ಕೊರೊನಾದಿಂದ ಸಾವನ್ನಪ್ಪಿದ್ದಾರೆಂದು ಶವಸಂಸ್ಕಾರ ಮಾಡಿದ್ದ ಅಜ್ಜಿ ಮರಳಿ ಬಂದಾಗ!
ಅಮರಾವತಿ, ಜೂನ್ 3: ಕೊರೊನಾ ವೈರಸ್ನಿಂದ ಆಸ್ಪತ್ರೆಗೆ ದಾಖಲಾಗಿದ್ದ 75ರ ಹರೆಯದ ವೃದ್ಧೆಯೊಬ್ಬರು ಮನೆಗೆ ಮರಳಿದರೆ, ಮನೆಯವರಿಗೆ ಸಂತಸವಾಗುವ ಬದಲಿಗೆ ಒಂದು ಕ್ಷಣ ಆಘಾತವಾಗಿತ್ತು. ಅದಕ್ಕೆ ಕಾರಣ ಕೊರನಾ ವೈರಸ್ನಿಂದ ವೃದ್ಧೆ ಮೃತಪಟ್ಟಿದ್ದಾರೆ ಎಂದು ಅವರು ಮನೆಯವರು ಯಾರದ್ದೋ ಶವಕ್ಕೆ ಅಂತ್ಯ ಸಂಸ್ಕಾರವನ್ನು ಕೂಡ ಮಾಡಿದ್ದರು. ಆದರೆ ಬುಧವಾರ ವೃದ್ಧ ಮಹಿಳೆ ಕೊರೊನಾವೈರಸ್ನಿಂದ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಜಗ್ಗಯ್ಯಪೇಟ್ ನಗರದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ.
ಸ್ಥಳೀಯ ಮೂಲಗಳ ಪ್ರಕಾರ ಕ್ರಿಶ್ಚಿಯನ್ಪೇಟ್ನ ಗಿರಿಜಮ್ಮ ಎಂಬ ವೃದ್ಧೆ ಕೊರೊನಾ ವೈರಸ್ಗೆ ತುತ್ತಾಗಿದ್ದರು. ಮೇ 12ನೇ ತಾರೀಕಿನಿಂದ ಅವರನ್ನು ವಿಜಯವಾಡದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಅವರ ಪತಿ ಗಡ್ಡಯ್ಯ ಮನೆಗೆ ವಾಪಾಸಾಗಿದ್ದರು. ಅದಾದ ನಂತರ ಮೇ 15ನೇ ತಾರೀಕಿನಂದು ಅವರ ಆರೋಗ್ಯ ವಿಚಾರಿಸಲು ಪತಿ ಆಸ್ಪತ್ರೆಗೆ ಮರಳಿದ್ದಾರೆ. ಆದರೆ ಆ ಸಂದರ್ಭದಲ್ಲಿ ಗಿರಿಜಮ್ಮ ಆ ಬೆಡ್ನಲ್ಲಿ ಇರಲಿಲ್ಲ. ಇದರಿಂದ ಕಂಗಾಲಾದ ಗಡ್ಡಯ್ಯ ಅವರಿಗೆ ಅಲ್ಲಿದ್ದ ನರ್ಸ್ಗಳು ಬೇರೆ ವಾರ್ಡ್ಗೆ ಸ್ಥಳಾಂತರಿಸಿರಬಹುದು ಎಂದು ಉತ್ತರಿಸಿದ್ದರು. ಹೀಗಾಗಿ ಪತ್ನಿಗಾಗಿ ಹುಡುಕಾಟ ನಡೆಸಿದರು.
ಪತ್ನಿಯನ್ನು ಹೋಲುವ ಶವ
ಆದರೆ ಗಡ್ಡಯ್ಯ ಇಡೀ ಆಸ್ಪತ್ರೆಯಲ್ಲಿ ಹುಡುಕಿದರೂ ಪತ್ನಿಯನ್ನು ಪತ್ತೆಹಚ್ಚುವಲ್ಲಿ ವಿಫಲರಾಗಿದ್ದರು. ಆದರೆ ಕೊನೆಗೆ ಆಸ್ಪತ್ರೆಯ ಸಿಬ್ಬಂದಿಗಳು ಶವಾಗಾರದಲ್ಲಿ ಹುಡುಕುವಂತೆ ತಿಳಿಸಿದ್ದಾರೆ. ಶವಾಗಾರದಲ್ಲಿ ಹುಡುಕಿದಾಗ ಪತ್ನಿಯನ್ನು ಹೋಲುವ ಶವವನ್ನು ಕಂಡಿರುವುದಾಗಿ ಅವರು ತಿಳಿಸಿದರು. ನಂತರ ಶವವನ್ನು ಆಸ್ಪತ್ರೆ ಹಸ್ತಾಂತರಿಸಿದ್ದು ಆಕೆಯ ಹೆಸರಿನಲ್ಲಿ ಮರಣ ಪ್ರಮಾಣಪತ್ರವನ್ನು ಕೂಡ ನೀಡಲಾಯಿತು.
ಭಾರತದಲ್ಲಿ 22 ಕೋಟಿ ಮಂದಿಗೆ ಕೊರೊನಾವೈರಸ್ ಲಸಿಕೆ!
ಮಗನೂ ಕೊರೊನಾಗೆ ಬಲಿ, ಜೊತೆಯಾಗಿ ಶವಸಂಸ್ಕಾರ
ಪತ್ನಿಯನ್ನು ಕಳೆದುಕೊಂಡಿದ್ದ ಆಘಾತದಲ್ಲಿದ್ದ ಈ ಕುಟುಂಬಕ್ಕೆ ಮತ್ತೊಂದು ಆಘಾತ ಉಂಟಾಗಿತ್ತು. ಗಡ್ಡಯ್ಯ ದಂಪತಿಯ ಪುತ್ರ ರಮೇಶ್ ಕೂಡ ಕೊರೊನಾ ವೈರಸ್ನಿಂದ ಮೇ 23ರಂದು ಮೃತಪಟ್ಟಿದ್ದರು. ಪತ್ನಿ ಹಾಗೂ ಪುತ್ರನ ಶವವನ್ನು ಗಡ್ಡಯ್ಯ ಅಂತಿಮ ವಿಧಿವಿಧಾನಗಳನ್ನು ಪೂರೈಸಿ ಶವಸಂಸ್ಕಾರ ನಡೆಸಿದ್ದಾರೆ.
ಚೇತರಿಸಿಕೊಂಡ ಗಿರಿಜಮ್ಮ
ಈ ಮಧ್ಯೆ ಇನ್ನೂ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಯನ್ನು ಪಡೆಯುತ್ತಿದ್ದ ಗಿರಿಜಮ್ಮ ಕೊರೊನಾದಿಂದ ಚೇತರಿಸಿಕಂಡಿದ್ದಾರೆ. ವರದಿಗಳ ಪ್ರಕಾರ ಆಕೆ ಯಾರೂ ತನ್ನನ್ನು ವಾಪಾಸ್ ಕರೆದುಕೊಂಡು ಹೋಗದಿರಲು ಆಗಮಿಸದಿರುವ ಬಗ್ಗೆ ಆಚ್ಚರಿಗೊಂಡಿದ್ದರು ಎನ್ನಲಾಗಿದೆ. ಹಾಗಾಗಿ ಆಕೆಯೇ ಸ್ವತಃ ಬುಧವಾರ ಮನೆಗೆ ಮರಳಿದ್ದಾರೆ. ಈ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ ಎಂದುಕೊಂಡಿದ್ದ ಗಿರಿಜಮ್ಮ ಬದುಕಿ ಬಂದಿರುವುದು ನೋಡಿ ಗಡ್ಡಪ್ಪ ಹಾಗೂ ಅವರ ಕುಟುಂಬದವರು ಆಶ್ಚರ್ಯಗೊಂಡಿದ್ದಾರೆ. ಪತ್ನಿ ಜೀವಂತ ಮರಳಿದ ಸಂತಸವಿದ್ದರೂ ಈಗ ವೃದ್ಧ ದಂಪತಿ ಪುತ್ರ ರಮೇಶ್ನನ್ನು ಕಳೆದುಕೊಂಡಿರುವುದಕ್ಕೆ ದುಃಖಿಸುತ್ತಿದ್ದಾರೆ.
ಕೊರೊನಾವೈರಸ್ ಸ್ಥಿರ: ಭಾರತದಲ್ಲಿ ಒಂದೇ ದಿನ 1,34,154 ಮಂದಿಗೆ ಸೋಂಕು
ಆಂಧ್ರಪದೇಶದಲ್ಲಿ ಕಡಿಮೆಯಾಗುತ್ತಿದೆ ಕೊರೊನಾ
ಈ ಮಧ್ಯೆ ಆಂಧ್ರಪ್ರದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕಳೆದ 24 ಗಂಟೆಗಳ ಅಂತರದಲ್ಲಿ 12,768 ಪ್ರಕರಣಗಳು ದಾಖಲಾಗಿದೆ. 15,612 ರೋಗಿಗಳು ಕೊರೊನಾ ವೈರಸ್ನಂದ ಚೇತರಿಸಿಕೊಂಡಿದ್ದಾರೆ. 24 ಗಂಟೆಗಳ ಅಂತರದಲ್ಲಿ 98 ಜನರು ಕೊರೊನಾ ವೈರಸ್ಗೆ ಮೃತಪಟ್ಟಿದ್ದಾರೆ ಎಂದು ಸರ್ಕಾರ ಅಧಿಕೃತ ಮಾಹಿತಿಯನ್ನು ನೀಡಿದೆ.