ಟಿಟಿಡಿ ಹೊಸ ಸಮಿತಿಗೆ ಕರ್ನಾಟಕದಿಂದ ಶಾಸಕ ವಿಶ್ವನಾಥ್ ಸೇರ್ಪಡೆ
ಅಮರಾವತಿ, ಸೆಪ್ಟೆಂಬರ್ 15: ದೇಶದ ಶ್ರೀಮಂತ ದೇವಾಲಯ ತಿರುಮಲ ತಿರುಪತಿ ತಿಮ್ಮಪ್ಪ ದೇವಸ್ಥಾನಂ (ಟಿಟಿಡಿ) ನೂತನ ಮುಖ್ಯಸ್ಥರಾಗಿ ವೈ ವಿ ಸುಬ್ಬಾ ರೆಡ್ಡಿ ಮುಂದುವರೆದಿರುವುದು ಎಲ್ಲರಿಗೂ ಗೊತ್ತಿರಬಹುದು. ವಿವಾದದ ನಡುವೆ ಜಗನ್ ಮೋಹನ್ ರೆಡ್ಡಿ ಮತ್ತೊಮ್ಮೆ ತಮ್ಮ ಸಂಬಂಧಿಕರಿಗೆ, ಆಪ್ತರಿಗೆ ಮಣೆ ಹಾಕಿದ್ದು, ಬುಧವಾರದಂದು ಜಗನ್ ಸರ್ಕಾರ 25 ಮಂದಿ ನೂತನ ಸದಸ್ಯರ ಪಟ್ಟಿ ಪ್ರಕಟಿಸಿದೆ. ಕರ್ನಾಟಕದಿಂದ ಬಿಜೆಪಿ ಶಾಸಕ ಎಸ್. ಆರ್ ವಿಶ್ವನಾಥ್ ರೆಡ್ಡಿ ಹಾಗೂ ಶಶಿಧರ್ ಎಂಬುವರು ಸೇರ್ಪಡೆಗೊಂಡಿದ್ದಾರೆ.
ಆಂಧ್ರಪ್ರದೇಶ ಸರ್ಕಾರಕ್ಕೆ ಕೊರೊನಾ ಸಂಕಷ್ಟದಲ್ಲೂ ಭರ್ಜರಿ ಆದಾಯ ತಂದುಕೊಡುತ್ತಿರುವ ತಿರುಪತಿ ತಿಮ್ಮಪ್ಪನ ದೇಗುಲ ಮತ್ತೆ ಸುದ್ದಿಯಲ್ಲಿದೆ. ದೇಶದ ಶ್ರೀಮಂತ ದೇವಾಲಯ ತಿರುಮಲ ತಿರುಪತಿ ತಿಮ್ಮಪ್ಪ ದೇವಸ್ಥಾನಂ (ಟಿಟಿಡಿ) ನೂತನ ಮುಖ್ಯಸ್ಥರಾಗಿ ವೈ ವಿ ಸುಬ್ಬಾ ರೆಡ್ಡಿರನ್ನು ಮತ್ತೊಮ್ಮೆ ಸಿಎಂ ಜಗನ್ಮೋಹನ್ ರೆಡ್ಡಿ ನೇಮಿಸಿದ್ದಾರೆ. ವಿವಾದದ ನಡುವೆ ಜಗನ್ ಮತ್ತೊಮ್ಮೆ ತಮ್ಮ ಸಂಬಂಧಿಕರೆ ಮಣೆ ಹಾಕಿದ್ದಾರೆ.
ಮಾಜಿ ಸಂಸದ ಸುಬ್ಬಾರೆಡ್ಡಿ ಅವರು ಎರಡು ವರ್ಷಗಳ ಅವಧಿ ಟಿಟಿಡಿ ಚೇರ್ಮನ್ ಆಗಿ ಕಾರ್ಯ ನಿರ್ವಹಿಸಿ ಜೂನ್ ತಿಂಗಳು ಸ್ಥಾನದಿಂದ ಕೆಳಗಿಳಿಯಲು ಮುಂದಾಗಿದ್ದರು. ಮುಂದಿನ ವರ್ಷ ರಾಜ್ಯಸಭೆಗೆ ಅಥವಾ ವಿಧಾನಪರಿಷತ್ ಮೂಲಕ ಆಯ್ಕೆ ಮಾಡಿ, ಸಂಪುಟಕ್ಕೆ ಸೇರಿಸಿಕೊಳ್ಳಲು ಜಗನ್ ಮುಂದಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಮತ್ತೊಂದು ಅವಧಿಗೆ ಟಿಟಿಡಿ ಚೇರ್ಮನ್ ಆಗಿ ನೇಮಿಸಿದ್ದಾರೆ.
ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ
ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಅವರನ್ನು ಬೋರ್ಡ್ಗೆ ನೇಮಿಸುವ ನಿರ್ಧಾರ ತೆಗೆದುಕೊಂಡಿದ್ದು ಗಮನ ಸೆಳೆದಿತ್ತು. ಹೊಸ ಮಂಡಳಿ ನೇಮಕಕ್ಕೂ ಮುನ್ನ ಸುಧಾಮೂರ್ತಿ ಅವರು ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಜಗನ್ ಅವರು ಸುಧಾಮೂರ್ತಿ ಮರು ನೇಮಕ ಮಾಡಿ ವಿವಾದಕ್ಕೆ ತೆರೆ ಎಳೆದಿದ್ದರು. ಈಗ ಇನ್ನೊಂದು ಅವಧಿಗೆ ಕರ್ನಾಟಕದಿಂದ ಸುಧಾಮೂರ್ತಿ ಆಯ್ಕೆ ಬಹುತೇಕ ಖಚಿತ ಎನ್ನಲಾಗಿತ್ತು. ಆದರೆ, ಈ ಬಾರಿ ಸುಧಾಮೂರ್ತಿ ಬದಲಿಗೆ ಶಾಸಕ ಎಸ್. ಆರ್ ವಿಶ್ವನಾಥ್ ಹಾಗೂ ಶಶಿಧರ ಎಂಬುವರಿಗೆ ಅವಕಾಶ ಸಿಕ್ಕಿದೆ. ಆದರೆ, ಸಮಿತಿ ಸಂಖ್ಯೆಯನ್ನು 75 ಮಂದಿಗೆ ಹಿಗ್ಗಿಸಲಾಗಿದೆ. ಹೀಗಾಗಿ ಸುಧಾಮೂರ್ತಿ ಮರು ಆಯ್ಕೆಯಾದರೂ ಅಚ್ಚರಿ ಪಡಬೇಕಾಗಿಲ್ಲ.
ಟಿಟಿಡಿ ಹೊಸ ಸಮಿತಿ ಪುನರ್ ರಚನೆ
1987ರ ಹಿಂದು ಧಾರ್ಮಿಕ ಸಂಸ್ಥೆ ಹಾಗೂ ಮುಜರಾಯಿ ಕಾಯ್ದೆ ಅನ್ವಯ ಟಿಟಿಡಿ ಚೇರ್ಮನ್ ಆಗಿ ಸುಬ್ಬಾರೆಡ್ಡಿರನ್ನು ನೇಮಿಸಲಾಗಿದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ ವಾಣಿ ಮೋಹನ್ ಅವರು ಆದೇಶ ಹೊರಡಿಸಿದ್ದಾರೆ. ಶೀಘ್ರದಲ್ಲೇ ಟಿಟಿಡಿ ಹೊಸ ಸಮಿತಿಯನ್ನು ಪುನರ್ ರಚನೆ ಮಾಡಲಾಗಿದೆ.
ತೆಲಂಗಾಣದಿಂದ ನಾಲ್ವರು, ತಮಿಳುನಾಡಿನಿಂದ ಮೂವರು, ಕರ್ನಾಟಕದಿಂದ ಇಬ್ಬರು, ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರದಿಂದ ತಲಾ ಒಬ್ಬರು ಸಮಿತಿಗೆ ಆಯ್ಕೆಯಾಗಿದ್ದಾರೆ. ಮಿಕ್ಕ ಸದಸ್ಯರೆಲ್ಲರೂ ಆಂಧ್ರಪ್ರದೇಶದವರಾಗಿದ್ದಾರೆ. ವೈಎಸ್ಸಾರ್ ಕಾಂಗ್ರೆಸ್ ಶಾಸಕರಾದ ಭೂಮನಾ ಕರುಣಾಕರ್ ರೆಡ್ಡಿ ಪದನಿಮಿತ್ತ ಸದಸ್ಯ ಹಾಗೂ ಚೆವಿರೆಡ್ಡಿ ಭಾಕರ್ ರೆಡ್ಡಿ ಎಕ್ಸ್ ಆಫಿಸಿಯೋ ಸದಸ್ಯರಾಗಿ ಮುಂದುವರೆಯಲಿದ್ದಾರೆ.
ಅಧಿಕೃತ ಪಟ್ಟಿ ಇನ್ನೂ ಪ್ರಕಟವಾಗಿಲ್ಲ
ಮೂಲಗಳ ಪ್ರಕಾರ ಉದ್ಯಮಿ ಮೈ ಹೋಂ ಗ್ರೂಪಿನ ಜೂಪಲ್ಲಿ ರಾಮೇಶ್ವರ ರಾವ್, ಹೆಟೆರೋ ಗ್ರೂಪಿನ ಪಾರ್ಥಸಾರಥಿ ರೆಡ್ಡಿ, ಮುರಂಸೆಟ್ಟಿ ರಾಮುಲು, ವೆಮಿರೆಡ್ಡಿ ಪ್ರಶಾಂತಿ ರೆಡ್ಡಿ, ರಾಜೇಶ್ ಶರ್ಮ ಹಾಗೂ ಇಂಡಿಯಾ ಸಿಮೆಂಟ್ಸ್ ಮುಖ್ಯಸ್ಥ ಎನ್ ಶ್ರೀನಿವಾಸನ್ ಮತ್ತೊಂದು ಅವಧಿಗೆ ಮುಂದುವರೆಯಲಿದ್ದಾರೆ. ಮಿಕ್ಕಂತೆ ಉದ್ಯಮಿ ಮಾರುತಿ, ಆಡಿಟರ್ ಸನತ್, ಎಂಎಸ್ಎಸ್ ಲ್ಯಾಬ್ಸ್ ಎಂಡಿ ಮನ್ನೆ ಜೀವನ್ ರೆಡ್ಡಿ, ಮಹಾರಾಷ್ಟ್ರದ ಸಿಎಂ ಠಾಕ್ರೆ ಅವರ ಶಿಫಾರಸಿನ ಮೇರೆಗೆ, ಶಿವಸೇನಾ ಕಾರ್ಯದರ್ಶಿಯಾಗಿರುವ ಮಿಲಿಂದ್ ಅವರನ್ನು ಟಿಟಿಡಿ ಮಂಡಳಿಯಲ್ಲಿ ಅಂತಿಮಗೊಳಿಸಲಾಗಿದೆ.
ತಮಿಳುನಾಡಿನ ಸಿಎಂ ಸ್ಟಾಲಿನ್ ಶಿಫಾರಸಿನ ಮೇರೆಗೆ ಶಾಸಕರಾದ ನಂದ ಕುಮಾರ್, ಕನ್ನಯ್ಯ, ಜೀವನ್ ರೆಡ್ಡಿ, ಸೌರಭ್ ಮತ್ತು ರಾಜೇಶ್ ಶರ್ಮಾ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಉಳಿದ 50 ಜನರನ್ನು ವಿಶೇಷ ಆಹ್ವಾನಿತರಾಗಿ ಸರ್ಕಾರ ವಿಸ್ತರಿಸುತ್ತದೆ. ಪುದುಚೇರಿಯ ಮಾಜಿ ಸಚಿವ ಮಲ್ಲಾಡಿ ಕೃಷ್ಣರಾವ್, ಪೊಕಲಾ ಅಶೋಕ್ ಕುಮಾರ್, ಗೊರ್ಲಾ ಬಾಬು ರಾವ್, ಬುರಾ ಮಧುಸೂದನ್, ಕತ್ಸನಿ ರಾಮಭೂಪಾಲ್ ರೆಡ್ಡಿ, ಕಲ್ವಕುರ್ತಿ ವಿದ್ಯಾಸಾಗರ್ ರಾವ್, ಲಕ್ಷ್ಮಿನಾರಾಯಣ, ಶಾಸಕ ನಂದ ಕುಮಾರ್, ಕನ್ನಯ್ಯ(ತಮಿಳುನಾಡು).
ಟಿಟಿಡಿ ಆದಾಯ ಏರಿಳಿತ ಆದಾಯ ಏರಿಳಿತ
ಕೋವಿಡ್ 19 ಸಾಂಕ್ರಾಮಿಕದಿಂದ ವಿವಿಧ ಕ್ಷೇತ್ರ, ವಿವಿಧ ಉದ್ದಿಮೆಗಳ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ. ದೇಶದ ಅತ್ಯಂತ ಶ್ರೀಮಂತ ದೇಗುಲ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ)ಗೆ ಪ್ರತಿದಿನದ ಭಕ್ತಾದಿಗಳ ಸಂಖ್ಯೆ, ದೈನಂದಿನ ಆದಾಯ ಖೋತಾ ಆಗಿತ್ತು. ಆದರೆ ಆಗಸ್ಟ್ ತಿಂಗಳಲ್ಲಿ ಆದಾಯ ಗಳಿಕೆ ಚೇತರಿಕೆ ಕಂಡಿದೆ. ಕೋವಿಡ್ 19ಕ್ಕೂ ಮುನ್ನ ಪ್ರತಿದಿನ ಸರಾಸರಿ 65 ಸಾವಿರಕ್ಕೂ ಅಧಿಕ ಮಂದಿಯನ್ನು ಕಾಣುತ್ತಿದ್ದ ತಿರುಮಲ ಬೆಟ್ಟ, ಈಗ 15 ಸಾವಿರಕ್ಕೆ ಕುಸಿದಿದೆ. ಕೋವಿಡ್ 19 ಮಾರ್ಗಸೂಚಿಯಂತೆ ಆನ್ ಲೈನ್ ನಲ್ಲಿ ಮುಂಗಡ ಬುಕ್ಕಿಂಗ್ ಮಾಡಿಕೊಂಡ 6 ಸಾವಿರ ಮಂದಿಗೆ ಮಾತ್ರ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈಗ 8 ಸಾವಿರ ಮಂದಿಗೆ ಅವಕಾಶ ನೀಡಲಾಗಿದೆ.