದ ಪೈಕಿ 553 ಜಿಲ್ಲಾ ಪರಿಷತ್ನಲ್ಲಿ 547 ಸ್ಥಾನ ವೈಎಸ್ಆರ್ ಪಕ್ಷ ಗೆದ್ದಿದೆ.
ಜಗನ್ ವಿರುದ್ಧ ಸಿಡಿದೆದ್ದ ಸಂಸದನ ಬಂಧನ, ದೇಶದ್ರೋಹದ ಕೇಸ್ ದಾಖಲು
2019ರ ವಿಧಾನಸಭೆ ಚುನಾವಣೆಯಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷ 175 ಬಲದ ವಿಧಾನಸಭೆಯಲ್ಲಿ 151 ಸ್ಥಾನಗಳಲ್ಲಿ ಗೆದ್ದಿತ್ತು. ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನಗಳ ಪೈಕಿ 22ರಲ್ಲಿ ಗೆಲುವು ಸಾಧಿಸಿತ್ತು.
ಜಗನ್ ರೆಡ್ಡಿ ಸಹೋದರಿ ಶರ್ಮಿಳಾರಿಂದ ತೆಲಂಗಾಣದಲ್ಲಿ ನೂತನ ಪಕ್ಷ ಸ್ಥಾಪನೆ
ಚುನಾವಣೆಯಲ್ಲಿನ ಗೆಲುವಿಗೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದ ಜನಪರ ಕಾರ್ಯಗಳೇ ಕಾರಣ ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷ ಹೇಳಿದೆ. ಮಹಿಳೆಯರು, ಹಿಂದುಳಿದ ವರ್ಗದವರು, ಅಲ್ಪ ಸಂಖ್ಯಾತರ ಅಭಿವೃದ್ಧಿಗಾಗಿ ಸರ್ಕಾರ ಕೈಗೊಂಡ ಕಾರ್ಯಕ್ರಮಗಳನ್ನು ಜನರು ಮೆಚ್ಚಿದ್ದಾರೆ ಎಂದು ಪಕ್ಷ ತಿಳಿಸಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ (ಟಿಡಿಪಿ) ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ಸ್ವಯಂ ಚಂದ್ರಬಾಬು ನಾಯ್ಡು ಪ್ರತಿನಿಧಿಸುವ ಕುಪ್ಪಂ ಕ್ಷೇತ್ರದಲ್ಲಿಯೇ ಟಿಡಿಪಿ ಗೆಲುವು ಸಾಧಿಸಿಲ್ಲ. ಚುನಾವಣೆಗೆ ಕೆಲವೇ ದಿನಗಳು ಇರುವಾಗ ಚಂದ್ರಬಾಬು ನಾಯ್ಡು ಚುನಾವಣೆಯಿಂದ ದೂರ ಉಳಿಯುವುದಾಗಿ ಘೋಷಣೆ ಮಾಡಿದ್ದರು. ಆದರೆ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದರು.
ಏಪ್ರಿಲ್ನಲ್ಲಿಯೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿತ್ತು. ಆದರೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ನಡೆಸುವಾಗ ಸಮರ್ಪಕವಾದ ಪ್ರಕ್ರಿಯೆ ನಡೆಸಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.
ಟಿಡಿಪಿ, ಬಿಜೆಪಿ, ಜನಸೇನಾ ಪಕ್ಷಗಳು ಈ ಕುರಿತು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು. ಈ ಚುನಾವಣೆ ಪ್ರಕ್ರಿಯೆಯಲ್ಲಿ ಯಾವುದೇ ವಿಶ್ವಾಸ ಉಳಿದಿಲ್ಲ. ಆಯೋಗ ಸರ್ಕಾರದ ರಬ್ಬರ್ ಸ್ಟಾಂಪ್ ಆಗಿದೆ. ಚುನಾವಣೆ ರದ್ದುಗೊಳಿಸು ಹೊಸದಾಗಿ ಘೋಷಣೆ ಮಾಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದವು.
ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಗುರುವಾರ ತೀರ್ಪು ನೀಡಿತ್ತು. ಚುನಾವಣಾ ಫಲಿತಾಂಶವನ್ನು ಘೋಷಣೆ ಮಾಡಬೇಕು ಎಂದು ಸೂಚಿಸಿತ್ತು. ಅದರಂತೆ ಭಾನುವಾರ ಮತ ಎಣಿಕೆ ನಡೆದಿದೆ.
ಆಂಧ್ರ ಪ್ರದೇಶಸದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷ ಪಕ್ಕದ ತೆಲಂಗಾಣ ರಾಜ್ಯದಲ್ಲಿ ಸಹ ರಾಜಕೀಯದ ಇನ್ನಿಂಗ್ಸ್ ಆರಂಭಿಸಿದೆ. ವೈ. ಎಸ್. ರಾಜಶೇಖರ ರೆಡ್ಡಿ ಪುತ್ರಿ ವೈ. ಎಸ್. ಶರ್ಮಿಳಾ ರೆಡ್ಡಿ ತೆಲಂಗಾಣದಲ್ಲಿ ಪಕ್ಷವನ್ನು ಆರಂಭಿಸಿದ್ದಾರೆ.