ಜೂನ್ 30ರವರೆಗೆ ತಿರುಪತಿಯಲ್ಲಿ ವಾರದಿನಗಳ ಕೆಲ ಸೇವೆ ಇಲ್ಲ- ಕಾರಣ ಇದು
ತಿರುಮಲ, ಮೇ 8: ತಿರುಮಲದ ಪ್ರಖ್ಯಾತ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ತಾತ್ಕಾಲಿಕವಾಗಿ ವಾರದ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಜೂನ್ 30ರವರೆಗೆ ವಾರದಿನಗಳ ಹಲವು ಸೇವೆಗಳು ಇರುವುದಿಲ್ಲ. ಮಂಗಳವಾರದಂದು ನಡೆಯುವ 'ಅಷ್ಟದಳ ಪಾದಪದ್ಮಾರಾದನ', ಗುರುವಾರ ನಡೆಯುವ 'ತಿರುಪ್ಪಾವಾದ', ಶುಕ್ರವಾರ ನಡೆಯುವ 'ನಿಜಪಾದ ದರ್ಶನಂ' ಮೊದಲಾದ ಸೇವೆಗಳನ್ನು ಜೂನ್ ಅಂತ್ಯದವರೆಗೂ ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ ಎಂದು ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ- Tirumala Tirupati Devasthanams) ಸಂಸ್ಥೆ ಪ್ರಕಟಿಸಿದೆ.
ಏನು ಕಾರಣ?: ಈ ಬಾರಿಯ ಬೇಸಿಗೆಯಲ್ಲಿ ರಜೆಕಾಲ ಇರುವುದರಿಂದ ತಿರುಪತಿ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚೇ ಇರುತ್ತದೆ. ಹೀಗಾಗಿ, ಇವರೆಲ್ಲರಿಗೂ ಸರಿಯಾದ ದರ್ಶನ ಸಿಗುವಂತಾಗಲು ಕೆಲ ಸೇವೆಗಳನ್ನ ನಿಲ್ಲಿಸಲು ನಿರ್ಧರಿಸಲಾಗಿದೆ ಎಂದು ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ ಕಾರಣ ಕೊಡಲಾಗಿದೆ.
ತಿರುಪತಿ ಭಕ್ತರಿಗೆ ಸಿಹಿಸುದ್ದಿ, ಪಾದಯಾತ್ರೆಗೆ ಶ್ರೀವಾರಿ ಮೆಟ್ಟಿಲು ಸಿದ್ಧ
ಮುಖ್ಯ ಮೂರ್ತಿಗೆ ಸೇವೆ ನಿಲ್ಲುವುದಿಲ್ಲ:
"ಎಲ್ಲಾ ರೀತಿಯ ಸೇವೆಗಳನ್ನ ನಿಲ್ಲಿಸಲಾಗುವುದಿಲ್ಲ. ಕೆಲ ನಿತ್ಯಸೇವೆಗಳು ಮುಂದುವರಿಯಲಿವೆ. ಮುಖ್ಯ ಮೂರ್ತಿಗೆ ಕಡ್ಡಾಯವಾಗಿ ಮಾಡಬೇಕಿರುವ ನಿತ್ಯ ಕತಲ (Nityakatla) ಕೈಂಕರ್ಯ, ಸಲಿಂಪು, ಶುಧ್ಧಿ, ಅಭಿಷೇಕ ಇತ್ಯಾದಿ ಸೇವೆಗಳು ತಪ್ಪದೇ ನಡೆಯುತ್ತವೆ" ಎಂದು ಟಿಟಿಡಿ ಅಧಿಕಾರಿ ಎ.ವಿ. ಧರ್ಮರೆಡ್ಡಿ ತಿಳಿಸಿದ್ದಾರೆ.
ವಾರದ ದಿನಗಳಲ್ಲಿ ನಡೆಯುವ, ಅಂದರೆ ಪ್ರತೀ ವಾರದ ದಿನಕ್ಕೆ ಸೀಮಿತವಾಗಿರುವ ಕೆಲ ಪೂಜೆಗಳನ್ನ ಮಾತ್ರ ತಾತ್ಕಾಲಿಕವಾಗಿ ನಿಲ್ಲಿಸಲಾಗುತ್ತದೆ. ಇದರಿಂದ ಗುರುವಾರ ಮತ್ತು ಶುಕ್ರವಾರಗಳಂದು 5 ಸಾವಿರದಷ್ಟು ಸಂಖ್ಯೆಯ ಹೆಚ್ಚಿನ ಭಕ್ತರಿಗೆ ತಿಮ್ಮಪ್ಪನ ದರ್ಶನ ಸುಲಭವಾಗುತ್ತದೆ. ಗುರುವಾರಗಳಂದು 9 ಸಾವಿರದಷ್ಟು ಹೆಚ್ಚು ಭಕ್ತರಿಗೆ ಅನುಕೂಲವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಂದರೆ ಹೆಚ್ಚೆಚ್ಚು ಮಂದಿ ಭಕ್ತರು ಸ್ವಲ್ಪ ಬೇಗ ತಿಮ್ಮಪ್ಪನ ದರ್ಶನ ಮಾಡಿ ಪುನೀತರಾಗಬಹುದು. ವೈಕುಂಠ ವಿಭಾಗದಲ್ಲೋ ಅಥವಾ ಮಂದಿರದ ಒಳಾಂಗಣದಲ್ಲೋ ಹಲವು ಗಂಟೆಗಳ ಕಾಲ ಕಾಯುವುದು ತಪ್ಪುತ್ತದೆ ಎಂಬ ಉದ್ದೇಶದಿಂದ ವಾರದಿನಗಳ ಕೆಲ ಸೇವೆಗಳಿಗೆ ವಿರಾಮ ಕೊಡಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕ್ಯಾನ್ಸರ್ ಆಸ್ಪತ್ರೆ ಕಟ್ಟಿಸಿದ್ದು ನಾವು: ಟಿಡಿಪಿ, ವೈಎಸ್ಆರ್ ಕಿತ್ತಾಟ- ವಾಸ್ತವ ಬೇರೆಯಾ?
ಎರಡು ವರ್ಷಗಳ ಹಿಂದೆ ಕೋವಿಡ್ ಸಾಂಕ್ರಾಮಿಕ ಕಾಯಿಲೆ ಕಾಣಿಸಿಕೊಂಡ ಬಳಿಕ ದೇಶದೆಲ್ಲೆಡೆಯ ದೇವಸ್ಥಾನಗಳಂತೆ ತಿರುಪತಿ ಮಂದಿರ ಕೂಡ ಬಂದ್ ಆಗಿತ್ತು. ಸರಣಿ ಸರಣಿ ಲಾಕ್ ಡೌನ್ಗಳ ನಂತರ ಹಲವು ನಿರ್ಬಂಧ ಮತ್ತು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತಿರುಪತಿ ದೇವಸ್ಥಾನ ಭಕ್ತರಿಗೆ ದರ್ಶನ ನೀಡುತ್ತಿದೆ. ಈ ಬೇಸಿಗೆಯಲ್ಲಿ ಬಹಳಷ್ಟು ಭಕ್ತರು ದೇವಸ್ಥಾನಕ್ಕೆ ಲಗ್ಗೆ ಹಾಕುತ್ತಿದ್ದಾರೆ. ಕೋವಿಡ್ ಸೋಂಕು ಹರಡುವ ಅಪಾಯದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಸಾಧ್ಯವಾದಷ್ಟೂ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿರುವುದು ತಿಳಿದುಬಂದಿದೆ.
(ಒನ್ಇಂಡಿಯಾ ಸುದ್ದಿ)