ಲಾಕ್ಡೌನ್: ತಿರುಪತಿ ದೇವಸ್ಥಾನದ ಕಾರ್ಮಿಕರ ಆತಂಕ ದೂರ
ತಿರುಪತಿ, ಮೇ 4: ಕೊರೊನಾ ಹಾವಳಿಯಿಂದ ಲಾಕ್ಡೌನ್ ಉಂಟಾಗಿ ದೇಶದಲ್ಲಿ ಲಕ್ಷಾಂತರ ಕಾರ್ಮಿಕರ ಕೆಲಸಕ್ಕೆ ಕುತ್ತು ಬಂದಿದೆ. ಜಗತ್ತಿನ ಶ್ರೀಮಂತ ದೇವಾಲಯವಾದ ತಿರುಪತಿ ತಿಮ್ಮಪ್ಪ ದೇವಸ್ಥಾನದ ಕಾರ್ಮಿಕರ ಉದ್ಯೋಗಕ್ಕೂ ಸಂಚಕಾರ ಬಂದಿತ್ತು.
ಆದರೆ ಮಾನವೀಯ ನೆಲೆಯಲ್ಲಿ ಕಾರ್ಮಿಕರ ನೆರವಿಗೆ ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ (ಟಿಟಿಡಿ) ದಾವಿಸಿದೆ. ಕಳೆದ ಶುಕ್ರವಾರ ಲಾಕ್ಡೌನ್ ಪರಿಣಾಮವಾಗಿ 1300 ಟಿಟಿಡಿ ಗುತ್ತಿಗೆ ಕಾರ್ಮಿಕರನ್ನು ಕೆಲಸಕ್ಕೆ ಬರಬೇಡಿ ಎಂದು ಟಿಟಿಡಿ ಹೇಳಿತ್ತು.
ಇದರಿಂದ 1300 ಗುತ್ತಿಗೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವದಾಗಿ ಹೇಳಿದ್ದರು. ಮಾಧ್ಯಮಗಳಲ್ಲಿ ಇದು ದೊಡ್ಡ ಸುದ್ದಿಯಾಗಿತ್ತು. ಇದರಿಂದ ಎಚ್ಚೆತ್ತ ಟಿಟಿಡಿ ಆಡಳಿತ ಮಂಡಳಿ ಕಾರ್ಮಿಕರನ್ನು ಮರು ಕೆಲಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.
ಮಾನವೀಯ ನೆಲೆಯಲ್ಲಿ ಗುತ್ತಿಗೆ ಕಾರ್ಮಿಕರ ಕೆಲಸದ ಅವಧಿಯನ್ನು ಸದ್ಯ ಒಂದು ತಿಂಗಳು ಮುಂದುವರೆಸಲಾಗಿದೆ ಎಂದು ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ ಹೇಳಿದ್ದಾರೆ. ಆಂಧ್ರ ಸರ್ಕಾರ ಕಾರ್ಮಿಕರ ಹಿತ ಕಾಪಾಡುವಂತೆ ಟಿಟಿಡಿಗೆ ಸೂಚಿಸಿತ್ತು. ಆಂಧ್ರಪ್ರದೇಶದಲ್ಲಿ 1584 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 134 ಜನ ಮೃತಪಟ್ಟಿದ್ದಾರೆ.