ಚುನಾವಣೆಗೆ 2ವರ್ಷ ಮುನ್ನವೇ ಸ್ಪರ್ಧಿಸುವ ಕ್ಷೇತ್ರ ಪ್ರಕಟಿಸಿದ ಸಿಎಂ ಜಗನ್
ಅಮರಾವತಿ, ಆಗಸ್ಟ್ 6: ಆಂಧ್ರ ಪ್ರದೇಶ ಅಸೆಂಬ್ಲಿ ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಆದರೆ, ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಈಗಲೇ ಚುನಾವಣಾ ರಾಜಕೀಯ ರಂಗೇರುವಂತೆ ಮಾಡಿದ್ದಾರೆ.
ಎನ್ಡಿಎ ಮೈತ್ರಿಕೂಟದಿಂದ ದೂರವಾದ ನಂತರ ತೆಲುಗುದೇಶಂ ಮುಖ್ಯಸ್ಥ ಚಂದ್ರಬಾಬು ನಾಯ್ಡು ರಾಜಕೀಯವಾಗಿ ಬಹಳಷ್ಟು ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ. ಕೇಂದ್ರದಲ್ಲಿ ಪ್ರಾಭಲ್ಯ ಸ್ಥಾಪಿಸಲು ಅವರು ನಡೆಸುತ್ತಿರುವ ಹೋರಾಟಕ್ಕೆ ಸೂಕ್ತ ಬೆಂಬಲ ಇತರ ಪಕ್ಷಗಳಿಂದ ಸಿಗುತ್ತಿಲ್ಲ.
ವೈಎಸ್ಆರ್ ಕಾಂಗ್ರೆಸ್ ಪಕ್ಷದ ಗೌರವಾಧ್ಯಕ್ಷೆ ಸ್ಥಾನ ತೊರೆದ ಜಗನ್ ತಾಯಿ ವಿಜಯಲಕ್ಷ್ಮಿ
ಬಿಜೆಪಿ ವಿರುದ್ದ ದೇಶದ ಇತರ ಪಕ್ಷಗಳನ್ನು ಒಗ್ಗೂಡಿಸಬೇಕು ಎನ್ನುವ ಇವರ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪ್ರಯತ್ನಕ್ಕೆ ಇತರ ಪ್ರಾದೇಶಿಕ ಪಕ್ಷಗಳು ಮುಕ್ತ ಮನಸ್ಸಿನಿಂದ ಒಗ್ಗೂಡುತ್ತಿಲ್ಲ.
ಇತ್ತ, ಆಂಧ್ರ ಪ್ರದೇಶದಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಬಿಜೆಪಿ ಮೈತ್ರಿಕೂಟದಲ್ಲಿ ಇಲ್ಲದಿದ್ದರೂ, ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ, ಸಿಎಂ ಜಗನ್ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಈಗ, ಜಗನ್ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.
ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಕ್ಷ
"ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಕ್ಷವನ್ನು ರಾಜ್ಯದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಮುಂದಿನ ಅಸೆಂಬ್ಲಿ ಚುನಾವಣೆಯ ವೇಳೆ ನಾವು ಇಟ್ಟುಕೊಳ್ಳಬೇಕು. ಅದಕ್ಕೆ ಈಗಿಂದಲೇ ಪೂರ್ವ ತಯಾರಿಯನ್ನು ಮಾಡಿಕೊಳ್ಳಿ"ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಕಾರ್ಯಕರ್ತರಿಗೆ ಮತ್ತು ಪಕ್ಷದ ಮುಖಂಡರಿಗೆ ಕರೆ ನೀಡಿದ್ದಾರೆ.
ಕಡಪಾದಲ್ಲಿರುವ ಪುಲಿವೆಂದುಲದಷ್ಟೇ ಕುಪ್ಪಂ ಕ್ಷೇತ್ರವೂ ನನಗೆ ಮುಖ್ಯ
"ಇದಕ್ಕಾಗಿ ನಾವು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳೋಣ. ಮುಂಬರುವ ಚುನಾವಣಾ ಕದನವು ಚಂದ್ರಬಾಬು ನಾಯ್ಡು ಅವರು ಪ್ರತಿನಿಧಿಸುವ ಕ್ಷೇತ್ರ ಕುಪ್ಪಂನಿಂದಲೇ ಆರಂಭವಾಗುತ್ತದೆ. ನನ್ನ ಸ್ವಂತ ಕ್ಷೇತ್ರವಾದ ಕಡಪಾದಲ್ಲಿರುವ ಪುಲಿವೆಂದುಲದಷ್ಟೇ ಕುಪ್ಪಂ ಕ್ಷೇತ್ರವೂ ನನಗೆ ಮುಖ್ಯ. ಇಲ್ಲಿಂದಲೇ ಮುಂದಿನ ಚುನಾವಣೆಯನ್ನು ಎದುರಿಸಲಿದ್ದೇನೆ"ಎಂದು ಜಗನ್ಮೋಹನ್ ರೆಡ್ಡಿ ಹೇಳಿದ್ದಾರೆ.
ಕುಪ್ಪಂ ಕ್ಷೇತ್ರವನ್ನು ಚಂದ್ರಬಾಬು ನಾಯ್ಡು ಸತತವಾಗಿ ಪ್ರತಿನಿಧಿಸುತ್ತಿದ್ದಾರೆ
ಚಿತ್ತೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕುಪ್ಪಂ ಕ್ಷೇತ್ರವನ್ನು ಚಂದ್ರಬಾಬು ನಾಯ್ಡು ಸತತವಾಗಿ ಪ್ರತಿನಿಧಿಸುತ್ತಿದ್ದಾರೆ. ಕಳೆದ ಅಂದರೆ 2019ರ ಚುನಾವಣೆಯಲ್ಲಿ ನಾಯ್ಡು 100,146 ಮತಗಳನ್ನು ಪಡೆದಿದ್ದರು. ಆ ಮೂಲಕ ಶೇ.55.18ರಷ್ಟು ಮತವನ್ನು ಚಂದ್ರಬಾಬು ನಾಯ್ಡು ಪಡೆದಿದ್ದರೆ, ಅವರ ಪ್ರತಿಸ್ಪರ್ಧಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕೃಷ್ಣಚಂದ್ರ ಮೌಳಿ ಶೇ. 38.25 ಮತವನ್ನು ಪಡೆದಿದ್ದರು.
ನವೆಂಬರ್ ನಲ್ಲಿ ನಡೆದಿದ್ದ ಕುಪ್ಪಂ ಸ್ಥಳೀಯ ಸಂಸ್ಥೆ ಚುನಾವಣೆ
ಕಳೆದ ವರ್ಷದ ನವೆಂಬರ್ ನಲ್ಲಿ ನಡೆದಿದ್ದ ಕುಪ್ಪಂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತೆಲುಗುದೇಶಂ ಸೋಲನ್ನು ಅನುಭವಿಸಿತ್ತು. 35ವರ್ಷದ ನಂತರ ತೆಲುಗುದೇಶಂ ಇಲ್ಲಿ ನೆಲೆ ಕಳೆದುಕೊಂಡಿತ್ತು. ವೈಎಸ್ಆರ್ ಕಾಂಗ್ರೆಸ್ ಪಕ್ಷ ಇಲ್ಲಿ ಗೆಲ್ಲುವ ಮೂಲಕ ಚಂದ್ರಬಾಬು ನಾಯ್ಡು ಇಲ್ಲಿ ಸೋಲುವ ಮೂಲಕ ತೀವ್ರ ಮುಖಭಂಗವನ್ನು ಎದುರಿಸಿದ್ದರು. ಈಗ, ಅದನ್ನೇ ಅಸೆಂಬ್ಲಿ ಚುನಾವಣೆಯಲ್ಲಿ ಮಾಡಲು ಸಿಎಂ ಜಗನ್ ಹೊರಟಿದ್ದಾರೆ.