ವಿಡಿಯೋ: ಪೆನ್ಸಿಲ್ ಕಳ್ಳತನ- ಪೊಲೀಸರ ಮೊರೆ ಹೋದ ವಿದ್ಯಾರ್ಥಿ
ಹೈದರಾಬಾದ್, ನವೆಂಬರ್ 26: ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ. ನಮಗೆ ದೊಡ್ಡದಾಗಿ ಕಾಣದ ವಿಷಯ ಅವರಿಗೆ ತುಂಬಾ ದೊಡ್ಡ ಸಮಸ್ಯೆಯಾಗಬಹುದು. ಅವರ ಮುಗ್ಧತೆ ಕೆಲವೊಂದು ಬಾರಿ ಹೀಗೂ ಮಾಡಿಬಿಡುತ್ತದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮಕ್ಕಳ ಸಮಸ್ಯೆ ಕೇಳಿ ಆಶ್ಚರ್ಯಗೊಂಡಿದ್ದಾರೆ. ಮಾತ್ರವಲ್ಲದೆ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅಷ್ಟಕ್ಕೂ ಶಾಲಾ ಮಕ್ಕಳು ಪೊಲೀಸ್ ಠಾಣೆಗೆ ಹೋಗುವಂತದ್ದೇನಾಗಿತ್ತು ಅಂತೀರಾ. ಇದಕ್ಕೆ ಉತ್ತರ ಕೇಳಿದ್ರೆ ನೀವೂ ಆಚ್ಚರಿಗೊಳ್ಳಬಹುದು. ಜೊತೆಗೆ ಮಂದಹಾಸ ಬೀರುವುದರಲ್ಲಿ ಅನುಮಾನವೇ ಇಲ್ಲ.
ಕರ್ನೂಲ್ ಜಿಲ್ಲೆಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಯೊಬ್ಬನ ಪೆನ್ಸಿಲ್ ಅನ್ನು ಸಹಪಾಠಿಯೊಬ್ಬನು ಕದ್ದೊಯ್ದಿದಕ್ಕೆ, ಪುಟ್ಟ ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಬಾಗಿಲು ತಟ್ಟಲು ನಿರ್ಧರಿಸಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ತಮ್ಮ ಸಹಪಾಠಿ ವಿರುದ್ಧ ದೂರು ದಾಖಲಿಸಲು ಮಕ್ಕಳ ಗುಂಪು ಅವರನ್ನು ಸಂಪರ್ಕಿಸಿದಾಗ ಬೆರಗಾಗಿದ್ದಾರೆ.
ಫೆಬ್ರವರಿಯಲ್ಲಿ ಚಿತ್ರೀಕರಿಸಲಾದ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಾಲಾ ವಿದ್ಯಾರ್ಥಿ ಹನುಮಂತ ತನ್ನ ಸಹಪಾಠಿಯನ್ನು ಕರ್ನೂಲ್ನ ಪೆದ್ದಕಬಾದೂರು ಪೊಲೀಸ್ ಠಾಣೆಗೆ ಕರೆದೊಯ್ದು ಕಳ್ಳತನದ ಆರೋಪ ಮಾಡಿದ್ದಾನೆ. ಪುಟ್ಟ ಬಾಲಕ ಪೆನ್ಸಿಲ್ ಸಮಸ್ಯೆಯನ್ನು ಪರಿಹರಿಸಲು ಪೊಲೀಸರನ್ನು ಕೇಳಿದ್ದಾನೆ.
ಒಬ್ಬ ಹುಡುಗ ತನ್ನ ಪೆನ್ಸಿಲ್ ತೆಗೆದುಕೊಂಡು ಅದನ್ನು ಹಿಂತಿರುಗಿಸಲಿಲ್ಲ ಎಂದು ಬಾಲಕ ದೂರುತ್ತಾನೆ. ಈ ಪರಿಸ್ಥಿತಿಯ ಬಗ್ಗೆ ಪೊಲೀಸರು ಮಗುವನ್ನು ಏನು ಮಾಡಬಹುದು ಎಂದು ಕೇಳುತ್ತಾರೆ. ಆಗ ಬಾಲು ಹನುಮಂತು ತನ್ನ ಸಹಪಾಠಿಯ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕೇಳುತ್ತಾನೆ. ಈ ಸಂದರ್ಭದಲ್ಲಿ, ಮಗುವಿನ ಕೆಲವು ಸ್ನೇಹಿತರು ಹಿನ್ನೆಲೆಯಲ್ಲಿ ನಿಂತು, ಸನ್ನಿವೇಶವನ್ನು ನೋಡಿ ನಗುತ್ತಾರೆ.
Even Primary School Children trust #APPolice:
— Andhra Pradesh Police (@APPOLICE100) November 25, 2021
There is a paradigm shift in the attitude,behaviour&sensitivity of AP Police in way of giving confidence& reassurance to the people of #AP
AP Police stays as No1 in #SMARTPolicing in the country in @IPF_ORG Survey 2021 only testifies pic.twitter.com/Zs7CQoqqOI
ಪೊಲೀಸ್ ಅಧಿಕಾರಿಯು ಹುಡುಗನ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸುತ್ತಿರುವುದು ಕಂಡುಬರುತ್ತದೆ. ಪ್ರಕರಣ ದಾಖಲಿಸಲು ಬಾಲಕ ಒತ್ತಾಯಿಸಿದಾಗ, ತಪ್ಪಿತಸ್ಥ ಹುಡುಗನನ್ನು ಜೈಲಿಗೆ ಕಳುಹಿಸಲಾಗುವುದು. ಆನಂತರ ಅವನ ಜೀವನವು ಕಷ್ಟಕರವಾಗುತ್ತದೆ ಎಂದು ಬಾಲಕನಿಗೆ ಪೊಲೀಸರು ಮನವರಿಕೆ ಮಾಡುತ್ತಾರೆ. ಹೀಗೆ ರಾಜಿಯಾಗಲು ಹೇಳಿ ಜಗಳವನ್ನು ಪೊಲೀಸ್ ಅಧಿಕಾರಿ ಶಾಂತಿಗೊಳಿಸುತ್ತಾರೆ. ವಿಡಿಯೊದ ಕೊನೆಯಲ್ಲಿ, ಇಬ್ಬರು ಮಕ್ಕಳು ರಾಜಿ ಮಾಡಿಕೊಂಡು ಕೈಕುಲುಕುವುದನ್ನು ಮತ್ತು ನಗುತ್ತಿರುವುದನ್ನು ಕಾಣಬಹುದು.
ಈ ವಿಡಿಯೊ ಆನ್ಲೈನ್ನಲ್ಲಿ ಭಾರೀ ವೈರಲ್ ಆಗಿದೆ. ಹುಡುಗರು ತುಂಬಾ ಸುಲಭವಾಗಿ ಪೊಲೀಸರೊಂದಿಗೆ ಸಂವಹನ ನಡೆಸುವುದನ್ನು ನೋಡಿ ಅನೇಕರು ಆಶ್ಚರ್ಯಚಕಿತರಾಗಿದ್ದಾರೆ. ಪುಟ್ಟ ಬಾಲಕನ ಜಾಗೃತಿಗಾಗಿ ಶ್ಲಾಘಿಸಿದ್ದಾರೆ. ಈ ಪುಟ್ಟ ಹುಡುಗ ಮುಂದೊಂದು ದಿನ ಪೋಲೀಸ್ ಅಧಿಕಾರಿಯಾಗುವ ಮಟ್ಟಕ್ಕೆ ಬೆಳೆಯುತ್ತಾನೆ ಎಂದು ಹಲವರು ಬರೆದಿದ್ದಾರೆ.
ಈ ವಿಡಿಯೋವನ್ನು ಆಂಧ್ರಪ್ರದೇಶ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ."ಸಮಾಜದ ಎಲ್ಲಾ ವರ್ಗಗಳನ್ನು ಸೌಹಾರ್ದಯುತವಾಗಿ ಕಾಳಜಿ ವಹಿಸುವ ಮತ್ತು ಸೇವೆ ಸಲ್ಲಿಸುವ ಪೊಲೀಸರ ಮೇಲೆ ಮಾತ್ರ ಈ ವಿಶ್ವಾಸ ಹುಟ್ಟಲು ಸಾಧ್ಯ. ಇಂಥಹ ಘಟನೆಗಳು ಜನರ ಮನೆ ಬಾಗಿಲಿಗೆ ಉತ್ತಮ ಸೇವೆಗಳನ್ನು ಒದಗಿಸಲು ಹೆಚ್ಚಿನ ಜವಾಬ್ದಾರಿ ಮತ್ತು ಪಾರದರ್ಶಕತೆಯೊಂದಿಗೆ ಕಾರ್ಯನಿರ್ವಹಿಸುವಲ್ಲಿ ಪೊಲೀಸರನ್ನು ಹೆಚ್ಚು ಜವಾಬ್ದಾರರನ್ನಾಗಿಸುತ್ತದೆ" ಎಂದು ಆಂಧ್ರ ಪೊಲೀಸರು ತಿಳಿಸಿದ್ದಾರೆ.
Recommended Video
ಹೀಗಾಗಿ ಇಂಡಿಯನ್ ಪೊಲೀಸ್ ಫೌಂಡೇಶನ್ ಸಮೀಕ್ಷೆ 2021 ರಲ್ಲಿ ಆಂಧ್ರಪ್ರದೇಶ ಪೊಲೀಸರು ಸ್ಮಾರ್ಟ್ ಪೋಲೀಸಿಂಗ್ನಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೆದ್ದಕಬಾದೂರು ಪೊಲೀಸ್ ಠಾಣೆಯು ಕಾರ್ಯಕ್ಷಮತೆ, ಮೂಲಸೌಕರ್ಯ, ನಾಗರಿಕರ ಪ್ರತಿಕ್ರಿಯೆ, ಅಪರಾಧ ತಡೆ ಮತ್ತು ಪೂರ್ವಭಾವಿ ಕ್ರಮಗಳು, ಪ್ರಕರಣಗಳ ವಿಲೇವಾರಿ, ಪತ್ತೆ ಕಾರ್ಯ, ಕಾನೂನು ಸುವ್ಯವಸ್ಥೆ, ಮೂಲಸೌಕರ್ಯ, ಶಿಸ್ತು ಮುಂತಾದ ನಿಯತಾಂಕಗಳನ್ನು ಆಧರಿಸಿ ಅತ್ಯುತ್ತಮ ಪೊಲೀಸ್ ಠಾಣೆ ಪ್ರಶಸ್ತಿಯನ್ನು ಗೆದ್ದಿದೆ.