ಆಸ್ಪತ್ರೆ ನಿರ್ಮಾಣ: ಒಂದೇ ದಿನದಲ್ಲಿ ಟಿಟಿಡಿಗೆ 84 ಕೋಟಿ ದೇಣಿಗೆ
ತಿರುಪತಿ, ಫೆಬ್ರವರಿ 18: ಒಂದೇ ದಿನದಲ್ಲಿ ಟಿಟಿಡಿಗೆ ಬರೋಬ್ಬರಿ 84 ಕೋಟಿ ರೂ ದೇಣಿಗೆ ಹರಿದುಬಂದಿದೆ. ಮಕ್ಕಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ತಿರುಪತಿ ತಿರುಮಲ ದೇವಸ್ಥಾನದಿಂದ (ಟಿಟಿಡಿ) ದೇಣಿಗೆ ಸಂಗ್ರಹಿಸಲಾಗುತ್ತಿದ್ದು, ಮೊದಲ ದಿನವೇ ಭಕ್ತರಿಂದ 84 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹವಾಗಿದೆ.
ಇದಕ್ಕಾಗಿ ದೇವಸ್ಥಾನದ ಮಂಡಳಿಯು ಪ್ರತಿ ದಾನಿಗಳಿಗೆ ಒಂದು ಉದಯಾಸ್ತಮಾನ ಸೇವಾ ಟಿಕೆಟ್ ಅನ್ನು ಉಚಿತವಾಗಿ ನೀಡಿದೆ. ಬಂದ ದೇಣಿಗೆ ಹಣದಲ್ಲಿ ಮಕ್ಕಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ತಿರುಪತಿ ತಿಮ್ಮಪ್ಪನದು ಈ ವರ್ಷ 3,096 ಕೋಟಿ ರೂ ಬಜೆಟ್
ಟಿಟಿಡಿ ಉದಯಾಸ್ತಮಾನ ಎಂಬ ಹೆಸರಿನಲ್ಲಿ ಭಕ್ತರಿಂದ ದೇಣಿಗೆ ಸಂಗ್ರಹ ಮಾಡುತ್ತಿದ್ದು, ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್ಗೆ ಒಂದೇ ದಿನದಲ್ಲಿ 70 ದಾನಿಗಳು 84 ಕೋಟಿ ರೂಪಾಯಿಗೂ ಅಧಿಕ ದೇಣಿಗೆ ನೀಡಿದ್ದಾರೆ ಎಂದು ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅತಿದೊಡ್ಡ ದೇಣಿಗೆಯಾಗಿ, ಫೆಬ್ರವರಿ 17 ರಂದು ಚೆನ್ನೈನ ಕುಟುಂಬವೊಂದು 3.20 ಕೋಟಿ ರೂ. ನಗದು ಮತ್ತು 6 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ದಾನ ಮಾಡಿದೆ.
ಮೃತ ಸಹೋದರಿ ಪರ್ವತಮ್ಮ ಅವರ ಹೆಸರಿನಲ್ಲಿರುವ ಎರಡು ವಸತಿ ಗೃಹಗಳ ಹಕ್ಕು ಪತ್ರವನ್ನು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ಅವರಿಗೆ ಹಸ್ತಾಂತರಿಸಿದ ರೇವತಿ ವಿಶ್ವನಾಥನ್ ಅವರು ತಿರುಪತಿಯಲ್ಲಿ ಪೀಡಿಯಾಟ್ರಿಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 3.20 ಕೋಟಿ ರೂ.ಗಳನ್ನು ವಿನಿಯೋಗಿಸುವಂತೆ ಒತ್ತಾಯಿಸಿದರು.
ಆಕೆಯ ಸಹೋದರಿ ತನ್ನ ಜೀವನದುದ್ದಕ್ಕೂ ಅವಿವಾಹಿತೆ ಆಗಿ ಉಳಿದಿದ್ದಾರೆ ಮತ್ತು ಅವರ ಸಾವಿನ ನಂತರ ತನ್ನ ಆಸ್ತಿ ಮತ್ತು ಬ್ಯಾಂಕ್ನಲ್ಲಿರುವ ಹಣವನ್ನು ಅವರು ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ದಾನ ಮಾಡಬೇಕೆಂದು ಬಯಸಿದ್ದರು.
ವೆಂಕಟೇಶ್ವರ ದೇವರ ಕಟ್ಟಾ ಭಕ್ತೆಯಾಗಿರುವ ಆಕೆಯ ಸಹೋದರಿ ಈ ಹಿಂದೆಯೂ ಟಿಟಿಡಿ ನಡೆಸುತ್ತಿರುವ ವಿವಿಧ ಟ್ರಸ್ಟ್ಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಮತ್ತು ಪ್ರಸ್ತುತ (ದೇಣಿಗೆ) ವಿಧಿವಿಧಾನಗಳನ್ನು ಅವರ ಇಚ್ಛಾ ಪತ್ರಕ್ಕೆ ಅನುಗುಣವಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು. ಪಿ.ವಿ.ವಿಶ್ವನಾಥನ್ ಮತ್ತು ವಿ.ಕೃಷ್ಣನ್ (ವಿಲ್ ಎಕ್ಸಿಕ್ಯೂಟರ್) ಸಹ ಉಪಸ್ಥಿತರಿದ್ದರು.
ತಿರುಮಲ ತಿರುಪತಿ ಆಡಳಿತ ಮಂಡಳಿಯು 2022-2023ನೇ ಸಾಲಿನಲ್ಲಿ 3096 ಕೋಟಿ ರೂ. ಬಜೆಟ್ ಮಂಡನೆಗೆ ಗುರುವಾರ ಅನುಮೋದನೆ ನೀಡಿದೆ.
ಮಂಡಳಿಯ ಸಭೆ ಬಳಿಕ ಮಾತನಾಡಿದ ವೈ.ವಿ.ಸುಬ್ಬಾ ರೆಡ್ಡಿ ಅವರು, 'ಪ್ರಸಕ್ತ ಹಣಕಾಸು ವರ್ಷದಲ್ಲಿ ಭಕ್ತರಿಂದ ಸಂದಾಯವಾಗುವ ನಗದು ದೇಣಿಗೆ ಅಂದಾಜು 1000 ಕೋಟಿ ರು., ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವ ಹಣದ ಬಡ್ಡಿಯಿಂದ ಅಂದಾಜು 668.5 ಕೋಟಿ ರು. ಹಾಗೂ ಲಡ್ಡು ಪ್ರಸಾದ ಮಾರಾಟದಿಂದ ಅಂದಾಜು 365ಕೋಟಿ ರು. ಆದಾಯದ ನಿರೀಕ್ಷೆ ಇದೆ.
ಉಳಿದಂತೆ ಪ್ರವೇಶ ಶುಲ್ಕ, ವಿಶೇಷ ಪ್ರವೇಶ ಶುಲ್ಕ, ಆನ್ಲೈನ್ ಟಿಕೆಟ್ಗಳಿಂದಾಗಿ ಅಂದಾಜು 300 ಕೋಟಿ ಸಂಗ್ರಹವಾಗಬಹುದು. ಭಕ್ತರಿಗೆ ನೀಡಲಾಗುವ ಟಿಟಿಡಿ ವಸತಿ ಮತ್ತು ಮದುವೆ ಮಂಟಪಗಳಿಂದ ಬರುವ ಆದಾಯ ಸುಮಾರು 95 ಕೋಟಿ ಎಂದು ಅಂದಾಜಿಸಲಾಗಿದೆ. ಮತ್ತು ಭಕ್ತರು ತಮ್ಮ ವ್ರತದ ನೆರವೇರಿಕೆಗಾಗಿ ಅರ್ಪಿಸುವ ಕೂದಲಿನ ಮೇಲಿನ ಹರಾಜು ಆದಾಯ 126 ಕೋಟಿ ರೂ. ಎಂದು ಅಂದಾಜಿಸಲಾಗಿದೆ.