ವಿಶಾಖಪಟ್ಟಣಂ ವಿಷಾನಿಲ: ಮನೆಗಳನ್ನು ತೊರೆಯುತ್ತಿರುವ ಜನ
ವಿಶಾಖಪಟ್ಟಣಂ, ಮೇ 8: 11 ಜನರನ್ನು ಬಲಿ ಪಡೆದಿರುವ ವಿಶಾಖಪಟ್ಟಣಂನ ವಿಷಾನಿಲ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಸ್ಥಳೀಯ ಜನರು ನಿಜಕ್ಕೂ ಕಂಗೆಟ್ಟಿದ್ದಾರೆ.
ವಿಷಾನಿಲ ಸೋರಿಕೆಯಾದ ಆರ್ಆರ್ ವೆಂಕಟಾಪುರದ ಎಲ್ಜಿ ಪಾಲಿಮರ್ ಸುತ್ತಮುತ್ತಲಿನ ಪ್ರದೇಶಗಳ ಜನರು ತಮ್ಮ ಮನೆ ಮಠಗಳನ್ನು ತೊರೆಯುತ್ತಿದ್ದಾರೆ.
ವಿಶಾಖಪಟ್ಟಣಂ ಫ್ಯಾಕ್ಟರಿಯಲ್ಲಿ ಸೋರಿಕೆಯಾಗಿದ್ದು ಡೆಡ್ಲಿ ಸ್ಟಿರಿನ್ ಗ್ಯಾಸ್!
ಎಲ್ಜಿ ಪಾಲಿಮರ್ನಲ್ಲಿ ಮತ್ತೊಂದು ಘಟಕದಿಂದ ಸ್ಟಿರಿನ್ ಎಂಬ ವಿಷಾನಿಲ ಸೋರಿಕೆಯಾಗಿದೆ ಎಂಬ ವದಂತಿ ನಂಬಿರುವ ಜನ ದೂರ ದೂರದ ಸ್ಥಳಗಳಿಗೆ ತೆರಳುತ್ತಿದ್ದಾರೆ. ನಿನ್ನೆ ಸೋರಿಕೆಯಾದ ವಿಷಾನಿಲವನ್ನು ಎನ್ಡಿಆರ್ಎಫ್ ತಟಸ್ಥಗೊಳಿಸುವಲ್ಲಿ ಸಫಲವಾಗಿದ್ದು, ಮತ್ತೆ ಯಾವುದೇ ಸಾವು ಸಂಭವಿಸಿಲ್ಲ.
ದೂರದ ಸ್ಥಳಗಳಿಗೆ ಹೋಗುತ್ತಿದ್ದಾರೆ
ವಿಶಾಖಪಟ್ಟಣಂನ ಆರ್ಆರ್ ವೆಂಕಟಾಪುರಂ ಹಾಗೂ ಸುತ್ತಮುತ್ತಲಿನ ಸ್ಥಳಗಳಾದ ಮರಿಪಾಲಂ, ಮಾಧವದಾರಾ, ಎನ್ಎಡಿ ಕೋತಾ ರಸ್ತೆ, ಮುರುಳಿ ನಗರದ ನಿವಾಸಿಗಳು ವಿಷಾನಿಲದಿಂದ ಬೆಚ್ಚಿ ಬಿದ್ದಿದ್ದು, ಅವರು ಮನೆಗಳನ್ನು ತೊರೆಯುತ್ತಿದ್ದಾರೆ. ಕಾರ್, ಬೈಕ್ಗಳಲ್ಲಿ ದೂರದ ಸ್ಥಳಗಳಿಗೆ ಹೋಗುತ್ತಿದ್ದಾರೆ.
ಮತ್ತೆ ಅನಿಲ ಸೋರಿಕೆಯಾಗಿಲ್ಲ
ಜನರು ಮನೆಗಳನ್ನು ತೊರೆಯಲು ಕಾರಣವಾಗಿರುವುದು ವದಂತಿ ಎಂದು ವಿಶಾಖಪಟ್ಟಣಂ ಪೊಲೀಸರು ತಿಳಿಸಿದ್ದಾರೆ. ಎಲ್ಜಿ ಪಾಲಿಮರ್ನ ಮತ್ತೊಂದು ಘಟಕದಲ್ಲಿ ಸ್ಟಿರಿನ್ ವಿಷಾನಿಲ ಸೋರಿಕೆಯಾಗಿದೆ ಎಂಬ ವದಂತಿ ಎದ್ದಿದ್ದರಿಂದ ಸುಮಾರು 8 ಕಿಲೋ ಮೀಟರ್ ವರೆಗಿನ ಜನ ಮನೆ ತೊರೆಯುತ್ತಿದ್ದಾರೆ. ಪೊಲೀಸರು ಈ ಬಗ್ಗೆ ಅರಿವು ಮೂಡಿಸುತ್ತಿದ್ದು, ವಿಷಾನಿಲದ ವ್ಯಾಪ್ತಿ 1 ಕಿಲೋ ಮೀಟರ್ ಸುತ್ತಮುತ್ತ ಇತ್ತು. ಈಗ ಅದನ್ನು ತಟಸ್ಥಗೊಳಿಸಲಾಗಿದೆ. ಜನ ವದಂತಿ ನಂಬಬಾರದು ಎಂದು ಹೇಳಿದ್ದಾರೆ.
ನ್ಯಾಯಾಂಗ ತನಿಖೆಗೆ ಆಗ್ರಹ
ಇಡೀ ದೇಶವನ್ನು ಬೆಚ್ಚಿ ಬೀಳಿಸಿರುವ ವಿಶಾಖಪಟ್ಟಣಂನ ಅನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರ್ಕಾರ ವಿಶಾಖಪಟ್ಟಣಂ ಪೊಲೀಸರಿಂದ ತನಿಖೆ ನಡೆಸುತ್ತಿದೆ. ಆದರೆ, ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಂಧ್ರಪ್ರದೇಶ ಬಿಜೆಪಿ ಅಧ್ಯಕ್ಷ ಕನ್ನಾ ಲಕ್ಷ್ಮೀನಾರಾಯಣ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಪ್ಲಾಂಟ್ ಮುಚ್ಚುವಂತೆ ಆಗ್ರಹ
ವಿಷಾನಿಲ ಹೊರ ಬಿಟ್ಟ ಎಲ್ಜಿ ಪಾಲಿಮರ್ ಕಂಪೆನಿಯನ್ನು ಶಾಶ್ವತವಾಗಿ ಮುಚ್ಚುವಂತೆ ಆಂಧ್ರಪ್ರದೇಶದಲ್ಲಿ ಒತ್ತಾಯಯಿಸಲಾಗಿದೆ. ವಿಶಾಖಪಟ್ಟಣಂದ ಸ್ಥಳೀಯರು ಪ್ರತಿಭಟನೆಗೂ ಸಹ ಮುಂದಾಗಿದ್ದರು. ಕೋವಿಡ್ ಹಿನ್ನಲೆಯಲ್ಲಿ ಅವರನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡು ಬಿಟ್ಟು ಕಳಿಸಲಾಗಿದೆ ಎಂದು ವಿಶಾಖಪಟ್ಟಣಂ ಪೊಲೀಸರು ತಿಳಿಸಿದ್ದಾರೆ.