ಆಂಧ್ರಪ್ರದೇಶದಲ್ಲಿ ಸೋಲು ಖಚಿತ: ಚಂದ್ರಬಾಬು ನಾಯ್ಡು ಸಂಜೆ ರಾಜೀನಾಮೆ!
ಅಮರಾವತಿ (ಆಂಧ್ರಪ್ರದೇಶ), ಮೇ 23: ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಹೀನಾಯ ಸೋಲಿನತ್ತ ಮುಖ ಮಾಡಿದ್ದು, ಅದರ ನೈತಿಕ ಹೊಣೆ ಹೊತ್ತು ಚಂದ್ರಬಾಬು ನಾಯ್ಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಗುರುವಾರ ಸಂಜೆ ಆಂಧ್ರಪ್ರದೇಶದ ರಾಜ್ಯಪಾಲರನ್ನು ಭೇಟಿ ಮಾಡಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ.
175 ಸದಸ್ಯ ಬಲದ ಆಂಧ್ರಪ್ರದೇಶದಲ್ಲಿ 130ಕ್ಕೂ ಹೆಚ್ಚು ಕಡೆ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಮುನ್ನಡೆಯಲ್ಲಿದೆ. ಸದ್ಯದಲ್ಲೇ ಜಗನ್ ಮೋಹನ್ ರೆಡ್ಡಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಆರಂಭದಲ್ಲಿ ಕುಪ್ಪಂ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದ ಚಂದ್ರಬಾಬು ನಾಯ್ಡು ಮತ್ತೆ ಮುನ್ನಡೆ ಸಾಧಿಸಿದ್ದಾರೆ. ಆದರೆ ಅವರ ಮಗ ಲೋಕೇಶ್ ಹಿನ್ನಡೆ ಅನುಭವಿಸುತ್ತಿದ್ದಾರೆ.
175 ಸದಸ್ಯ ಬಲದ ಆಂಧ್ರಪ್ರದೇಶದಲ್ಲಿ ಬಹುಮತಕ್ಕೆ 88 ಸ್ಥಾನಗಳಲ್ಲಿ ಜಯ ಗಳಿಸಬೇಕು. ವೈಎಸ್ ಆರ್ ಕಾಂಗ್ರೆಸ್ ಈ ಸಂಖ್ಯೆಯನ್ನು ಬಹಳ ಸುಲಭವಾಗಿ ದಾಟುವುದು ಖಾತ್ರಿಯಾಗಿದೆ. ಮೇ ಮೂವತ್ತನೇ ತಾರೀಕಿಗೆ ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಬಗ್ಗೆ ಮಾಹಿತಿ ಬರುತ್ತಿದೆ.