ತಮಿಳುನಾಡಿನಲ್ಲಿ 23 ಆಸ್ತಿ ಮಾರಾಟಕ್ಕೆ ಮುಂದಾದ ಟಿಟಿಡಿ
ತಿರುಪತಿ, ಮೇ 24 : ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ತಮಿಳುನಾಡಿನಲ್ಲಿರುವ ಕೆಲವು ಆಸ್ತಿಗಳನ್ನು ಹರಾಜು ಮೂಲಕ ಮಾರಾಟ ಮಾಡಲು ಮುಂದಾಗಿದೆ. ದೇವಸ್ಥಾನ ಆರ್ಥಿಕ ನಷ್ಟ ಅನುಭವಿಸುತ್ತಿದೆ ಎಂಬ ಮಾತುಗಳು ಕೆಲವು ದಿನಗಳ ಹಿಂದೆ ಕೇಳಿ ಬಂದಿತ್ತು.
ತಮಿಳುನಾಡಿನ ವಿವಿಧ ಜಿಲ್ಲೆಯಲ್ಲಿ ದೇವಸ್ಥಾನದ ಹೆಸರಿನಲ್ಲಿರುವ 23 ಜಮೀನುಗಳನ್ನು ಮಾರಾಟ ಮಾಡಲಾಗುತ್ತದೆ. ಟಿಟಿಡಿ ಈ ಭೂಮಿಗೆ ಬೆಲೆ ನಿಗದಿ ಮಾಡಿದೆ. ಸಾರ್ವಜನಿಕ ಹರಾಜಿನ ಮೂಲಕ ಆಸ್ತಿ ಮಾರಲು 8 ಅಧಿಕಾರಿಗಳ ಎರಡು ಸಮಿತಿ ರಚನೆ ಮಾಡಲಾಗಿದೆ.
ಬೆಂಗಳೂರಿನಲ್ಲೂ ಸಿಗುತ್ತೆ ತಿರುಪತಿ ಲಡ್ಡು: ಬೆಲೆಯಲ್ಲಿ 50ರಷ್ಟು ಆಫರ್
ವಿ. ದೇವೇಂದ್ರ ರೆಡ್ಡಿ ಈ ಕುರಿತು ಮಾಹಿತಿ ನೀಡಿದ್ದಾರೆ. "ಫೆಬ್ರವರಿಯಲ್ಲಿ ನಡೆದ ಸಭೆಯಲ್ಲಿಯೇ ಆಸ್ತಿ ಮಾರಾಟ ಮಾಡಲು ತೀರ್ಮಾನಿಸಲಾಗಿತ್ತು. ಮನೆ, ನಿವೇಶನ, ಖಾಲಿ ಜಾಗ, ಕೃಷಿ ಭೂಮಿ ಇದರಲ್ಲಿ ಸೇರಿದೆ. ಭಕ್ತರು ಇದನ್ನು ದೇವಾಲಯಕ್ಕೆ ಕಾಣಿಕೆಯಾಗಿ ನೀಡಿದ್ದರು" ಎಂದು ಹೇಳಿದ್ದಾರೆ.
ಭಕ್ತರು ದರ್ಶನಕ್ಕೆ ಬಾರದಿದ್ದರೂ ತಿಮ್ಮಪ್ಪನಿಗೆ ಕಾಣಿಕೆ ತಪ್ಪಿಲ್ಲ!
ವೆಲ್ಲೂರು, ಕಂಚಿಪುರಂ ಮತ್ತು ತಿರುವಲ್ಲೂರು ಜಿಲ್ಲೆಗಳಲ್ಲಿ ಇರುವ ಆಸ್ತಿಗಳು ಇವಾಗಿವೆ. ಇಂತಹ ಸುಮಾರು ಆಸ್ತಿಗಳ ನಿರ್ವಹಣೆಗೆ ಮಂಡಳಿ ಹಣ ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ, ಅವುಗಳನ್ನು ಹರಾಜು ಹಾಕಿ, ಮಾರಾಟ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕೆ? ಇಲ್ಲಿವೆ ಹೊಸ ಮಾರ್ಗಸೂಚಿಗಳು!
ಟಿಟಿಡಿ ಬೋರ್ಡ್ ಮುಖ್ಯಸ್ಥ ವೈ. ವಿ. ಸುಬ್ಬಾರೆಡ್ಡಿ ಮಾತನಾಡಿದ್ದು, "ಆರ್ಥಿಕ ಸಂಕಷ್ಟದ ಕಾರಣಕ್ಕೆ ಆಸ್ತಿ ಮಾರಾಟ ಮಾಡುತ್ತಿಲ್ಲ. ಮೇ ತಿಂಗಳ ವೇತನ ನೀಡಲು ನಮಗೆ ಯಾವುದೇ ಕಷ್ಟವಿಲ್ಲ. ದರ್ಶನ ಇಲ್ಲದಿದ್ದರೂ ಸುಮಾರು 2 ಕೋಟಿಯಷ್ಟು ಕಾಣಿಕೆ ಇ-ಹುಂಡಿ ಮೂಲಕ ಬಂದಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಹಿಂದೆ ಟಿಟಿಡಿ ಆಡಳಿತ ಮಂಡಳಿ ತಮಿಳುನಾಡಿನ ವಿವಿಧ ಜಿಲ್ಲೆಯಲ್ಲಿ ಇರುವ ಶ್ರೀವಾರಿ ಭೂಮಿಯನ್ನು ಮಾರಾಟ ಮಾಡಲು ತೀರ್ಮಾನಿಸಿತ್ತು. ಈಗ ನಿವೇಶನ, ಮನೆ ಸೇರಿದಂತೆ 23 ಆಸ್ತಿಗಳನ್ನು ಮಾರಾಟ ಮಾಡಲು ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಗೆ ಕೊಡಲಾಗಿದೆ.