ವಿಶಾಖಪಟ್ಟಣಂ ಅನಿಲ ದುರಂತದ ಸಂತ್ರಸ್ತರಿಗಾಗಿ ಸಹಾಯವಾಣಿ
ವೈಜಾಗ್, ಮೇ 7: ಕೊರೊನಾವೈರಸ್ ಸೋಂಕಿನ ಭೀತಿಯಲ್ಲಿರುವಾಗಲೇ ವಿಶಾಖಪಟ್ಟಣಂ ಹೊರವಲಯದ ಆರ್ ಆರ್ ವೆಂಕಟಾಪುರಂ ಬಳಿಯ ಎಲ್ ಜಿ ಪಾಲಿಮರ್ಸ್ ಕಂಪನಿಯಿಂದ ಮೇ 7ರ ಮುಂಜಾನೆ ಸೋರಿಕೆಯಾದ ವಿಷಾನಿಲ ಹತ್ತಾರು ಮಂದಿ ಬಲಿ ಪಡೆದುಕೊಂಡಿರುವ ದುರ್ಘಟನೆ ನಡೆದಿದೆ.
ದಕ್ಷಿಣ ಕೊರಿಯಾದ ಈ ಎಂಎನ್ಸಿ ಕಂಪೆನಿಯ ಕಾರ್ಖಾನೆಯಲ್ಲಿ ಮಹಾ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಇದುವರೆಗೆ 11 ಜನ ಮೃತಪಟ್ಟಿದ್ದು, 800 ಕ್ಕೂ ಹೆಚ್ಚು ಜನ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. 5000 ಜನಕ್ಕೆ ನೇರವಾಗಿ ವಿಷಾನಿಲ ತಟ್ಟಿದೆ. 20ಕ್ಕೂ ಅಧಿಕ ಹಳ್ಳಿಗಳಿಗೆ ವಿಷ ಗಾಳಿ ಹಬ್ಬಿದೆ. ಸುತ್ತಮುತ್ತಲ ಪ್ರದೇಶದ ಕೆರೆ, ತೆರೆದ ನೀರಿನ ಸಂಗ್ರಹ ಬಳಸದಂತೆ ಎಚ್ಚರಿಕೆ ನೀಡಲಾಗಿದೆ.
ವಿಶಾಖಪಟ್ಟಣಂ ಫ್ಯಾಕ್ಟರಿಯಲ್ಲಿ ಸೋರಿಕೆಯಾಗಿದ್ದು ಡೆಡ್ಲಿ ಸ್ಟಿರಿನ್ ಗ್ಯಾಸ್!
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಹೆಲ್ಪ್ ಡೆಸ್ಕ್ ಸ್ಥಾಪನೆಗೆ ಸೂಚಿಸಿದರು, ಅದರಂತೆ ಕೈಗಾರಿಕಾ ಕೇಂದ್ರ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ ಎಂದು ಸಚಿವ ಮೆಕಪಟಿ ಗೌತಮ್ ರೆಡ್ಡಿ ಹೇಳಿದ್ದಾರೆ.
ಸಹಾಯವಾಣಿ
ಸಂಖ್ಯೆ
*
ಎಸ್
ಪ್ರಸಾದ್
ರಾವ್
ಡಿಡಿ-7997952301,
8919239341
*
ಆರ್
ಬ್ರಹ್ಮ
ಐಪಿಒ-
9701197069
ವಿಷಾನಿಲದ ಹೆಸರು Styrene. ಈ ಅನಿಲದ ವೈಜ್ಞಾನಿಕ ಹೆಸರು ethenylbenzene, vinylbenzene, and phenylethene (C6H5CH=CH2). ಪ್ಲಾಸ್ಟಿಕ್ ಮತ್ತು ರಬ್ಬರ್ ತಯಾರಿಸಲು ಸ್ಟಿರಿನ್ ಅನಿಲವನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ವಿದ್ಯುತ್ ವೈರಿಂಗ್ ವಸ್ತುಗಳು ತಯಾರಿಕೆ ಬಳಸುತ್ತಾರೆ. ಫೈಬರ್ಗ್ಲಾಸ್, ಪ್ಲಾಸ್ಟಿಕ್ ಕೊಳವೆಗಳು, ವಾಹನ ಭಾಗಗಳು, ಆಟಿಕೆಗಳು, ಪ್ಲಾಸ್ಟಿಕ್ ಕುಡಿಯುವ ನೀರಿನ ಕಪ್ಗಳ ತಯಾರಿಕೆಗೆ ಸ್ಟೈರಿನ್ ಬಳಸುತ್ತಾರೆ.
ಇದು ಗಾಳಿಯಲ್ಲಿ ವೇಗವಾಗಿ ಹರಡುತ್ತದೆ. ಜೀವಿಗಳಿಗೆ ಅತ್ಯಂತ ಮಾರಕವಾದ ಅನಿಲವಾಗಿದೆ. ಇದರ ಸಂಪರ್ಕಕ್ಕೆ ಬಂದ ಮನುಷ್ಯ, ಪ್ರಾಣಿ, ಪಕ್ಷಿಗಳು, ಹಲ್ಲಿ, ಹುತ್ತದಲ್ಲಿರುವ ಹಾವುಗಳು ಸಾಯುತ್ತವೆ. ಮನುಷ್ಯನ ಮೇಲೆ ಅತ್ಯಂತ ಕೆಟ್ಟ ಪರಿಣಾಮವನ್ನೇ ಬೀರುತ್ತದೆ. ಜಠರ, ಶಾಸಕೋಶದ ತೊಂದರೆ, ಉಸಿರಾಟದ ತೊಂದರೆ ಪರಿಣಾಮ ಬೀರುತ್ತೆ. ಕೇಂದ್ರ ನರಮಂಡಲದ ಮೇಲೆ ಅತ್ಯಂತ ವೇಗವಾಗಿ ಸ್ಟೈರೀನ್ ಅನಿಲ ಪರಿಣಾಮ ಬೀರುತ್ತದೆ. ಸದ್ಯ ಘಟನೆ ನಡೆದ ಸ್ಥಳದಿಂದ 1000 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಕಳಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಕಮಲ್ ಕಿಶೋರ್ ಹೇಳಿದ್ದಾರೆ.